ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಮುದಾಯ ಸೇವಾ ವಿಭಾಗ, ಯೂತ್ ರೆಡ್ಕ್ರಾಸ್ ಘಟಕವು ದ್ರವ್ಯಗುಣ ವಿಭಾಗದ ಸಹಯೋಗದೊಂದಿಗೆ ಗುರುವಾರ ಏಡ್ಸ್ನ ಬಗ್ಗೆ ಮಾಹಿತಿ - ಜಾಗೃತಿ ಉಪನ್ಯಾಸ ಕಾರ್ಯಕ್ರಮ ಹಾಗೂ ಪೋಸ್ಟರ್ ತಯಾರಿಕೆ ಸ್ಪರ್ಧೆ ಆಯೋಜಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಮಮತಾ ಕೆ.ವಿ. ಅವರು ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವುದು ಕೇವಲ ಸರ್ಕಾರದ ಕರ್ತವ್ಯವಲ್ಲ, ಆಯುಷ್ ವೈದ್ಯರ ಜವಾಬ್ದಾರಿಯೂ ಆಗಿದೆ. ಪ್ರತಿಯೊಬ್ಬ ಆರ್ಯುವೇದ ವೈದ್ಯರು ಕನಿಷ್ಠ ಒಬ್ಬ ವ್ಯಕ್ತಿಗೆ ಏಡ್ಸ್ ಬಗ್ಗೆ ಶಿಕ್ಷಣ ನೀಡಬೇಕು. ಆದ್ದರಿಂದ ಇದು ಸಮುದಾಯಕ್ಕೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಈ ಕ್ಷೇತ್ರದಲ್ಲಿ ಸಂಶೋಧನಾ ಅವಕಾಶಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್ ಪಿ. ಪ್ರಾಸ್ತಾವಿಕ ಭಾಷಣ ಮಾಡಿದರು. ಉಡುಪಿಯ ಜಿಲ್ಲಾ ಏಡ್ಸ್ ನಿಯಂತ್ರಣ ಮತು ತಡೆಗಟ್ಟುವಿಕೆ ವಿಭಾಗದ ಸಂಪನ್ಮೂಲ ವ್ಯಕ್ತಿ ಡಾ. ಮಹಾಬಲೇಶ್ವರ್ ಅವರು ಏಡ್ಸ್ ಜಾಗೃತಿ ಮತ್ತು ತಡೆಗಟ್ಟುವಿಕೆಯ ಬಗ್ಗೆ ಮಾತನಾಡಿದರು.ಆರಂಭಿಕ ಪತ್ತೆ, ಸುರಕ್ಷಿತ ಅಭ್ಯಾಸಗಳು ಮತ್ತು ಸಮುದಾಯದ ಒಳಗೊಳ್ಳುವಿಕೆಯ ಮಹತ್ವವನ್ನು ಅವರು ವಿವರಿಸಿದರು.
ದ್ರವ್ಯಗುಣ ವಿಭಾಗದ ಸಹಪ್ರಾಧ್ಯಾಪಕ ಡಾ. ಮೊಹಮ್ಮದ್ ಫೈಸಲ್ ಅವರು ಏಡ್ಸ್ ನಿರ್ವಹಣೆಯಲ್ಲಿ ಔಷಧೀಯ ಸಸ್ಯಗಳ ಪಾತ್ರವನ್ನು ವಿವರಿಸಿದರು. ಇದು ರೋಗಿಗಳ ಆರೈಕೆಯಲ್ಲಿ ಆರ್ಯುರ್ವೇದದ ಕೊಡುಗೆಯಾಗಿದೆ ಎಂದು ನುಡಿದರು.ಕಾರ್ಯಕ್ರಮದ ಅಂಗವಾಗಿ, ಪೋಸ್ಟರ್ ತಯಾರಿಕೆ ಸ್ಪರ್ಧೆ ನಡೆಸಲಾಯಿತು. ಇದರಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಏಡ್ಸ್ ಜಾಗೃತಿಯ ವಿವಿಧ ಅಂಶಗಳನ್ನು ಸೃಜನಾತ್ಮಕವಾಗಿ ಚಿತ್ರಿಸಿದರು. ಕಲೆಯ ಮೂಲಕ ಜಾಗೃತಿ ಮೂಡಿಸುವಲ್ಲಿ ಅವರ ಪ್ರಯತ್ನಗಳನ್ನು ಗುರುತಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಮುದಾಯ ಸೇವಾ ಮುಖ್ಯಸ್ಥೆ ಡಾ. ವಿದ್ಯಾಲಕ್ಷ್ಮಿ ಕೆ., ಎನ್ಎಸ್ಎಸ್ ಅಧಿಕಾರಿ ಶ್ರೀನಿಧಿ ಧನ್ಯ, ದ್ರವ್ಯಗುಣ ವಿಭಾಗದ ಪ್ರಾಧ್ಯಾಪಕಿ ಡಾ. ಸುಮಾ ವಿ. ಮಲ್ಯ, ಯೂತ್ರೆಡ್ ಕ್ರಾಸ್ ಸದಸ್ಯರಾದ ಡಾ. ಅನಿರುದ್ಧ, ಡಾ. ರಶ್ಮಿ ಎನ್.ಆರ್., ದ್ರವ್ಯಗುಣ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ತೇಜಸ್ವಿ ಐ. ನಾಯ್ಕ್, ಡಾ. ಪೂರ್ಣಿಮಾ ಎ., ಮಾನಸರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪುನೀತ್ ಪಿ. ಇದ್ದರು.