ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದರ ಜೊತೆಗೆ ಸುಂದರ ಸಮಾಜ ನಿರ್ಮಾಣದ ಗುರಿ ಹೊಂದಬೇಕೆಂದು ದೈಹಿಕ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಹೇಳಿದರು.ಸಮೀಪದ ಸಂಗಾನಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಕೌಟುಂಬಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಈ ಪ್ರೌಢಾವಸ್ಥೆಯಲ್ಲಿ ನಾವು ಅರಿಯದೇ ತಂಬಾಕು ಉತ್ಪನ್ನಗಳಿಗೆ ಬಲಿಯಾದರೆ ಮುಂದಿನ ನಮ್ಮ ಜೀವನ ನರಕವಾಗುತ್ತದೆ ಎಂದರು.
ಮನೆಯಲ್ಲಿ ಯಾರೇ ತಂಬಾಕು ಉತ್ಪನ್ನಗಳ ಸೇವನೆ ಮಾಡುತ್ತಿದ್ದರೆ, ಅವರಿಗೆ ಮನವರಿಕೆ ಮಾಡಿ. ನಮ್ಮ ಮನೆಯಲ್ಲಿ ಒಬ್ಬ ಸದಸ್ಯ ತಂಬಾಕು ಸೇದುತ್ತಿದ್ದರೆ, ಮನೆಯ ಎಲ್ಲಾ ಸದಸ್ಯರು ಅದರ ದುಷ್ಪರಿಣಾಮಕ್ಕೆ ಒಳಗಾಗುತ್ತಾರೆ. ಆದ್ದರಿಂದ ಚಂಚಲ ಮನಸ್ಸನ್ನು ಯೋಗ ದಿಂದ ಸ್ಥಿರಗೊಳಿಸಿ ತಮ್ಮ ಸಂಪೂರ್ಣ ಶ್ರಮವನ್ನು ಶಿಕ್ಷಣಕ್ಕಾಗಿ ಮಾತ್ರ ಮೀಸಲಿಡಿ. ಶಿಕ್ಷಣವೇ ನಮ್ಮ ಬಾಳನ್ನು ಬೆಳಗಿಸುವ ಮುಖ್ಯ ಅಸ್ತ್ರವಾಗಿದೆ ಎಂದು ತಿಳಿಸಿದರು.ಶಾಲೆಯ ಮುಖ್ಯೋಪಾಧ್ಯಾಯ ಎಸ್.ಬಿ.ಮಲಬಾದಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸಾರ್ವಜನಿಕ ವಲಯದಲ್ಲಿ ಅತೀ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ಬಡ ಜನತೆಗೆ ಬಡ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಶೈಕ್ಷಣಿಕ ಸೌಲಭ್ಯಗಳನ್ನು ಸಾರ್ವಜನಿಕರು ಸರಿಯಾಗಿ ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ವಲಯ ಮೇಲ್ವಿಚಾರಕ ರೇಣುಕರಾಜ್ ಎಂ.ಕೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಮ್ಮಿಕೊಂಡ ಎಲ್ಲ ಯೋಜನೆಗಳ ಸಂಕ್ಷಿಪ್ತ ಮಾಹಿತಿ ನೀಡಿದರು.ಸೇವಾ ಪ್ರತಿನಿಧಿಯಾದ ಶ್ರೇಯಾನ ನದಾಫ್, ಶಿಕ್ಷಕ ಸಿಬ್ಬಂದಿ ಎಂ.ಡಿ.ಬುದ್ನಿ, ಎಸ್.ಎಸ್.ಸಂರಟ್ಟಿ, ಎನ್.ವೈ.ಪಾಟೀಲ, ಪ್ರಭಾಕರ ಕುಂದರಗಿ, ಬಿ.ಎಂ.ಗಂಡೆ ಉಪಸ್ಥಿತರಿದ್ದರು.ಶಿಕ್ಷಕರಾದ ಹನಮಂತ ಎನ್ ಬ್ಯಾಕೋಡ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.