ಎಚ್.ಎನ್.ನಾಗರಾಜು ಕನ್ನಡಪ್ರಭ ವಾರ್ತೆ ಕೊರಟಗೆರೆ
ಕೊರಟಗೆರೆ ಪಟ್ಟಣಕ್ಕೆ ಬೆಂಗಳೂರು, ತುಮಕೂರು, ಗೌರಿಬಿದನೂರು, ಪಾವಗಡ ಹಾಗೂ ಪಕ್ಕದ ಆಂಧ್ರ ಪ್ರದೇಶಕ್ಕೆ ನಮ್ಮ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಹಾಗೂ ಖಾಸಗಿ ಬಸ್ಗಳು ಪ್ರತಿನಿತ್ಯ ನೂರಾರು ಬಸ್ಗಳು ಸಂಚಾರ ಮಾಡುತ್ತವೆ, ಅದರಲ್ಲಿ ಕೆಲವು ಸಾರಿಗೆ ಬಸ್ಗಳಲ್ಲಿ ವಿಪರೀತ ಹೊಗೆ ಬಿಡುವ ವಾಹನಗಳು ಸಂಚಾರ ಮಾಡುತ್ತಿದ್ದು, ಸರ್ಕಾರದ ಆದೇಶವನ್ನು ಸರ್ಕಾರದ ಅಧೀನದಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಿಗೆ ಅನ್ವಯಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ವಾಹನಗಳ ತಪಾಸಣೆ ಮಾಡುವ ಆರ್ಟಿಒ ಅಧಿಕಾರಿಗಳು ವಾಯು ಮಾಲಿನ್ಯ ತಪಾಸಣೆ ಪ್ರಮಾಣ ಪತ್ರ ಇಲ್ಲದೇ ಇದ್ದರೆ ಚಾಲಕರಿಗೆ ದಂಡ ವಿಧಿಸುತ್ತಾರೆ. ಆದರೆ ವಿಪರೀತ ಹೊಗೆ ಉಗುಳಿ ವಾಯು ಮಾಲಿನ್ಯ ಹೆಚ್ಚಿಸುವ ಸಾರಿಗೆ ಸಂಸ್ಥೆಯ ಬಸ್ಗಳನ್ನ ತಪಾಸಣೆ ಮಾಡದೆ ಹಾಗೂ ಅವುಗಳಿಗೆ ಮಾನದಂಡಗಳ ಪ್ರಕಾರ ಸೂಕ್ತ ನಿರ್ದೇಶನ ನೀಡದೆ ಇರುವುದನ್ನು ಪ್ರಜ್ಞಾವಂತರು ಪ್ರಶ್ನಿಸುವಂತಾಗಿದೆ.
ವಾಹನದಿಂದ ಉಂಟಾಗುವ ಮಾಲಿನ್ಯಕಾರಕಗಳು ನಮ್ಮ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತಿದ್ದು ವಿವಿಧ ರೋಗಗಳಿಗೂ ಕಾರಣವಾಗಿದೆ ಎಂದು ಈಗಾಗಲೇ ವಿಜ್ಞಾನದ ಸಂಶೋಧನೆಯಿಂದ ದೃಢಪಟ್ಟಿದೆ. ಹೀಗಾಗಿ ಈ ವಾಯುಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆಯೇ ಎಂದು ಪರಿಸರ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಆರೋಗ್ಯ ಉತ್ತಮವಾಗಿರಬೇಕಾದರೆ ಉತ್ತಮ ವಾತವರಣ ಹಾಗೂ ಶುದ್ಧ ಗಾಳಿ ಸೇವನೆಯಿಂದ ಅವಶ್ಯವಾಗಿದೆ ಎಂಬುದನ್ನು ಸ್ಥಳೀಯ ಹಾಗೂ ಸಾರಿಗೆ ಅಧಿಕಾರಿಗಳು ಮರೆತಂತಿದೆ.ಈಗಾಗಲೇ ದೇಶದ ರಾಜಧಾನಿ ದೆಹಲಿ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಮಿತಿಮೀರಿ ಜನರ ಉಸಿರಾಟಕ್ಕೂ ಕುತ್ತು ಬಂದಿದೆ. ದೆಹಲಿಯಲ್ಲಂತೂ ಸಾರ್ವಜನಿಕರು ಹೊರಗಡೆ ಬಂದರೆ ಎಲ್ಲಿ ಅನಾರೋಗ್ಯಕ್ಕೆ ಈಡಾಗುತ್ತೇವೆ ಎನ್ನುವಷ್ಟರ ಮಟ್ಟಿಗೆ ಹಾಳಾಗಿದೆ. ಪರಿಸ್ಥಿತಿ ಹೀಗಿರುವಾಗ ವಾಯುಮಾಲಿನ್ಯವನ್ನು ತಡೆಯುವುದು ನಮ್ಮ ಜವಾಬ್ದಾರಿ ಎಂದು ಅಧಿಕಾರಿಗಳು ತಿಳಿದು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಪರಿಸರ ಕಾಳಜಿ ಮಾಡುವುದು ಯಾವಾಗ ಎನ್ನುವುದು ಪರಿಸರ ಪ್ರಿಯರ ಪ್ರಶ್ನೆಯಾಗಿದೆ.