ಪ್ರೇಮ ವೈಫಲ್ಯದಿಂದ ಪಂಜಾಬಲ್ಲಿ ಆಕಾಂಕ್ಷ ಆತ್ಮಹತ್ಯೆ

KannadaprabhaNewsNetwork | Published : May 20, 2025 1:05 AM
ಧರ್ಮಸ್ಥಳ ಗ್ರಾಮದ ಬೊಳಿಯರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂ ದೇವಿ ದಂಪತಿ ಎರಡನೇ ಪುತ್ರಿ ಏರೋಸ್ಪೇಸ್ ಎಂಜಿನಿಯರ್ ಆಗಿ ದೆಹಲಿಯಲ್ಲಿ ಉದ್ಯೋಗಿಯಾಗಿದ್ದ ಆಕಾಂಕ್ಷಾ ಎಸ್.ನಾಯರ್ (22) ನಿಗೂಢ ಸಾವಿನ ಕಾರಣ ಬಯಲಾಗಿದ್ದು, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
Follow Us

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಧರ್ಮಸ್ಥಳ ಗ್ರಾಮದ ಬೊಳಿಯರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂ ದೇವಿ ದಂಪತಿ ಎರಡನೇ ಪುತ್ರಿ ಏರೋಸ್ಪೇಸ್ ಎಂಜಿನಿಯರ್ ಆಗಿ ದೆಹಲಿಯಲ್ಲಿ ಉದ್ಯೋಗಿಯಾಗಿದ್ದ ಆಕಾಂಕ್ಷಾ ಎಸ್.ನಾಯರ್ (22) ನಿಗೂಢ ಸಾವಿನ ಕಾರಣ ಬಯಲಾಗಿದ್ದು, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಪಂಜಾಬ್ ಜಿಲ್ಲೆಯ ಪಗ್ವಾಡದಲ್ಲಿರುವ ಎಲ್.ಪಿ.ಯು (ಲವ್ಲಿ ಪ್ರೊಫೆಶನಲ್‌ ಯೂನಿವರ್ಸಿಟಿ) ಮೆಂಟರ್ ಪ್ರೊಫೆಸರ್, ಎರಡು ಮಕ್ಕಳ ತಂದೆ ಕೇರಳದ ಕೊಟ್ಟಾಯಂ ನಿವಾಸಿ ಬಿಜಿಲ್ ಮ್ಯಾಥ್ಯೂ (45) ಮತ್ತು ಆಕಾಂಕ್ಷಾ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಆಕಾಂಕ್ಷಾಳ ಕೆಲವೊಂದು ನಡವಳಿಕೆಯಿಂದ ಬಿಜಿಲ್ ಮ್ಯಾಥ್ಯೂ ದೂರವಾಗಿದ್ದ.

ಇದೇ ವಿಚಾರದಲ್ಲಿ ದೆಹಲಿಯಿಂದ ಪಂಜಾಬ್‌ನ ಪಾಗ್ವಡಕ್ಕೆ ಮೇ 16ರಂದು ಬಂದು ಮ್ಯಾಥ್ಯೂ ಮನೆಗೆ ಹೋಗಿ ನಿನ್ನ ಹೆಂಡತಿ ಮಕ್ಕಳಿಬ್ಬರನ್ನು ಬಿಟ್ಟು ನನ್ನ ಜೊತೆ ಬಂದು ಮದುವೆಯಾಗಬೇಕೆಂದು ಬೇಡಿಕೆ ಇಟ್ಟಿದ್ದಳು. ಇದನ್ನು ಮ್ಯಾಥ್ಯೂ ಕ್ಯಾರೇ ಮಾಡದೆ ಪ್ರೀತಿಯನ್ನು ಕೈ ಚೆಲ್ಲಿದ್ದಾನೆ. ಇದರಿಂದ ನೊಂದ ಆಕಾಂಕ್ಷಾ ಮೇ 17ರಂದು ಬೆಳಗ್ಗೆ 11ಕ್ಕೆ ಕೇರಳ ಮೂಲದ ಸ್ನೇಹಿತನ ಜೊತೆ ಬೈಕ್ ಮೂಲಕ ಕಾಲೇಜಿಗೆ ಹೋಗಿ ಮ್ಯಾಥ್ಯೂಗೆ ‘ನಾನು ಸಾಯುತ್ತೇನೆ’ ಎಂದು ಮೆಸೇಜ್ಕ ಮಾಡಿ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಪಂಜಾಬ್ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ‌.

ಪ್ರೊಫೆಸರ್‌ ವಿರುದ್ಧ ಪ್ರಕರಣ ದಾಖಲು:

ಮೃತ ಆಕಾಂಕ್ಷಾ ಸಹೋದರ ಆಕಾಶ್ ನಾಯರ್ ಜಲಂಧರ್ ಪೊಲೀಸ್ ಠಾಣೆಯಲ್ಲಿ ಮೇ 18ರಂದು ಸಂಜೆ ಎಲ್.ಪಿ.ಯು ಕಾಲೇಜಿನ ಪ್ರೊಫೆಸರ್ ಬಿಜಿಲ್‌ ಮ್ಯಾಥ್ಯೂ (45) ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕುರಿತು ದೂರು ನೀಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪ್ರೊಫೆಸರ್ ವಿರುದ್ಧ ತನಿಖೆ ನಡೆಸಲಿದ್ದಾರೆ.ಮೊಬೈಲ್‌ನಲ್ಲಿ ಡೆತ್ ನೋಟ್ ಪತ್ತೆ

ಆಕಾಂಕ್ಷಾ ಸಾವಿಗೂ ಮುನ್ನ ತನ್ನ ಮೊಬೈಲ್‌ನಲ್ಲಿ ಮೇ17ರಂದು ವಾಟ್ಸ್‌ಆ್ಯಪ್‌ನಲ್ಲಿ ಪ್ರೊಫೆಸರ್ ಬಿಜಿಲ್ ಮ್ಯಾಥ್ಯೂ ಮೊಬೈಲ್‌ಗೆ ಕಳುಹಿಸಿದ ಡೆತ್ ನೋಟ್ ಪತ್ತೆಯಾಗಿದ್ದು, ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸರ್ಟಿಫಿಕೇಟ್ ತರಲು ಅಂತ ಹೇಳಿದ್ದಳು:

ಆಕಾಂಕ್ಷ ಮನೆಯವರಿಗೆ ಕರೆ ಮಾಡಿ ನಾನು ದೆಹಲಿಯಿಂದ ಎಲ್.ಪಿ.ಯು. ಕಾಲೇಜಿಗೆ ಸರ್ಟಿಫಿಕೆಟ್ ತರಲು ಹೋಗುತ್ತಿರುವುದಾಗಿ ಹೇಳಿ ತಾಯಿಯಿಂದ ₹2000 ಬೇಕೆಂದು ಗೂಗಲ್ ಪೇ ಮಾಡಿಸಿದ್ದಳು. ಬಳಿಕ ಕರೆ ಸ್ವೀಕರಿಸದೆ ಮೆಸೇಜ್ ಮಾಡಿ ಕಾಲೇಜಿನಲ್ಲಿ ಇರುವುದಾಗಿ ಹೇಳಿದ್ದರು. ಕೊನೆಗೆ ಆತ್ಮಹತ್ಯೆ ಸುದ್ದಿ ಮನೆಯವರಿಗೆ ಪೊಲೀಸರಿಂದ ತಲುಪಿದೆ.

--====ಸಾವಿನ ತನಿಖೆಗೆ ಒತ್ತಡ: ಗುಂಡೂರಾವ್‌

ಮಂಗಳೂರು: ಆಕಾಂಕ್ಷಾ ನಿಗೂಢ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸುವಂತೆ ಪಂಜಾಬ್ ಸರ್ಕಾರವನ್ನು ಒತ್ತಾಯಿಸುವುದಾಗಿ ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದ್ದಾರೆ.

ಆಕಾಂಕ್ಷಾ ಪಂಜಾಬ್‌ನಲ್ಲಿ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಇದೊಂದು ಅಸಹಜ ಸಾವು ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಉಪನ್ಯಾಸಕ ಮ್ಯಾಥ್ಯೂ ಕಿರುಕುಳದಿಂದ ಆಕಾಂಕ್ಷಾ ಸಾವಿಗೀಡಾಗಿದ್ದಾರೆ ಎಂದು ಅವರ ಕುಟುಂಬ ವರ್ಗದವರು ಆರೋಪಿಸಿದ್ದಾರೆ. ಪ್ರಕರಣದ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿ ಜತೆ ಚರ್ಚೆ ನಡೆಸಿದ್ದೇನೆ ಎಂದು ಅವರು ಹೇಳಿದ್ದಾರೆ.