ಬೀದರ್: ಎಲ್ಲ ಇಲಾಖೆಯ ಅಧಿಕಾರಿಗಳು ಮಕ್ಕಳ ಹಕ್ಕು ಉಲ್ಲಂಘನೆಯಾದಲ್ಲಿ ತಕ್ಷಣವೇ ಸ್ಪಂದಿಸಿ ಮಕ್ಕಳ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಕರೆ ನೀಡಿದರು.ಜಿ.ಪಂ ಸಭಾಂಗಣದಲ್ಲಿಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಬೆಂಗಳೂರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಡಳಿ, ಮಕ್ಕಳ ಅಭಿವೃದ್ಧಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಹಿಳಾ ರಕ್ಷಣಾ ಘಟಕದ ಆಶ್ರಯದಿಂದ ಮಕ್ಕಳ ಹಕ್ಕು ರಕ್ಷಣೆ ಹಿನ್ನೆಲೆಯಲ್ಲಿ ಆಯೋಜಿಸಿದ ಮಕ್ಕಳೊಂದಿಗೆ ಸಂವಾದ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಕ್ಕಳ ಹಕ್ಕು ರಕ್ಷಣೆ ಹಾಗೂ ಉಲ್ಲಂಘನೆ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿ ಕೊಳ್ಳಲಾಗಿದೆ. ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದ ಎಲ್ಲ ಅಧಿಕಾರಿಗಳು ಮಕ್ಕಳ ಹಕ್ಕುಗಳ ರಕ್ಷಣೆಗೆ ಬದ್ಧರಾಗಬೇಕೆಂದರು.ಆಯೊಗವು ಮಕ್ಕಳ ರಕ್ಷಣೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉಲ್ಲಂಘನೆ ಕಂಡು ಬಂದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೋಸಂಬೆ ಹೇಳಿದರು. ಪ್ರತಿ ವಸತಿ ಶಾಲೆಯಲ್ಲಿ ಮಕ್ಕಳ ಸಲಹಾ ಪೆಟ್ಟಿಗೆ ತೆರೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಬನಸೋಡೆ ಮಾತನಾಡಿ, ಸಂವಿಧಾನದಲ್ಲಿ ಮಕ್ಕಳ ರಕ್ಷಣೆ ತಿಳಿಸಲಾಗಿ ಕಾನೂನು ಸೇವೆಯು ಸಹ ಮಕ್ಕಳ ಹಕ್ಕು ಉಲ್ಲಂಘನೆ ಹಾಗೂ ರಕ್ಷಣೆಗೆ ಕ್ರಮ ವಹಿಸಲಾಗಿದೆ ಎಂದರು.ಮಕ್ಕಳ ಪರವಾಗಿ ಅನೇಕ ಕಾನೂನುಗಳಿದ್ದರೂ, ರಕ್ಷಣಾ ಘಟಕಗಳಿದ್ದರೂ ಸಹ ಅನೇಕ ಪ್ರಕರಣಗಳು ದಾಖಲಾಗುತ್ತಿವೆ. ಬೀದರ ಜಿಲ್ಲೆಯಲ್ಲಿ ಅನೇಕ ಬಾಲ್ಯವಿವಾಹ ತಡೆಯ ಲಾಗಿದೆ. ಅನೇಕ ಕಡೆ ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದರು.ಮಕ್ಕಳೊಂದಿಗೆ ಜರುಗಿದ ಸಂವಾದಲ್ಲಿ ವಿದ್ಯಾರ್ಥಿಗಳು ಹೇಳಿದ ಸಮಸ್ಯೆಗಳಿಗೆ ಸ್ಥಳದಲ್ಲೇ ಬಗೆಹರಿಸಲಾಯಿತು. ಗಾದಗಿ ಶಾಲೆಯ ಸೋಹೇಲ್ ಎಂಬ ವಿದ್ಯಾರ್ಥಿ 1098 ಸಹಾಯವಾಣಿಗೆ ಕರೆ ಮಾಡಿದರೂ ತಕ್ಷಣ ಪ್ರತಿಕ್ರಿಯೆ ನೀಡಲಿಲ್ಲ ಎಂದು ತಿಳಿಸಿದ. ಕೌಡಗಾಂವ ಶಾಲೆಯ ವಿದ್ಯಾರ್ಥಿ ತಮ್ಮ ಶಾಲೆಯ ಹತ್ತಿರ ಬಸ್ ನಿಲ್ಲಿಸದ ಕಾರಣಕ್ಕೆ 1098ಕ್ಕೆ ಕರೆ ಮಾಡಿದಾಗ ನೀವು ಬಸ್ ಡಿಪೋಗೆ ಹೋಗಿ ತಿಳಿಸಿರಿ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಕೋಸಂಬೆ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಶಾಲೆ ಹತ್ತಿರ ಬಸ್ ನಿಲ್ಲಿಸುವಂತೆ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗೆ ಸೂಚಿಸಿದರು. ಧನ್ನೂರಿನ ವಿಜಯಲಕ್ಷ್ಮೀ ಬಾಲ್ಯವಿವಾಹ ಹಾಗೂ ಲಿಂಗ ತಾರತಮ್ಯ ಬಗ್ಗೆ ಪ್ರಶ್ನೆ ಕೇಳಿ ತನಿಖಾಧಿಕಾರಿಗಳು ಸರಿಯಾಗಿ ಕಾರ್ಯ ಮಾಡದೇ ಇರುವ ಬಗ್ಗೆ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷರಾದ ರಜಿಯಾ ಬಳಬಟ್ಟಿ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸಲೀಂ ಪಾಶಾ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೊಗದ ಮಾಜಿ ಸದಸ್ಯ ರಾಘವೇಂದ್ರ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯರು ಇಲಾಖೆಯ ಗೌರಿಶಂಕರ ಹಾಗೂ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ದೇಶದ ಜನಸಂಖ್ಯೆಯಲ್ಲಿ ಶೇ.40ರಷ್ಟು ಮಕ್ಕಳುದೇಶದಲ್ಲಿ ಜನಸಂಖ್ಯೆಯ ಒಟ್ಟು ಶೇ.40 ರಷ್ಟು ಮಕ್ಕಳಿದ್ದಾರೆ. ಪ್ರತಿ ಮಗುವಿನ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳ ರಕ್ಷಣೆಗಾಗಿ 12 ವಿವಿಧ ಕಾಯ್ದೆಗಳಿವೆ. ಪ್ರತಿ ಮಗುವಿನ ಮಕ್ಕಳ ಬಾಲ್ಯ ಜೀವನ ಸುಖ, ಸಂತೋಷ, ಗೌರವದಿಂದ ಜೀವಿಸುವುದು ಮಕ್ಕಳ ಹಕ್ಕು ಆಗಿದೆ. ಆದರೂ ಸಹ ಹಲವೆಡೆ ಮಕ್ಕಳ ಹಕ್ಕು ಉಲ್ಲಂಘನೆ ಯಾಗುತ್ತಿ ದೆ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪ್ರಕರಣಗಳು ಈಗಲೂ ಕಾಣುತ್ತೇವೆ. ವರದಿಯೊಂದರ ಪ್ರಕಾರ ದೇಶದಲ್ಲಿ ಒಂದು ನಿಮಿಷಕ್ಕೊಂದು ಬಾಲ್ಯ ವಿವಾಹ ಆಗುತ್ತಿವೆ. 1.5 ಲಕ್ಷ ಬಾಲಕಿ ಗರ್ಭಿಣಿಯರ ಸಂಖ್ಯೆ ಈ ವರ್ಷ ದಾಖಲಾಗಿವೆ. 59 ಸಾವಿರ ಬಾಲ್ಯವಿವಾಹ ನಿಷೇಧ ಅಧಿಕಾರಿಗಳು ಇದ್ದರೂ ಸಹ ಇಂತಹ ಅನಿಷ್ಟ ಪದ್ಧತಿಗಳು ಜಾರಿಯಲ್ಲಿರುವುದು ಶೋಚನೀಯ ಎಂದು ಕಳವಳ ವ್ಯಕ್ತಪಡಿಸಿದರು.