ಪಂಪ್ಡ್ ಸ್ಟೋರೇಜ್ ವಿರುದ್ಧ ಅಹೋರಾತ್ರಿ ಧರಣಿ

KannadaprabhaNewsNetwork |  
Published : Mar 25, 2026, 01:30 AM IST
ಪೊಟೋ: 24ಎಸ್‌ಎಂಜಿಕೆಪಿ09ಶಿವಮೊಗ್ಗದ ನಗರದ ನೆಹರು ಕ್ರೀಡಾಂಗಣದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಮಂಗಳವಾರದಿಂದ ಅಹೋರಾತ್ರಿ ಧರಣಿ ಆರಂಭಿಸಲಾಯಿತು.  | Kannada Prabha

ಸಾರಾಂಶ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಹಾಗೂ ವಿವಿಧ ಪರಿಸರ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರದಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಅಹೋರಾತ್ರಿ ಧರಣಿ ಆರಂಭವಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಹಾಗೂ ವಿವಿಧ ಪರಿಸರ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರದಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಅಹೋರಾತ್ರಿ ಧರಣಿ ಆರಂಭವಾಗಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಅವರು, ನಮಗಾಗಿ ಈ ಹೋರಾಟಕ್ಕೆ ಸೇರಿಲ್ಲ. ಸೇರಿದ್ದು ಮುಂದಿನ ಭವಿಷ್ಯಕ್ಕಾಗಿ. ನಮ್ಮಲ್ಲಿ ಒಗ್ಗಟ್ಟಾಗುವುದೇ ಬಹಳ ಕಷ್ಟ. ಶರಾವತಿ ಪಂಪ್ಡ್ ಸ್ಟೋರೇಜ್ ಆಗಬಾರದು. ಪ್ರಕೃತಿಗೆ ವಿರುದ್ಧವಾದ ಕಾರ್ಯವಾಗಿರುವುದರಿಂದ ಇದನ್ನು ವಿರೋಧಿಸುತ್ತಿದ್ದೇವೆ ಎಂದರು.

ಜೀವ ಜಂತುಗಳಿಗೆ ಹಕ್ಕನ್ನು ನೀಡಿದ ಸಂವಿಧಾನ ನಮ್ಮದು. ಜೀವ ಸಂಕುಲಕ್ಕೆ ಕುತ್ತು ತರುವ ಯೋಜನೆ ಜಾರಿಗೆ ನಮ್ಮ ವಿರೋಧವಿದೆ. ಮೂಕ ಪ್ರಾಣಿಗಳ ಧ್ವನಿಗೆ ನಾವು ಧ್ವನಿಗೂಡಿಸಿದರೆ ಭಗವಂತ ನಮ್ಮ ಹೋರಾಟಕ್ಕೆ ಸಹಕರಿಸುತ್ತಾನೆ ಎಂದ ಅವರು, ಶರಾವತಿಗೆ ಈಗಾಗಲೇ 7 ಡ್ಯಾಂ ಕಟ್ಟಲಾಗಿದೆ. ಈ ಪಂಪ್ಡ್ ಸ್ಟೋರೇಜ್ ಪೂರ್ವದಿಂದ ಪಶ್ಚಿಮಕ್ಕೆ ಹರಿದು ಸಮುದ್ರಕ್ಕೆ ಸೇರುವ ನದಿ ನೀರನ್ನು ತಿರುಗಿಸಿ ಪೂರ್ವ ದಿಕ್ಕಿಗೆ ನದಿಯ ನೀರನ್ನ ಹರಿಸಲಾಗುತ್ತಿದೆ. ಇದು ಪ್ರಕೃತಿ ವಿರೋಧವಾಗಿದೆ. ಬೇಗೋಡಿ ಬಳಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ನೀರನ್ನು ವಿರುದ್ಧ ದಿಕ್ಕಿನಲ್ಲಿ ಹರಿಸಲಾಗುತ್ತದೆ. ಸುರಂಗ ಮಾತ್ರ ಮಾಡಲಾಗುತ್ತದೆ ಎಂದಿದ್ದಾರೆ. ಎಲ್ಲಾ ರೀತಿಯ ಪರೀಕ್ಷೆ ನಡೆಸಲಾಗಿದೆ ಎಂದರು.

ಎಲ್ಲಾ ಸರ್ಕಾರಗಳೂ ಒಂದೇ. ಅಧಿಕಾರಕ್ಕೆ ಬರುವ ಮುನ್ನ ಒಂದು ತರ. ಅಧಿಕಾರಕ್ಕೆ ಬಂದ ನಂತರ ಇನ್ನೊಂದು ತರವಾಗುತ್ತವೆ. 2001ರಲ್ಲಿ ಪಂಪ್ಡ್ ಸ್ಟೋರೇಜ್ ಆರಂಭವಾಗುತ್ತದೆ. 2022 ಕೋಟಿ ರು.ವೆಚ್ಚದಲ್ಲಿ ಯೋಜನೆ ಆರಂಭವಾಗುತ್ತದೆ. 2008ರಲ್ಲಿ ಮೊದಲ ಬಾರಿಗೆ ಪ್ರಸ್ತಾವನೆಗೆ ಮೊದಲ ವಿರೋಧ ವ್ಯಕ್ತಪಡಿಸಿದ್ದೆ. ಅಲ್ಲಿಗೆ ಕೈ ಬಿಡಲಾಗಿತ್ತು. 2011ರಲ್ಲಿ ಪುನಃ ಪರಿಶೀಲನೆಗೆ ಈ ಯೋಜನೆ ಬರುತ್ತದೆ. 2017ಕ್ಕೆ ಮತ್ತೆ ಜಾರಿಗೆ ಬರಲಿದೆ ಎಂಬ ಪ್ರಸ್ತಾವನೆ ಬಂತು. 2023ಕ್ಕೆ 10450 ಕೋಟಿಗೆ ಜಾರಿಯಾಗಿತ್ತು. ಆಗಲೇ ಶೇ.11 ಹಣ ಯಾರಿಗೆ ಸೇರಬೇಕೋ ಅವರಿಗೆ ಸೇರಿಯಾಗಿದೆ. ಇದನ್ನ ತಡೆಯಲಾಗುವುದಿಲ್ಲ ಎಂದರು.

ಇಚ್ಛಾಶಕ್ತಿ, ಜ್ಞಾನಶಕ್ತಿ ರಾಜಕೀಯ ಶಕ್ತಿಯ ಕೊರತೆ ಇದೆ. ನಮ್ಮಲ್ಲಿಯೂ ಒಗ್ಗಟ್ಟಿನ ಮಂತ್ರ ಕಾಣುತ್ತಿಲ್ಲ. ಈ ಮೂರು ಶಕ್ತಿ ಒಂದಾಗಬೇಕು, ಒಂದಾದರೆ ಎಂತಹ ಹೋರಾಟವೂ ವಿಫಲವಾಗುವುದಿಲ್ಲ ಎಂದರು.

ಈ ಯೋಜನೆಯಿಂದ 2000 ಮೆಗಾವ್ಯಾಟ್‌ಗೆ 2500 ರು. ಮೆಗಾವ್ಯಾಟ್ ಖರ್ಚು ಮಾಡಲಾಗುತ್ತದೆ. ಈ ಬಜೆಟನ್ನು ಹಣಕಾಸು ಸಂಸ್ಥೆ ತಿರಸ್ಕರಿಸಿದೆ. ಸರ್ಕಾರ ಹಣ ಕೊಡದಿದ್ದರೂ ಜರ್ಮನ್ ದೇಶದಿಂದ ತರಲಾಗುವುದು ಎಂದು ಸರ್ಕಾರ ಹೇಳಿದೆ. ಈ ಹಠದ ಹಿಂದೆ ಯಾರ ಕೈವಾಡವಿದೆ ಗೊತ್ತಿಲ್ಲ. ಪವನ ವಿದ್ಯುತ್ ಸೇರಿಸಿಕೊಂಡು ಮಾಡಲಾಗುತ್ತಿದೆ ಎಂದು ಹೇಳಲಾಯಿತು. ಇದನ್ನ ಮಾಡಲಿ ಪಂಪ್ಡ್ ಸ್ಟೋರೇಜ್ ಮತ್ತೆ ಯಾಕೆ ಎಂದು ಪ್ರಶ್ನಿಸಿದರು.

ದೀಪಾವಳಿ ಪಟಾಕಿ ಹೊಡೆಯಲು ಪರಿಸರ ಕಾಳಜಿ ತೋರುವ ಸರ್ಕಾರ 18 ಸಾವಿರ ಮೆಟ್ರಿಕ್ ಟನ್ ಸ್ಪೋಟಕಗಳನ್ನ ಬಳಸಲು ಬಿಡಲಾಗುತ್ತಿದೆ. ಇದು ಸರ್ಕಾರದ ಕಾಳಜಿಯಾಗಿದೆ ಎಂದು ವ್ಯಂಗ್ಯವಾಡಿದರು. ಕೆಪಿಸಿಎಲ್ ವಿದ್ಯುತ್ ವಿತರಣೆ ಹೇಗೆ ಎಂದು ಸಹ ಹೇಳಿಲ್ಲ. ವಿತರಣೆಯಲ್ಲಿ ಲಕ್ಷಾಂತರ ಮರಗಳು, ಜಾಗ ಹೋಗಲಿದೆ ಎಂದರು.

ಮಾ.29ರಂದು ಬಂಗಾರಮಕ್ಕಿಯಲ್ಲಿ ಪಶ್ಚಿಮಘಟ್ಟದ ರಕ್ಷಣೆಗೆ ಜನಾಂದೋಲನ , ಸಹಿಸಂಗ್ರಹ, ಸಹ್ಯಾದ್ರಿ ಜ್ಞಾನ ಹಾಗೂ ಸಂರಕ್ಷಣಾ ಸಮಾವೇಶ ನಡೆಯಲಿದ್ದು, ಶರಾವತಿ ಪಂಪ್ಡ್ ಸ್ಟೋರೇಜ್ ಯೊಜನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬೃಹತ್ ಆಂದೋಲನ ಹಮ್ಮಿಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಯೋಜನೆಯಾಗಲು ಬಿಡುವುದಿಲ್ಲ. ನನ್ನ ಹೆಣದ ಮೇಲೆ ಈ ಯೋಜನೆ ಆಗಬೇಕು ಎಂದು ಹಿಂದೆ ಹೇಳಿದ್ದೆ. ಈಗಲೂ ಅದೇ ಮಾತನ್ನು ಹೇಳುತ್ತೇನೆ ಎಂದರು.

ಮಾಜಿ ಶಾಸಕ ಮಹಿಮಾಪಟೇಲ್ ಮಾತನಾಡಿ, ಪಶ್ಚಿಮಘಟ್ಟಗಳನ್ನು ಸಂರಕ್ಷಿಸುವ ಜವಾಬ್ದಾರಿ ದೇಶದ ಎಲ್ಲಾ ನಾಗರೀಕರ ಮೇಲಿದೆ. ಪರಿಸರದ ಮೇಲೆ ಆಗುತ್ತಿರುವ ಅವ್ಯಾಹತ ದಾಳಿಯನ್ನು ತಡೆಯಬೇಕಾಗಿದೆ. ಪ್ರಜ್ಞೆ ಇರುವವರು ಪರಿಸರ ನಾಶಕ್ಕೆ ಮುಂದಾಗುವುದಿಲ್ಲ. ನಮಗೆ ಪ್ರಜ್ಞೆ ಇರುವ ಸರ್ಕಾರ ಬೇಕಾಗಿದೆ. ಅದಕ್ಕಾಗಿ ನಾವು ಈ ಸರ್ಕಾರದ ನಿಲುವನ್ನು ವಿರೋಧಿಸಿ ಈ ಕಾರ್ಯಕ್ಕೆ ಬೆಂಬಲಿಸುತ್ತಿದ್ದೇವೆ ಎಂದರು.

ಮಾಜಿ ಶಾಸಕ, ಆಂದೋಲನದ ಮುಖಂಡ ಎ.ಟಿ.ರಾಮಸ್ವಾಮಿ ಮಾತನಾಡಿ, 24 ಗಂಟೆಗಳ ಈ ಸತ್ಯಾಗ್ರಹ ಕೇವಲ ಸಾಂಕೇತಿಕ. ವಿಶ್ವದ ಎಂಟು ಪಾರಂಪರಿಕ ತಾಣಗಳಲ್ಲಿ ಪಶ್ಚಿಮ ಘಟ್ಟವು ಒಂದು ಎಂದು ಯುನೆಸ್ಕೋ ಹೇಳಿದೆ. ಇದನ್ನು ಸಂರಕ್ಷಿಸಲೇಬೇಕು. ಈಗಾಗಲೇ ಕಳೆದ ಒಂದು ವಾರದಲ್ಲಿ ಪರಿಸರದ ಮೇಲಿನ ದೌರ್ಜನ್ಯದ ಪರಿಣಾಮ ನಾವು ಅನುಭವಿಸಿದ್ದೇವೆ. ಹವಾಮಾನದ ವೈಪರಿತ್ಯದಿಂದಾಗಿ ವಿಪರೀತ ತಾಪಮಾನ ಮತ್ತು ಆಲಿಕಲ್ಲು ಮಳೆಯನ್ನು ನೋಡಿದ್ದೇವೆ. ಪ್ರಕೃತಿ ತಾಳಮೇಳ ಕಳೆದುಕೊಂಡಿದೆ. ಇದು ಪರಿಸರ ನಾಶ ಉತ್ತುಂಗಕ್ಕೆ ಹೋಗಿದ್ದೇ ಕಾರಣ. ಈ ಯೋಜನೆಯಿಂದ 64 ಸಾವಿರ ಮರಗಳ ಮಾರಣಹೋಮ ಆಗಲಿದೆ ಎಂದರು.

ಪ್ರಮುಖರಾದ ಪ್ರೊ.ಬಿ.ಎಂ.ಕುಮಾರಸ್ವಾಮಿ, ಕೆ.ಈ. ಕಾಂತೇಶ್ ,ಡಾ.ಶ್ರೀಪತಿ, ಜನಾರ್ಧನ್ ಪೈ, ಎಸ್.ಬಿ.ಅಶೋಕ್‌ಗಾಂಧಿ, ಶ್ರೀಕಾಂತ್, ನವ್ಯಶ್ರೀ ನಾಗೇಶ್, ಜಾದವ್, ಈ. ವಿಶ್ವಾಸ್, ದುಮ್ಮಳ್ಳಿ ಶಿವಮ್ಮ ಮತ್ತು ಹುಬ್ಬಳ್ಳಿಯಿಂದ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದ ಅಕ್ಕ ಫೌಂಡೇಷನ್ ಟ್ರಸ್ಟ್‌ನ ವೀರಪ್ಪ ಅರಕೇರಿ, ಕವಿತಾ ಎ.ಎಸ್., ವಿಜಯಲಕ್ಷ್ಮೀ, ಡಾ. ರಾಜಶೇಖರ್, ಡಾ.ಮಿಥಲಗಿ ಮೊದಲಾದವರಿದ್ದರು.

----

ಈಗಾಗಲೇ ಹಲವು ಭಾರಿ ಮನವಿ ನೀಡಿದ್ದೇವೆ. ಇದಕ್ಕೊಂದು ಅಂತ್ಯ ಕಾಣಿಸುತ್ತೇವೆ. ಯಾವುದೇ ಕಾರಣಕ್ಕೂ ಯೋಜನೆಯಾಗಲು ಬಿಡುವುದಿಲ್ಲ. ರಾಜ್ಯದ ಜನ ಮತ್ತು ವಿವಿಧ ಸಂಘಟನೆಗಳು ನಮ್ಮಜೊತೆ ಕೈಜೋಡಿಸಿದ್ದಾರೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಯೋಜನೆ ಕೈಬಿಡಬೇಕು .

-ಕೆ.ಎಸ್. ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಡೆದ ಮನಸ್ಸನ್ನು ಬೆಸೆಯುವುದೇ ನಿಜವಾದ ಧರ್ಮ: ರಂಭಾಪುರಿ ಜಗದ್ಗುರು ಶ್ರೀಗಳು
ಪಂಚಮಸಾಲಿ ನೊಗ ಹೊತ್ತಿದ್ದೇನೆ, ಮುಂದೆಯೂ ಹೊರುತ್ತೇನೆ