ಕನ್ನಡಪ್ರಭ ವಾರ್ತೆ ದಾಬಸ್ಪೇಟೆ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಚುನಾವಣೆಯ ಜವಾಬ್ದಾರಿ ಹೊತ್ತಿರುವ ತಾಲೂಕು ಆಡಳಿತ ಮತ್ತು ಚುನಾವಣಾ ಆಯೋಗ ಸಕಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, 276 ಮತಕೇಂದ್ರಗಳಿಗೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಕ್ಷೇತ್ರದ 276 ಮತಕೇಂದ್ರಗಳಿಗೆ ಸಿಬ್ಬಂದಿಯನ್ನು ಕರೆದೊಯ್ಯಲು 40 ಸರಕಾರಿ ಬಸ್ಸುಗಳು, 9 ಮಿನಿ ಬಸ್ಸುಗಳು , 30 ಜೀಪುಗಳನ್ನು ಮತ್ತು ಜಾಗೃತ ಚುನಾವಣಾಧಿಕಾರಿಗಳು ಸೇರಿ ಚುನಾವಣೆ ಕರ್ತವ್ಯ ನಿರ್ವಸುವ ಇತರೆ ಅಧಿಕಾರಿಗಳಿಗಾಗಿ ಸುಮಾರು 25ಕ್ಕೂ ಹೆಚ್ಚು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿ ತಾವು ಪಡೆದ ಮತ ಯಂತ್ರಗಳನ್ನು ಮತ್ತು ಇತರೆ ಸರಕುಗಳನ್ನು ಪೊಲೀಸ್ ಭಿಗಿ ಭದ್ರತೆಯಲ್ಲಿ ಮತಕೇಂದ್ರಗಳಿಗೆ ಕೊಂಡೊಯ್ದರು.
ಬಿಗಿಭದ್ರತೆ:ತಾಲೂಕಿನಲ್ಲಿ ನಡೆಯುವ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಸ್ಥಳೀಯ ಪೊಲೀಸ್ ಇಲಾಖೆ ಸಜ್ಜಾಗಿದ್ದು, ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ ಇಬ್ಬರು ಡಿವೈಎಸ್ಪಿ ಸೇರಿ 16 ಇನ್ಸ್ಪೆಕ್ಟರ್ಗಳು, 22 ಪಿಎಸ್ಐ, ಕೇರಳ ಪಡೆ, ಹೋಮ್ ಗಾರ್ಡ್ ಸೇರಿದಂತೆ 384 ಪೊಲೀಸ್ ಸಿಬ್ಬಂದಿಯನ್ನು ಚುನಾವಣೆ ಭದ್ರತೆಯ ಹಿತದೃಷ್ಟಿಯಿಂದ ನಿಯೋಜಿಸಲಾಗಿದೆ. ಗುರುವಾರ ರಾತ್ರಿ 8 ಹಳ್ಳಿಗಳಿಗೆ ಒಬ್ಬರು ಪಿಎಸ್ಐಗಳನ್ನು ನಿಯೋಜನೆ ಮಾಡಲಾಗಿದ್ದು, 16 ಇನ್ಸ್ಪೆಕ್ಟರ್ಗಳು ತಾಲೂಕಿನ ಎಲ್ಲಾ ಕಡೆಗಳಲ್ಲಿ ಸಂಚಾರ ಮಾಡಲಿದ್ದಾರೆ. ಸೂಕ್ಷ್ಮ ಮತಗಟ್ಟೆಯಲ್ಲಿ ಇಬ್ಬರು ಸಿಬ್ಬಂದಿ ಇರಲಿದ್ದು, ವಿಶೇಷ ಭದ್ರತೆ ವಹಿಸಲಾಗಿದೆ.
ತಾಲೂಕಿನ ಅಡೇಪೇಟೆ ಮತಗಟ್ಟೆಯಲ್ಲಿ ಯುವ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದು, ಹಂಚೀಪುರ, ಸೋಂಪುರ-3, ಬಸವನಹಳ್ಳಿ, ಸೋಲೂರು-4, ಹೊನ್ನೇನಹಳ್ಳಿ ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ. ನೆಲಮಂಗಲ ನಗರದ ಸರಕಾರಿ ಪಿಯು ಕಾಲೇಜಿನಲ್ಲಿ ವಿಕಲಚೇತನರಿಗಾಗಿ ಮತಗಟ್ಟೆ ವ್ಯವಸ್ಥೆ ಮಾಡಲಾಗಿದೆ. ಶಿವಗಂಗೆಯಲ್ಲಿ ಸಾಂಸ್ಕೃತಿಕ ವಿಷಯಾಧಾರಿತವಾಗಿ ಸುಗ್ಗಿ ಹಬ್ಬ, ಎತ್ತಿನ ಬಂಡಿಯ ಆಕರ್ಷಕ ಮತಗಟ್ಟೆಯನ್ನು ತೆರೆಯಲಾಗಿದೆ.