- ಜಗಳೂರು ಬಯಲು ರಂಗಮಂದಿರದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಶಾಸಕ ಬಿ.ದೇವೇಂದ್ರಪ್ಪ
ಕನ್ನಡಪ್ರಭ ವಾರ್ತೆ ಜಗಳೂರು
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತ ಸರ್ಕಾರ ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಯೊಂದಿಗೆ ಸರ್ವತೋಮುಖ ಅಭಿವೃದ್ಧಿಯತ್ತ ದಾಪುಗಾಲಿಟ್ಟಿದೆ. ಕಂದಾಯ ಇಲಾಖೆಯಡಿ ಕಂದಾಯ ಗ್ರಾಮರಚನೆ, ಪೌತಿ ಖಾತೆ, ಇ-ಖಾತಾ, ಯೋಜನೆಗಳಿಂದ ರೈತರ ಮಧ್ಯೆ ಕಾನೂನು, ದೈಹಿಕ ಸಂಘರ್ಷಕ್ಕೆ ಶಾಶ್ವತ ಪರಿಹಾರ ಸಿಗುತ್ತಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯಪೂರ್ವದಲ್ಲಿ ಪರಕೀಯರ ಆಡಳಿತ ವ್ಯವಸ್ಥೆಗೆ ಸಿಲುಕಿ ದಾಸ್ಯದ ಸುಳಿಯಲ್ಲಿ ಭಾರತೀಯರು ನಲುಗಿಹೋಗಿದ್ದರು. ದೇಶದಲ್ಲಿ ಭಗತ್ ಸಿಂಗ್, ಸುಭಾಷ್ಚಂದ್ರ ಬೋಸ್, ಮಹಾತ್ಮ ಗಾಂಧೀಜಿ ಅವರಂತಹ ಮಹಾನೀಯರು ದೇಶಪ್ರೇಮಿಗಳಾಗಿ ತಮ್ಮ ಜೀವನವನ್ನೇ ದೇಶಕ್ಕೆ ಮುಡಿಪಾಗಿಟ್ಟು, ಪ್ರಾಣತ್ಯಾಗ ಮಾಡಿದ್ದಾರೆ. ಬ್ರಿಟಿಷರ ದಬ್ಬಾಳಿಕೆಗೆ ಅಂತ್ಯ ಹಾಡಿದ್ದಾರೆ. ಇದರಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂಬುದನ್ನು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದರು.
ಮಕ್ಕಳು ಉತ್ತಮ ಸಂಸ್ಕಾರಯುತ ಶಿಕ್ಷಣ ಪಡೆದು ದೇಶಕ್ಕೆ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು. ಜನ್ಮ ಕೊಟ್ಟ ತಾಯಿಗೆ, ನಾಡಿಗೆ ಕೀರ್ತಿ ತರಬೇಕು. ವೈವಿಧ್ಯತೆಯಲ್ಲಿ ಏಕತೆ ಸಾರುವ ದೇಶದಲ್ಲಿ ಬಹುತ್ವ ಸಾರಬೇಕಿದೆ. ಅಂಬೇಡ್ಕರ್ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಬೇಕು. ಶಾಸಕನಾಗಿ ಆಯ್ಕೆಗೊಂಡು 3ನೇ ವರ್ಷಕ್ಕೆ ಕಾಲಿಟ್ಟಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನಾದ್ಯಂತ ಉತ್ತಮ ಮಳೆ, ಕೆರೆ-ಕಟ್ಟೆಗಳು ಭರ್ತಿಯಾಗುತ್ತಿವೆ. ರೈತರ ಬದುಕು ಹಸನಾಗಲಿದೆ ಎಂದರು.
ಇಸ್ರೋ ಸಂಸ್ಥೆ ವಿಜ್ಞಾನಿ ಸುರೇಶ್ ನಾಯ್ಕ ಸನ್ಮಾನ ಸ್ವೀಕರಿಸಿ, ಪ್ರತಿಯೊಬ್ಬ ಭಾರತೀಯನೂ ಜೀವನದಲ್ಲಿ ನಿದ್ರೆಗೆಡಿಸುವ ಕನಸ್ಸನ್ನು ಹೊತ್ತು, ಹಲವಾರು ಸಂಕಷ್ಟಗಳನ್ನು ಎದುರಿಸಿ ಗುರಿ ಸಾಧಿಸಬೇಕು. ಆಗ ಮಾತ್ರ ದೇಶಕ್ಕೆ ಕೊಡುಗೆ ನೀಡುವ ಜೊತೆ ತಂದೆ-ತಾಯಿ ಆಸೆ ಈಡೇರಿಕೆಯಾಗಲು ಸಾಧ್ಯ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನಕುಮಾರ್, ಪಿಐ ಸಿದ್ದರಾಮಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹಾಲಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಮರೇನಹಳ್ಳಿ ಟಿ.ಬಸವರಾಜ್ ಮತ್ತಿತರರು ಮಾತನಾಡಿದರು.
- - -
* ಶಾಸಕರಿಂದ ಧನಸಹಾಯ
- - -
-15ಜೆ.ಜಿ.ಎಲ್.1.ಜೆಪಿಜಿ:ಜಗಳೂರು ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಅವರು ಮಾತನಾಡಿದರು.