ಮಕ್ಕಳ ಸರ್ವಾಂಗೀಣ ವಿಕಾಸ ಎಲ್ಲರ ಕರ್ತವ್ಯ

KannadaprabhaNewsNetwork | Published : Dec 29, 2023 1:32 AM

ಮಕ್ಕಳ ಹಕ್ಕುಗಳ ರಕ್ಷಣೆ ಗ್ರಾಪಂಗಳ ಹೊಣೆಯಾಗಿದೆ. ಮುಂದಿನ ಪ್ರಜೆಗಳಾದ ಮಕ್ಕಳಿಗೆ ಭಾರತದ ಪ್ರಜಾಪ್ರಭುತ್ವದ ಸೌಂದರ್ಯ ತಿಳಿಸಲು ಮಕ್ಕಳ ಗ್ರಾಮಸಭೆಗಳಿಂದ ಸಾಧ್ಯ

ಹುಬ್ಬಳ್ಳಿ: ಮಕ್ಕಳನ್ನು ನಾವೆಲ್ಲರೂ ರಕ್ಷಿಸಬೇಕಿದೆ. ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕಿರೇಸೂರ ಗ್ರಾಪಂ ಅಧ್ಯಕ್ಷ ಬಿ.ಕೆ. ಪಾಟೀಲ ಹೇಳಿದರು.

ತಾಲೂಕಿನ ಕಿರೇಸೂರ ಗ್ರಾಪಂ ಹಾಗೂ ಕಿರೇಸೂರ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಸರ್.ಎಂ.ವಿ.ಸಭಾಂಗಣದಲ್ಲಿ ನಡೆದ ಮಕ್ಕಳ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಬದುಕು ಉತ್ತಮಗೊಳ್ಳಬೇಕು.ನಾವೆಲ್ಲ ಅವರಿಗೆ ರಕ್ಷಣೆ ಕೊಡಬೇಕು.ಅವರ ಸರ್ವಾಂಗೀಣ ವಿಕಾಸಕ್ಕೆ ಕೈಜೋಡಿಸಬೇಕು. ದೊಡ್ಡವರು ತಮ್ಮ ಸ್ವಾರ್ಥಕ್ಕಾಗಿ ಮಕ್ಕಳನ್ನು ಭಾಗವಹಿಸುವ ಹಕ್ಕಿನಿಂದ ವಂಚಿತರನ್ನಾಗಿ ಮಾಡಕೂಡದು ಎಂದರು.

ಮಕ್ಕಳ ಹಕ್ಕುಗಳ ರಕ್ಷಣೆ ಗ್ರಾಪಂಗಳ ಹೊಣೆಯಾಗಿದೆ. ಮುಂದಿನ ಪ್ರಜೆಗಳಾದ ಮಕ್ಕಳಿಗೆ ಭಾರತದ ಪ್ರಜಾಪ್ರಭುತ್ವದ ಸೌಂದರ್ಯ ತಿಳಿಸಲು ಮಕ್ಕಳ ಗ್ರಾಮಸಭೆಗಳಿಂದ ಸಾಧ್ಯ ಎಂದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ವೀರೇಶ ಮಾತನಾಡಿ, ಮಕ್ಕಳು ತಮ್ಮ ಅಭಿಪ್ರಾಯ, ಪ್ರಶ್ನೆ ಹಾಗೂ ಸಮಸ್ಯೆಗಳನ್ನು ವ್ಯಕ್ತಪಡಿಸಲು ಸಾಕಷ್ಟು ಅವಕಾಶ ನೀಡುವುದು ಮಕ್ಕಳ ಸ್ನೇಹಿ ಗ್ರಾಪಂಗಳ ಉದ್ದೇಶವಾಗಿದೆ ಎಂದರು.

ಈ ವೇಳೆ ಸಭೆಯಲ್ಲಿದ್ದ ಮಕ್ಕಳು,ತಮ್ಮ ತಮ್ಮ ಸಮಸ್ಯೆ,ಹಕ್ಕುಗಳ ಬಗ್ಗೆ ಪ್ರಶ್ನೆ ಕೇಳಿದರೆ,ಗ್ರಾಪಂ ಅಧ್ಯಕ್ಷರು, ಪಿಡಿಒ ಉತ್ತರಿಸಿದರು.

ಗ್ರಾಪಂ ಉಪಾಧ್ಯಕ್ಷೆ ಸಾವಿತ್ರಿ ಸವದತ್ತಿ, ಸದಸ್ಯರಾದ ನೀಲಪ್ಪ ಗಾಳಪ್ಪನವರ, ಎಚ್.ಎಸ್. ರಾಯನಗೌಡ್ರ, ಪ್ರಭು ತಿರ್ಲಾಪೂರ, ಲಕ್ಷ್ಮಿ ಕಲ್ಲಕ್ಕನವರ, ಕಾರ್ಯದರ್ಶಿ ಶಿವಪ್ಪ ಹಳಮನಿ, ಬಸವರಾಜ ಶಿವಬಸಣ್ಣವರ, ಮುಖ್ಯೋಪಾಧ್ಯಾಯ ಸುಮನ ತೇಲಂಗ, ಪ್ರಧಾನ ಗುರುಮಾತೆ ದಾಸ ಮತ್ತಿತರರು ಉಪಸ್ಥಿತರಿದ್ದರು.

ವೀಕ್ಷಕರಾಗಿ ಅರಣ್ಯ ಇಲಾಖೆ ಪ್ರೇರಕ ಈಶ್ವರಯ್ಯಾ ಪಾಟೀಲ ಆಗಮಿಸಿದ್ದರು. ಈ ವೇಳೆ ಮಕ್ಕಳಿಂದ ಆಶು ಭಾಷಣ ಸ್ಪರ್ಧೆ ಏರ್ಪಡಿಸಲಾಯಿತು. ವಿಜೇತರಿಗೆ ಪಂಚಾಯತಿ ವತಿಯಿಂದ ಬಹುಮಾನ ವಿತರಿಸಲಾಯಿತು.

ಶಿಕ್ಷಕ ಅಶೋಕ ಈರಗಾರ ಸ್ವಾಗತಿಸಿದರು. ಶಿಕ್ಷಕ ಸಾಹಿತಿ ಡಾ. ಲಿಂಗರಾಜ ರಾಮಾಪೂರ ನಿರೂಪಿಸಿದರು. ಪೂರ್ಣಿಮಾ ಸ್ವಾಗತಿಸಿದರು. ದೈಹಿಕ ಶಿಕ್ಷಕ ಎಸ್.ಬಿ. ಪೂಜಾರ ವಂದಿಸಿದರು.