ತಮ್ಮಲ್ಲೇ ಇದ್ದುಕೊಂಡು ಅವ್ಯವಹಾರದಲ್ಲಿ ಭಾಗಿಯಾಗಿದ್ದು ಅವರ ವಿರುದ್ಧವು ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು: ಡಾ.ಎಂ.ಸಿ.ಸುಧಾಕರ್
ಡಿಸಿಸಿ ಬ್ಯಾಂಕ್ನಲ್ಲಿಯೇ ಸುಮಾರು ರು. 120 ಕೋಟಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಲಕ್ಷಾಂತರ ರುಪಾಯಿ ದುರುಪಯೋಗವಾಗಿದೆ ಎಂಬುದನ್ನು ತಿಳಿದಿದ್ದು, ಯಾವುದೇ ಪಕ್ಷಭೇದವಿಲ್ಲದೆ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕಾಗಿದೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ 2025-26ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಒಂದೇ ಸಂಘದ ಹೆಸರಿನಲ್ಲಿ 2-3 ಬಾರಿ ಸಾಲ ಪಡೆಯಲಾಗಿದೆ. ಕುರುಬೂರು ಹಾಗೂ ಅಂಕಾಲಮಡುಗು ಬ್ಯಾಂಕ್ಗಳ ಕಾರ್ಯದರ್ಶಿಗಳು ಭಾಗಿಯಾಗಿದ್ದಾರೆಂಬ ಆರೋಪಗಳಿದ್ದು, ಈ ಕುರಿತು ಹೈಕೋರ್ಟ್, ಸಿಒಡಿ ಹಾಗೂ ಲೋಕಾಯುಕ್ತದ ಮುಂದೆ ಪ್ರಕರಣಗಳು ದಾಖಲಾಗಿವೆ ಎಂದರು.ತಾಲೂಕಿನಲ್ಲಿಯೇ ಇಷ್ಟೊಂದು ಪ್ರಮಾಣದ ಅವ್ಯವಹಾರ ನಡೆದಿದ್ದರೆ, ಇತರೆ ತಾಲೂಕುಗಳ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಪರಿಶೀಲಿಸಬೇಕಿದೆ. ಅಕ್ರಮ ನಡೆದಿಲ್ಲವೆಂದಾದರೆ ಸಂಬಂಧಪಟ್ಟವರು ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ತನಿಖೆಗೆ ತಡೆಯೊಡ್ಡುವ ರೀತಿಯಲ್ಲಿ ಸುಪ್ರಿಂಕೋರ್ಟ್ ನಲ್ಲಿ ತನಿಖೆಗೆ ವಿರುದ್ಧವಾಗಿ ಸ್ಟೇ ತಂದಿರುವುದನ್ನು ನೋಡಿದರೆ ಇದರಲ್ಲಿ ಅವ್ಯವಹಾರ ಆಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಇದನ್ನು ಹಂತ ಹಂತವಾಗಿ ತನಿಖೆಯಾಗಿ ತಪ್ಪಿತಸ್ಥರಿಂದ ಹಣ ವಸೂಲಾತಿ ಮಾಡಬೇಕಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ವ್ಯವಸ್ಥಾಪಕ ಬೈರೇಗೌಡ, ವ್ಯವಸ್ಥಾಪಕ ನಾಗೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮುನಿನಾರಾಯಣಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಚಿನ್ನಪ್ಪ, ಮಾಜಿ ನಗರಸಭಾ ಸದಸ್ಯ ಸುಬ್ರಹ್ಮಣ್ಯಂ, ಕುರುಟಹಳ್ಳಿ ಕೃಷ್ಣಮೂರ್ತಿ, ಕೃಷಿಕ ಸಮಾಜದ ನಂಜುಂಡಗೌಡ, ಚನ್ನಕೇಶವಪುರ ಮುನಿಯಪ್ಪ, ನಂದಿಗಾನಹಳ್ಳಿ ಪಟೇಲ್ ಅಶ್ವತ್ಥರೆಡ್ಡಿ, ನಡಂಪಲ್ಲಿ ಶ್ರೀನಿವಾಸ್, ಲಕ್ಷ್ಮೀನಾರಾಯಣರೆಡ್ಡಿ, ಕೋಡಿಹಳ್ಳಿ ವೆಂಕಟರಾಮರೆಡ್ಡಿ ಇದ್ದರು.
ಚಿತ್ರಶೀರ್ಷಿಕೆ1: ನಗರದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ಸರ್ವಸದಸ್ಯರ ಮಹಾಸಭೆಯಲ್ಲಿ ಮಾತನಾಡಿದ ಶಾಸಕ ಡಾ.ಎಂ.ಸಿ.ಸುಧಾಕರ್.