ವಿದ್ಯಾವಿಕಾಸ ಪ್ರಕಲ್ಪ, ಸಂಸ್ಕೃತಿಯ ಉಚಿತ ಮನೆಪಾಠ ಕೇಂದ್ರಗಳ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ ಕೊಪ್ಪಳಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವ ಅಗತ್ಯತೆ ಇದೆ ಎಂದು ಗಂಗಾವತಿಯ ಸಂಕಲ್ಪ ಕಾನೂನು ಮಹಾವಿದ್ಯಾಲಯದ ಕಾರ್ಯಾಧ್ಯಕ್ಷ ನಾಗರಾಜ ಗುತ್ತಿಗೆದಾರ ಹೇಳಿದರು.
ನಗರದ ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ ಸೇವಾಭಾರತಿಯ ವಿದ್ಯಾವಿಕಾಸ ಪ್ರಕಲ್ಪ ಹಾಗೂ ಸಂಸ್ಕೃತಿಯ ಉಚಿತ ಮನೆಪಾಠ ಕೇಂದ್ರಗಳ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಉತ್ತಮ ಸಂಸ್ಕಾರದಿಂದ ಮಕ್ಕಳಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಪಾಲಕರು, ಶಿಕ್ಷಕರು ಮಕ್ಕಳ ನಡತೆ ಬಗ್ಗೆ ಗಮನ ಹರಿಸಬೇಕು. ಪ್ರತಿ ಮಗುವಿನಲ್ಲಿ ಉತ್ತಮ ಗುಣ ಬೆಳೆಸಬೇಕು ಎಂದರು.ಕೊಪ್ಪಳದ ಶ್ರದ್ಧಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಧುಮತಿ ಪಟ್ಟಣಶೆಟ್ಟಿ ಸೇವಾಭಾರತಿಯ ಕಾರ್ಯ ಮೆಚ್ಚಿ ಮಾತನಾಡಿದರು.
ಸೇವಾಭಾರತಿಯ ವಿಭಾಗ ಸಂಯೋಜಕ ಪ್ರಾಣೇಶ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಪಲ್ಲೇದ ವಾರ್ಷಿಕ ವರದಿ ವಾಚಿಸಿದರು. ಶಾರದಾ ಕೊರಗಲ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾವಿಕಾಸ ಪ್ರಕಲ್ಪದ ಸಮಿತಿ ಅಧ್ಯಕ್ಷ ಅಮರೇಶ ಪಾಟೀಲ, ವಿಶ್ವಸ್ತ ಮಾ. ಬಸವರಾಜ ಡಂಬಳ, ಸಮಿತಿಯ ಕಾರ್ಯದರ್ಶಿ ಮಹದೇವಪ್ಪ ಕೌಲಗಿ, ಸದಸ್ಯರಾದ ಚಂದ್ರಶೇಖರ ಪಾಟೀಲ, ಮಹಾಲಕ್ಷ್ಮಿ ಕಂದಾರಿ, ದೀಪಾ ಕುಲಕರ್ಣಿ, ಬಸವರಾಜ ಸಮಗಂಡಿ, ಕಾರ್ಯಕರ್ತರಾದ ಗೀತಾ ಐಲಿ, ಹುಲಿಗೆಮ್ಮ ಉಂಕಿ , ವಿದ್ಯಾವಿಕಾಸ ಪ್ರಕಲ್ಪದ ಭಾಗ್ಯನಗರದ ಹಾಗೂ ಕೊಪ್ಪಳದ ಶಿಕ್ಷಕಿಯರು, ಸೇವಾಭಾರತಿಯ ಹಿತೈಷಿಗಳ 350ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಆನಂತರ ನಡೆದ ಪಾಲಕರ ಸಭೆಯಲ್ಲಿ 90ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು. ಮಧ್ಯಾಹ್ನ ನಡೆದ ಮಾತೃಭೋಜನ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಾತೆಯರು ಎಲ್ಲ ಮಕ್ಕಳಿಗೆ ಮಾತೃಭೋಜನದ ಸವಿ ಉಣಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನೆಪಾಠ ಕೇಂದ್ರದ ಮಕ್ಕಳು ಪ್ರತಿಭಾ ಪ್ರದರ್ಶನ ನೀಡಿದರು.