- ಗುಡ್ಡೇಹಳ್ಳದಲ್ಲಿ ಬಾಂಧವ್ಯ ಸ್ಪೋರ್ಟ್ಸ್ ಕ್ಲಬ್ ನ ಹೊನಲು ಬೆಳಕಿನ ಹಗ್ಗ ಜಗ್ಗಾಟ । ವಾಲೀಬಾಲ್ ಪಂದ್ಯಾವಳಿ
ನಮ್ಮ ದಿನನಿತ್ಯದ ವೃತ್ತಿ ಜೊತೆಗೆ ಮನಸ್ಸಿಗೆ ನೆಮ್ಮದಿ, ಸಂತೋಷ ನೀಡುವ ಪ್ರವೃತ್ತಿ ಅಗತ್ಯ ಎಂದು ಕಾನೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಮೋಹಿನಿ ತಿಳಿಸಿದರು.
ಶನಿವಾರ ರಾತ್ರಿ ಗುಡ್ಡೇಹಳ್ಳದ ಸಂಕ್ಸೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಟದ ಮೈದಾನದಲ್ಲಿ ಗುಡ್ಡೇಹಳ್ಳ ಬಾಂಧವ್ಯ ಸ್ಪೋರ್ಟ್ಸ್ ಕ್ಲಬ್ ನ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಹಗ್ಗ ಜಗ್ಗಾಟ ಮತ್ತು ಶೃಂಗೇರಿ ಕ್ಷೇತ್ರ ಮಟ್ಟದ ವಾಲೀಬಾಲ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಗ್ರಾಮೀಣ ಕ್ರೀಡಾ ಕೂಟ, ಜಾನಪದ ಸಂಸ್ಕೃತಿ ನಶಿಸಿ ಹೋಗುತ್ತಿರುವ ಈ ಕಾಲ ಘಟ್ಟದಲ್ಲಿ ಹಗ್ಗ ಜಗ್ಗಾಟದಂತಹ ಗ್ರಾಮೀಣ ಸೊಗಡಿನ ಸ್ಪರ್ಧೆಯನ್ನು ಬಾಂಧವ್ಯ ಸ್ಪೋರ್ಟ್ಸ್ ಕ್ಲಬ್ ಏರ್ಪಡಿಸಿದೆ ಎಂದರು. ಅತಿಥಿಯಾಗಿದ್ದ ಸಂಕ್ಸೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾಜಿ ಎಸ್.ಡಿಎಂಸಿ ಅಧ್ಯಕ್ಷ ಡಾಕೇಂದ್ರ ಮಾತನಾಡಿ, 4 ವರ್ಷದ ಹಿಂದೆ ಬಾಂಧವ್ಯ ಸ್ಪೋರ್ಟ್ಸ್ ಕ್ಲಬ್ ಕೆಸರು ಗದ್ದೆ ಕ್ರೀಡಾ ಕೂಟ ಏರ್ಪಡಿಸಿತ್ತು. ಗುಡ್ಡೇಹಳ್ಳ ಸಂಕ್ಸೆ ಸರ್ಕಾರಿ ಶಾಲೆ ಆಟದ ಮೈದಾನ ವಿಶಾಲವಾಗಿದ್ದು ಕ್ರೀಡಾ ಪಟುಗಳಿಗೆ ಅನುಕೂಲವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಡಾಕೇಂದ್ರ, ಹಿರಿಯ ಆಟಗಾರ ವಿಶ್ವನಾಥ್, ಅರಣ್ಯ ರಕ್ಷಕ ಅಶ್ವತ್ ಅವರನ್ನು ಸನ್ಮಾನಿಸಲಾಯಿತು.
ಶೃಂಗೇರಿ ಕ್ಷೇತ್ರ ಮಟ್ಟದ ವಾಲೀಬಾಲ್ ಪಂದ್ಯಾವಳಿಯಲ್ಲಿ ಸಿಂಸೆ ವಾರಿಯರ್ಸ್ ಎ ತಂಡ ಪ್ರಥಮ, ಶೃಂಗೇರಿ ಬಾಯ್ಸ್ ತಂಡ ದ್ವಿತೀಯ, ಸಿಂಸೆ ಯುನೈಟೆಡ್ ಪ್ರೆಂಡ್ಸ್ ತಂಡ ತೃತೀಯ ಸ್ಥಾನ ಪಡೆಯಿತು.ಕಾನೂರು ಗ್ರಾಪಂ ಮಟ್ಟದ ವಾಲೀಬಾಲ್ ಪಂದ್ಯಾವಳಿಯಲ್ಲಿ ಗುಡ್ಡೇಹಳ್ಳ ಬಾಂಧವ್ಯ ಸ್ಪೋರ್ಟ್ಸ್ ಕ್ಲಬ್ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯಿತು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಬಣಕಲ್ ಕೇಸರಿ ಪಡೆ ಪ್ರಥಮ, ಗುಡ್ಡೇಹಳ್ಳ ಬಾಂಧವ್ಯ ಸ್ಪೋರ್ಟ್ಸ್ ಕ್ಲಬ್ ದ್ವಿತೀಯ ಸ್ಥಾನ ಪಡೆಯಿತು.