ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸಂಸ್ಥೆಯ ಮಣಿಪುರಿ ವಿದ್ಯಾರ್ಥಿಗಳಿಗೆ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಮೈತೇಯಿ ಸಂಸ್ಕೃತಿಯ ಪ್ರಮುಖ ಹಬ್ಬ ‘ಶಜೀಬೂ ಚೆರೋಬಾ’ ಆಚರಣೆ ನೆರವೇರಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಕರಾವಳಿಗೆ ಶಿಕ್ಷಣವನ್ನು ಅರಸಿ ಬಂದ ಮಣಿಪುರಿ ವಿದ್ಯಾರ್ಥಿಗಳು ಇಲ್ಲಿನ ವಿವಿಧತೆ, ಸಮೃದ್ಧ ಸಂಸ್ಕೃತಿ ಗೌರವಿಸುವ ಜೊತೆಗೆ ಕರಾವಳಿಯ ಭಾಗವಾಗಿ ಎಲ್ಲರೊಂದಿಗೆ ಸಹೋದರತ್ವ, ಭ್ರಾತೃತ್ವದೊಂದಿಗೆ ಬೆಳೆಯಿರಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸಂಸ್ಥೆಯ ಮಣಿಪುರಿ ವಿದ್ಯಾರ್ಥಿಗಳಿಗೆ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಮೈತೇಯಿ ಸಂಸ್ಕೃತಿಯ ಪ್ರಮುಖ ಹಬ್ಬ ‘ಶಜೀಬೂ ಚೆರೋಬಾ’ ಆಚರಣೆಯಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಮಣಿಪುರಕ್ಕೆ ಕಾರ್ಯಕ್ರಮಕ್ಕೆಂದು ಹೋದ ಸಂದರ್ಭದಲ್ಲಿ ಅಲ್ಲಿನ ಸಂಸ್ಕೃತಿ, ಊಟೋಪಚಾರ ಮತ್ತು ಅಲ್ಲಿನ ಭಾಷೆ, ಆಚರಣೆ ಮನಸ್ಸಿಗೆ ಹೆಚ್ಚು ಆಪ್ತವಾಗಿತ್ತು ಎಂದು ಭೇಟಿ ನೀಡಿದ ಅನುಭವ ಹಂಚಿಕೊಂಡರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ನರ್ತಿಸುವ ವಿಶೇಷ ಸಾಹಸಮಯ ಸ್ಟಿಕ್ ಡ್ಯಾನ್ಸ್ ನನ್ನನ್ನು ಇನ್ನಷ್ಟು ಮಣಿಪುರದ ಸಂಸ್ಕೃತಿ, ನೃತ್ಯ ಪ್ರಕಾರಕ್ಕೆ ಹತ್ತಿರ ಮಾಡಿದೆ. ಕಾಲೇಜು ವಿದ್ಯಾರ್ಥಿಗಳು ಈ ರೀತಿಯ ಸಾಹಸಮಯ ನೃತ್ಯ ಪ್ರದರ್ಶನ ನೀಡುವುದು ಶ್ಲಾಘನೀಯ ಎಂದು ತಿಳಿಸಿದರು.
ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಪ್ರೊ ಕೈನಿ ಸಿಸಿಲಿಯಾ ಮಾತನಾಡಿ, ನಾರ್ಥ್ ಈಸ್ಟ್ ಪೀಪಲ್ ಅಸೋಸಿಯೇಷನ್ ಆಫ್ ಮಂಗಳೂರು (ನೇಪಮ್) ತಂಡ ಆಳ್ವಾಸ್ ಚೆರೋಬಾ ಆಚರಣೆಯಲ್ಲಿ ಭಾಗಿಯಾಗಿರುವುದು ಹೆಚ್ಚು ಸಂತಸ ತಂದಿದೆ. ನಮ್ಮ ಮನೆಗೆ ನಾವೇ ಬಂದಷ್ಟು ಸಂತೋಷವಾಯಿತು ಎಂದು ಹರ್ಷವನ್ನು ವ್ಯಕ್ತಪಡಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಮಂಗಳೂರು ಶಿಕ್ಷಣ, ಕ್ರೀಡೆ, ಸಂಸ್ಕೃತಿ ಮತ್ತು ಕರಾವಳಿ ಪ್ರವಾಸೋದ್ಯಮಕ್ಕೆ ಹೆಚ್ಚು ಹೆಸರುವಾಸಿ. ಇತ್ತೀಚೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದಂತಹ ಕರಾವಳಿ ಉತ್ಸವ ಮಂಗಳೂರಿನ ಆಚರಣೆ, ಆಹಾರ ಮತ್ತು ಸಂಸ್ಕೃತಿಯನ್ನು ಪ್ರತಿ ನೆಲೆಯಲ್ಲೂ ಬಿಂಬಿಸುತ್ತಿತ್ತು. ಮಣಿಪುರಿ ಸಂಸ್ಕೃತಿ, ಆಹಾರ ಪದ್ಧತಿಗಳ ಕಡೆಗಿನ ಜಿಲ್ಲಾಧಿಕಾ ಆಸಕ್ತಿ ಮೆಚ್ಚುವಂತದ್ದು ಎಂದರು.
ಜಿಲ್ಲಾಧಿಕಾರಿ ಪತ್ನಿ ಅಶ್ವಿನಿ ಮಣಿ ಹಾಗೂ ಮಗಳು ಅಧೀರಾ, ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ನೇಪಮ್ ಅಧ್ಯಕ್ಷೆ ಡಾ ಅಥೋಲಿಥೋ, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ , ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ ರೋಶನ್ ಪಿಂಟೋ ಇದ್ದರು.
ವಿದ್ಯಾರ್ಥಿನಿ ಇನ್ಶರೈ, ವಿದ್ಯಾರ್ಥಿ ವಿವೇಕ್ ಮತ್ತು ಈಶ್ವರಚಂದ್ರ ನಿರೂಪಿಸಿದರು. ವಿದ್ಯಾರ್ಥಿ ಕೇಕೇಸನ ಸ್ವಾಗತಿಸಿ, ವಂದಿಸಿದರು.
ಬಳಿಕ ಪದವಿ ಮಣಿಪುರಿ ವಿದ್ಯಾರ್ಥಿಗಳಿಂದ ವಿಶೇಷವಾಗಿ ಮಾರ್ಷಲ್ ಆರ್ಟ್ಸ್ ಡೆಮೊ, ದಾಂಡಿಯಾ ನೃತ್ಯ ಹಾಗೂ ಅನೇಕ ರೀತಿಯ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ತಯಾರಿಸಿದ ಮಣಿಪುರಿಯ ಖಾದ್ಯಗಳಾದ ಇರೊಂಬಾ, ಉಟಿ, ಚಂಫೂಟ್, ಕಾಂಫ, ಚಿಕನ್ / ಪನ್ನೀರ್, ಹೇಯ್, ಐಸ್ ಕ್ರೀಂನ್ನು ಹಬ್ಬದಲ್ಲಿ ಉಣ ಬಡಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.