ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಬಳ್ಳಾರಿಯ ಲಕ್ಷ್ಮೀಪರದಲ್ಲಿ ಜನಿಸಿದ ವೆಂಕಟೇಶ್ ಕುಮಾರ್ ಅವರಿಗೆ ಜಾನಪದ ಗಾಯಕ ಮತ್ತು ತೊಗಲು ಬೊಂಬೆಯಾಟಗಾರರಾಗಿದ್ದ ತಂದೆ ಹುಲೆಗಪ್ಪನವರೇ ಮೊದಲ ಗುರುಗಳು. ಗುರು ಪುಟ್ಟರಾಜ ಗವಾಯಿಗಳಿಂದ ಗ್ವಾಲಿಯರ್ ಮತ್ತು ಕಿರಾಣಾ ಘರಾಣಾ ಶೈಲಿಯ ಎಲ್ಲ ಹೊಳಹುಗಳನ್ನು ಕಲಿತ ಅವರು ಕರ್ನಾಟಕ ಸಂಗೀತದಲ್ಲಿಯೂ ನಿಸ್ಸೀಮರು. ಭಕ್ತಿ ಸಂಗೀತದಲ್ಲಿ ಕನ್ನಡ ವಚನ ಮತ್ತು ದಾಸರಪದ ಗಾಯನಕ್ಕಾಗಿ ವೆಂಕಟೇಶ್ ಕುಮಾರ್ ಪ್ರಸಿದ್ಧರಾಗಿದ್ದಾರೆ.
ಪದ್ಮಶ್ರೀ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನಾಟ್ಯ ಅಕಾಡೆಮಿ ಪ್ರಶಸ್ತಿ, ಭೀಮಸೇನ ಜೋಶಿ ಪ್ರಶಸ್ತಿ, ಕಾಳಿದಾಸ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ದೇಶ-ವಿದೇಶಗಳ ಪ್ರಮುಖ ಸಂಗೀತ ಕಛೇರಿಗಳಲ್ಲಿ ಭಾಗವಹಿಸಿದ ಹಿರಿಮೆ ವೆಂಕಟೇಶ್ ಕುಮಾರ್ ಅವರದ್ದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ. ಮೋಹನ ಆಳ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.