ಸಂವಿಧಾನ ರಚನೆ ಮಾಡುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಪಂಚದ ಕೋಟ್ಯಂತರ ಜೀವ ರಾಶಿಗಳಿಗೂ ಬದುಕುವ ಹಕ್ಕನ್ನು ಕಲ್ಪಿಸಿಕೊಟ್ಟಿದ್ದಾರೆ
ಹೊಸಕೋಟೆ: ಸಂವಿಧಾನ ರಚನೆ ಮಾಡುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಪಂಚದ ಕೋಟ್ಯಂತರ ಜೀವ ರಾಶಿಗಳಿಗೂ ಬದುಕುವ ಹಕ್ಕನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ದಸಂಸ ಕರ್ನಾಟಕ ಸಂಘಟನೆಯ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ತಿಳಿಸಿದರು.
ತಾಲೂಕಿನ ಖಾಜಿಹೊಸಹಳ್ಳಿಯಲ್ಲಿ ದಸಂಸ ಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಪ್ರಯುಕ್ತ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬಾಬಾಸಾಹೇಬರ ಆಶಯಗಳ ವಿರುದ್ಧ ಜನ್ಮದಿನೋತ್ಸವ ಹೆಚ್ಚಾಗಿವೆ. ಅಂದ ಭಕ್ತರು ಹೆಚ್ಚಾಗಿದ್ದಾರೆ. ಅಂಬೇಡ್ಕರ್ ತತ್ವಾದರ್ಶ, ಸಂವಿಧಾನ ಅರ್ಥೈಸಿಕೊಳ್ಳುವಲ್ಲಿ ನಾವೂ ವಿಫಲಗೊಂಡಿದ್ದೇವೆ. ಬಾಬಾ ಸಾಹೇಬರು ಯಾವುದೇ ಕಾರಣಕ್ಕೂ ಮೂರ್ತಿ ಪೂಜೆಗಳ ಸ್ಥಾನಗಳಲ್ಲಿ ನನ್ನನ್ನ ನಿಲ್ಲಿಸೋಕೆ ಹೋಗಬೇಡಿ ಎಂದಿದ್ದರು. ಅದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಇತ್ತೀಚೆಗೆ ಬಾಬಾ ಸಾಹೇಬರ ಆಶಯಗಳ ವಿರುದ್ಧವಾಗಿ ಜನ್ಮದಿನೋತ್ಸವ ರಥ ಹಾಗೂ ಪಲ್ಲಕ್ಕಿ, ತೇರುಗಳಲ್ಲಿ ಬಾಬಾ ಸಾಹೇಬರ ಮೂರ್ತಿ ಪೂಜೆ, ಹಣೆಗೆ ತಿಲಕವಿಡುವ ಮೂಲಕ ಈ ಸಮಾಜದಲ್ಲಿ ಆಘಾತಕಾರಿ ಬೆಳವಣಿಗೆಗಳು ಉಂಟಾಗುವಂತೆ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.
ಅಜ್ಞಾನಿಗಳು ಕಲ್ಲನ್ನು ಪೂಜಿಸಿದರೆ ಜ್ಞಾನಿಗಳು ಪುಸ್ತಕವನ್ನು ಪೂಜಿಸುತ್ತಾರೆ. ಅದ್ದರಿಂದ ಮನರಂಜನಾ ಕಾರ್ಯಕ್ರಮಗಳಿಗೆ ಹಣ ವ್ಯರ್ಥ ಮಾಡದೆ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ನೆರವಾಗಿ ಅರ್ಥಪೂರ್ಣವಾಗಿ ಬಾಬಾ ಸಾಹೇಬರ ತತ್ವ ಆದರ್ಶಗಳ ಜನ್ಮ ದಿನ ಆಚರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಕರ್ನಾಟಕ ತಾಲೂಕು ಸಂಚಾಲಕ ಎಸ್.ನಾರಾಯಣಸ್ವಾಮಿ, ಅಪ್ಪಯ್ಯ, ಸಹ ಸಂಚಾಲಕ ಅನಿಲ್ ಕುಮಾರ್, ಅಂಬರೀಶ್, ಪಂಚಾಯ್ತಿ ಮಂಜು. ಪಿ.ಶಿವ, ಶಿವಾನಂದ, ಶಂಕರ್, ಅಂಬರೀಶ್, ಡಾ. ಕೆ.ರವಿಕುಮಾರ್, ಗ್ರಾಮಮುಖಂಡರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.