ಹಿರಿಯೂರು: ಬಾಬಾ ಸಾಹೇಬರ ಆಶಯಗಳನ್ನು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ನಮ್ಮನ್ನಾಳಿದ ಸರ್ಕಾರಗಳು ವಿಫಲವಾಗಿವೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಹೇಳಿದರು.
ದೇಶದಲ್ಲಿ ಎಲ್ಲೆಲ್ಲೂ ಅಸ್ಪೃಶ್ಯತೆ, ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ನಿರಂತರ ಪ್ರಯತ್ನಗಳ ನಂತರವೂ ಅಸ್ಪೃಶ್ಯತೆ, ಭ್ರಷ್ಟಾಚಾರವನ್ನು ಇನ್ನೂ ಹೋಗಲಾಡಿಸಲಾಗಿಲ್ಲ. ಹಾಗಾಗಿ ಹೋರಾಟದ ಹಾದಿಯ ಮೂಲಕ ಇವುಗಳನ್ನು ಹೋಗಲಾಡಿಸುವುದು ಅನಿವಾರ್ಯವಾಗಿದೆ ಎಂದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ರವರು ಈ ದೇಶಕ್ಕೆ ಒಂದು ಬೃಹತ್ ಸಂವಿಧಾನವನ್ನು ಎಲ್ಲಾ ವರ್ಗದ ಜನರ ಅಭಿವೃದ್ಧಿಗಾಗಿ ನೀಡಿದ್ದಾರೆ. ಆದರೆ ಈ ಸರ್ಕಾರಗಳು ಬಲಾಢ್ಯರ ಪರವಾಗಿ ಕೆಲಸ ಮಾಡುತ್ತಿವೆ. ತಾಲೂಕಿನಲ್ಲಿ ಮಿತಿಮೀರಿದ ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲಾ ರೈತ ಸಂಘಟನೆಗಳನ್ನು ಒಂದೇ ವೇದಿಕೆಗೆ ತರುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದ್ದು, ಆದಷ್ಟು ಬೇಗ ಆ ಕಾರ್ಯ ಯಶಸ್ಸು ಕಾಣಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕ ಕೆ.ಪಿ.ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓ.ಹನುಮಂತರಾಯ, ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗಪ್ಪ, ತಾಲೂಕು ಸಂಯೋಜಕ ನರಸಿಂಹಮೂರ್ತಿ, ಉಸ್ತುವಾರಿ ರಾಘವೇಂದ್ರ, ತಾಲೂಕು ಅಧ್ಯಕ್ಷ ಜಗದೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೋಟೆ ಪರಮೇಶ್ವರಪ್ಪ, ತಾಲೂಕು ಉಪಾಧ್ಯಕ್ಷ ಚಂದ್ರಣ್ಣ, ರಂಗಸ್ವಾಮಿ, ಓಂಕಾರ್ ಮಟ್ಟಿ, ಶಿವು, ರಾಘು, ನೂರ್ ಅಹಮದ್, ಕೂನಿಕೆರೆ ಮಾರುತೇಶ್ ಮುಂತಾದವರು ಉಪಸ್ಥಿತರಿದ್ದರು.