ರಾಣಿಬೆನ್ನೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ ಗೃಹಮಂತ್ರಿ ಅಮಿತ್ ಶಾ ಹಾಗೂ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಎಂಎಲ್ಸಿ ಸಿ.ಟಿ. ರವಿ ಅಶ್ಲೀಲ ಪದ ಬಳಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಮಹಿಳಾ ಘಟಕದ ನಗರಾಧ್ಯಕ್ಷೆ ಜಯಶ್ರೀ ಪೀಸೆ ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ ವಿಶೇಷವಾದ ಗೌರವ ಸ್ಥಾನವಿದೆ. ಅದನ್ನು ಮರೆತ ಒಬ್ಬ ಜನಪ್ರತಿನಿಧಿಯಾದ ವ್ಯಕ್ತಿ ಸದನದೊಳಗೆ ನಡೆದುಕೊಂಡ ರೀತಿ ಮಹಿಳಾ ಸಮಾಜ ತಲೆ ತಗ್ಗಿಸುವಂತಾಗಿದೆ. ಇದನ್ನು ಖಂಡಿಸುತ್ತೇವೆ. ಈ ಘಟನೆಯನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿ ಸಿ.ಟಿ. ರವಿ ಅವರನ್ನು ಎಂಎಲ್ಸಿ ಸ್ಥಾನದಿಂದ ವಜಾಗೊಳಿಸಬೇಕು. ಜತೆಗೆ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದರು.
ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಮಂಜನಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷ ಶೇರುಖಾನ್ ಕಾಬೂಲಿ, ಮಹಿಳಾ ಗ್ರಾಮೀಣ ಘಟಕದ ಅಧ್ಯಕ್ಷೆ ರೇಖಾ ಮಾದಮ್ಮನವರ, ಭಾರತಿ ಸುರವನ್ನಿ, ಚಂದ್ರಕಲಾ ಬ್ರಿಷ್ಟಣ್ಣನವರ, ಬೇಬಕ್ಕ ಮೆಣಸಿನಹಾಳ, ನೂರಜಹಾನ್ ನಂದ್ಯಾಲ, ಸುಜಾತಾ ಬಕರೆಡ್ಡಿ, ಭವ್ಯಾ ಅರಕೇರಿ, ಪದ್ಮಾ ಹೊಸಮನಿ, ಲಕ್ಷ್ಮೀ ಕದರಮಂಡಲಗಿ, ಅಂಬಿಕಾ ಶೇಷಗಿರಿ, ಭಾಗ್ಯ ಕಲಾಲ, ರೇಖಾ ಗುಳೇದ, ಕರಿಯಮ್ಮ, ಗೌರಮ್ಮ, ಸಂಜೀವರೆಡ್ಡಿ ಮುದಗುಣಕಿ, ಚಂದ್ರಣ್ಣ ಬೇಡರ ಹಾಗೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.