ಸಮಾನತೆ ತತ್ವದಡಿ ಅಮ್ಮ ಫೌಂಡೇಶನ್ ಸಮಾಜಮುಖಿ ಸೇವೆ: ಸುಧಾಕರ್ ಎಸ್. ಶೆಟ್ಟಿ

KannadaprabhaNewsNetwork |  
Published : Jan 27, 2026, 02:45 AM IST
ಗಣರಾಜ್ಯೋತ್ಸವದಂದು ೩೨ನೇ ಉಚಿತ ನೇತ್ರ ಹಾಗೂ ಶಸ್ತç ಚಿಕಿತ್ಸಾ ಶಿಬಿರ | Kannada Prabha

ಸಾರಾಂಶ

ಕೊಪ್ಪ೧೯೫೦ರ ಜನವರಿ ೨೬ರಂದು ಜಾರಿಗೆ ಬಂದ ಭಾರತೀಯ ಸಂವಿಧಾನ ದೇಶವನ್ನು ಸ್ವತಂತ್ರ್ಯ ಸಾರ್ವಭೌಮ ಹಾಗೂ ಸಂವಿಧಾನಬದ್ಧ ಗಣರಾಜ್ಯವನ್ನಾಗಿ ರೂಪಿಸಿದೆ ಎಂದು ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ತಿಳಿಸಿದರು.

- ಗಣರಾಜ್ಯೋತ್ಸವದಂದು ೩೨ನೇ ಉಚಿತ ನೇತ್ರ, ಶಸ್ತ್ರ ಚಿಕಿತ್ಸಾ ಶಿಬಿರ

ಕನ್ನಡಪ್ರಭ ವಾರ್ತೆ, ಕೊಪ್ಪ

೧೯೫೦ರ ಜನವರಿ ೨೬ರಂದು ಜಾರಿಗೆ ಬಂದ ಭಾರತೀಯ ಸಂವಿಧಾನ ದೇಶವನ್ನು ಸ್ವತಂತ್ರ್ಯ ಸಾರ್ವಭೌಮ ಹಾಗೂ ಸಂವಿಧಾನಬದ್ಧ ಗಣರಾಜ್ಯವನ್ನಾಗಿ ರೂಪಿಸಿದೆ ಎಂದು ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ತಿಳಿಸಿದರು.

ದೇಶದ ಅತ್ಯಂತ ಮಹತ್ವದ ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವದ ಅಂಗವಾಗಿ ಬಸರಿಕಟ್ಟೆಯ ಶ್ರೀ ಸದ್ಗುರು ಸುವರ್ಣ ಸಭಾಭವನದಲ್ಲಿ ಅಮ್ಮ ಫೌಂಡೇಶನ್ ತುಮಕಾನೆ ಹಾಗೂ ಉಡುಪಿ ಪ್ರಸಾದ್ ನೇತ್ರಾಲಯದ ಸಹಯೋಗದಲ್ಲಿ ನಡೆದ ೩೨ನೇ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.

ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಆರೋಗ್ಯ ಮತ್ತು ಶಿಕ್ಷಣ ಎಲ್ಲ ನಾಗರಿಕರಿಗೂ ಲಭ್ಯವಾಗಬೇಕು ಎಂಬ ತತ್ವದಡಿ ಅಮ್ಮ ಫೌಂಡೇಶನ್ ಸಮಾಜಮುಖಿ ಸೇವೆ ನಡೆಸುತ್ತಿದೆ ಎಂದರು.

ಇಂದಿನ ಗಣರಾಜ್ಯೋತ್ಸವದ ಪವಿತ್ರ ದಿನವೇ ೩೨ನೇ ಉಚಿತ ನೇತ್ರ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಈಗಾಗಲೇ ಅಮ್ಮ ಫೌಂಡೇಶನ್ ಮೂಲಕ ನಡೆದ ೩೨ ಆರೋಗ್ಯ ಶಿಬಿರಗಳಲ್ಲಿ ಸರಾಸರಿ ೩೦೦ಕ್ಕೂ ಹೆಚ್ಚು ಜನರು ಪ್ರತಿ ಶಿಬಿರದಲ್ಲಿ ಸೇವೆ ಪಡೆದಿದ್ದು, ಒಟ್ಟಾರೆ ಹತ್ತು ಸಾವಿರಕ್ಕೂ ಅಧಿಕ ಫಲಾನುಭವಿಗಳು ಈ ಮಾನವೀಯ ಸೇವೆಯ ಪ್ರಯೋಜನ ಪಡೆದಿದ್ದಾರೆ ಎಂದು ವಿವರಿಸಿದರು.

ಸಹಾಯ ಹಾಗೂ ದಾನ ನಿಜವಾದ ಅಗತ್ಯವಿರುವವರಿಗೆ ಮಾತ್ರ ತಲುಪಬೇಕು ಎಂಬುದು ಅತ್ಯಂತ ಮಹತ್ವದ ವಿಷಯ ಎಂದು ಉಲ್ಲೇಖಿಸಿದ ಅವರು, ಹಸಿದವನಿಗೆ ನೀಡುವ ಒಂದು ಮುಷ್ಟಿ ಅನ್ನ ಜೀವಮಾನಪೂರ್ತಿ ನೆನಪಾಗುತ್ತದೆ. ಆದರೆ ಅಗತ್ಯವಿಲ್ಲದವರಿಗೆ ಒತ್ತಾಯದಿಂದ ನೀಡುವ ಸಹಾಯ ಭಾರವಾಗಬಹುದು ಎಂದು ಅಭಿಪ್ರಾಯಪಟ್ಟರು.

ಮಾನವೀಯತೆ, ಸಂವೇದನೆ ಹಾಗೂ ಅಗತ್ಯದ ಆಧಾರದ ಮೇಲೆ ಸಹಾಯ ನೀಡಿದಾಗ ಮಾತ್ರ ಅದರ ಸಾರ್ಥಕತೆ ಹೆಚ್ಚುತ್ತದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳ ಅಗತ್ಯತೆ ವಿವರಿಸಿದ ಅವರು, ಕಾಲಾಭಾವ, ಆರ್ಥಿಕ ಸಂಕಷ್ಟ ಮತ್ತು ಕೆಲಸದ ಒತ್ತಡದ ಕಾರಣದಿಂದ ಅನೇಕರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮ ಗ್ರಾಮಗಳಲ್ಲಿ ನಡೆಯುವ ಉಚಿತ ಆರೋಗ್ಯ ಶಿಬಿರಗಳು ಜನಸಾಮಾನ್ಯರಿಗೆ ಸಮಯೋಚಿತ ಹಾಗೂ ಅರ್ಥಪೂರ್ಣ ನೆರವಾಗುತ್ತವೆ.

ಕಣ್ಣು ಮಾನವನ ದೇಹದ ಅತ್ಯಂತ ಅಮೂಲ್ಯ ಅಂಗ. ದೃಷ್ಟಿ ಇದ್ದಾಗಲೇ ವ್ಯಕ್ತಿಗೆ ಜೀವನ, ಸಮಾಜ ಮತ್ತು ಪರಿಸರ ಸಂಪೂರ್ಣವಾಗಿ ಗ್ರಹಿಸಲು ಸಾಧ್ಯ . ಆದ್ದರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳು ಸಮಾಜ ಸೇವೆ ಅವಿಭಾಜ್ಯ ಅಂಗವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರಸಾದ್ ನೇತ್ರಾಲಯದ ವೈದ್ಯರು, ಅಮ್ಮ ಫೌಂಡೇಶನ್ ಸ್ವಯಂಸೇವಕರು ಹಾಗೂ ಎಲ್ಲಾ ಸಹಭಾಗಿಗಳಿಗೆ ಸುಧಾಕರ್ ಎಸ್. ಶೆಟ್ಟಿ ಧನ್ಯವಾದ ಸಲ್ಲಿಸಿದರು. ಈ ಶಿಬಿರದಲ್ಲಿ ಬಸರಿಕಟ್ಟೆ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರು ಭಾಗವಹಿಸಿ ಉಚಿತವಾಗಿ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಸೇವೆ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧನ್ಯೋಸ್ಮಿ ತಂಡದ ಸಾಧನೆಗಳ ಕಿರು ಹೊತ್ತಿಗೆ ಬಿಡುಗಡೆ
ಮಾಜಿ ಸೈನಿಕರು ಸೌಲಭ್ಯ ಪಡೆಯಲು ಸಂಘಟನೆ ಅಗತ್ಯ-ಪಾಟೀಲ