ವಿಜಯಪುರ: ಗ್ರಾಫಿಕ್ ಡಿಸೈನ್ ಎನ್ನುವುದು ಪ್ರಸ್ತುತ ದಿನಗಳಲ್ಲಿ ಬಹುಬೇಡಿಕೆಯ ಕಲೆಯಾಗಿದ್ದು, ಈ ಕಾರ್ಯಾಗಾರದಲ್ಲಿ ಎಲ್ಲರು ಸಕ್ರಿಯವಾಗಿ ಭಾಗವಹಿಸುವ ಮೂಲ ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕುಲಸಚಿವ ಶಂಕರ್ಗೌಡ ಸೋಮನಾಳ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಅಹಲ್ಯಬಾಯಿ ಸಂಶೋಧನಾ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ನಡೆದ ಗ್ರಾಫಿಕ್ ಡಿಸೈನಿಂಗ್ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಕ್ಷಣಕ್ಷಣಕ್ಕೂ ತಂತ್ರಜ್ಞಾನದ ವೇಗ ಹೆಚ್ಚುತ್ತಿದೆ. ಅದರ ವೇಗದಲ್ಲಿಯೇ ನಾವೂ ಸಾಗಬೇಕಾದ ಅಗತ್ಯವಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಕೌಶಲ್ಯಗಳನ್ನುಅಳವಡಿಸಿಕೊಳ್ಳಬೇಕು. ಪ್ರತಿ ಹಂತದಲ್ಲಿಯೂ ಜೀವನದಲ್ಲಿ ಗ್ರಾಫಿಕ್ ಡಿಸೈನ್ ಹಾಸುಹೊಕ್ಕಾಗಿದೆ. ಈ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ ಎಂದರು.
ಮುಖ್ಯಸ್ಥೆ ಪ್ರೊ.ಲಕ್ಷ್ಮೀದೇವಿ ವೈ ಮಾತನಾಡಿ, ಜೀವನದಲ್ಲಿ ನಮ್ಮ ಕಲಿಕೆ ಜೊತೆಗೆ ಬೇರೆ ಬೇರೆ ಕೌಶಲ್ಯಗಳನ್ನು ಕಲಿತು ಅಳವಡಿಸಿಕೊಳ್ಳಬೇಕು. ಮಹಿಳೆಯರು ಆರ್ಥಿಕವಾಗಿ ಮುಂದುವರೆಯಲು ಗ್ರಾಫಿಕ್ಸ್ ಕಲಿತರೆ ಬೇರೆಯವರ ಮೇಲೆ ಅವಲಂಬನೆ ತಪ್ಪುತ್ತದೆ ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, ನಾವು ಯಾವಾಗಲೂ ಇತರರಿಗಿಂತ ಭಿನ್ನವಾಗಿ ಕೆಲಸ ಮಾಡಬೇಕು. ಈ ಗ್ರಾಫಿಕ್ ಡಿಸೈನಿಂಗ್ ಕೌಶಲ ಕಲಿತು ನಿಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯರು ಮತ್ತು ಸ್ನಾತಕ- ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನಾ ನಿಗಾರ ಸುಲ್ತಾನಾ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಸಂದೀಪ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾರ್ಥನಾ ಗೀತೆಯನ್ನು ಶಿಲ್ಪಾ ಹಾಗೂ ಸಂಗಡಿಗರು ಹಾಡಿದರು. ಸುಷ್ಮಾ ಪವಾರ ನಿರೂಪಿಸಿದರು. ದೀಪಾ ತಟ್ಟಿಮನಿ ವಂದಿಸಿದರು.