ಶಿವಾನಂದ ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಯಲು ಬಹಿರ್ದೆಸೆ ಮುಕ್ತ ದೇಶವಾಗಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಂಡು ಕೋಟ್ಯಂತರ ಅನುದಾನ ನೀಡುತ್ತಿದೆ. ಆದರೆ, ಬಿಜೆಪಿಯೇ ಆಡಳಿತದಲ್ಲಿರುವ ರಬಕವಿ-ಬನಹಟ್ಟಿ ನಗರಸಭೆಯ ವಾರ್ಡ್ ನಂ.17ರಲ್ಲಿ ಮಹಿಳೆಯರಿಗೆ ಇಂದಿಗೂ ಬಯಲು ಜಾಗವೇ ಬಹಿರ್ದೆಸೆಗೆ ಆಸರೆಯಾಗಿದ್ದು, ನಗರಕ್ಕೆ ಕಪ್ಪುಚುಕ್ಕೆಯಾಗಿದೆ.ರಬಕವಿಯ ಸಾಬೋಜಿ ಲೇನ್ನಲ್ಲಿನ ಬಸವ್ವಾಯಿ ದಡ್ಡಿ ಎಂದೇ ಖ್ಯಾತಿಯ ಮಹಿಳೆಯರ ಬಯಲು ಶೌಚಪ್ರದೇಶ ೬ ದಶಕಗಳಿಂದಲೂ ಬಳಕೆಯಲ್ಲಿದ್ದು, 30-40 ಅಡಿ ಅಗಲ, 80ಕ್ಕೂ ಅಧಿಕ ಅಡಿ ಉದ್ದದ ಬಯಲು ಜಾಗ ವಾರ್ಡನ ಮುತ್ತೂರ ಗಲ್ಲಿ, ಮಟ್ಟಿಕಲ್ಲಿ ಲೇನ್, ಯಾತಗೇರಿ ಲೇನ್, ಗಿಡವೀರ ಲೇನ್ ಪ್ರದೇಶಗಳ ಮಹಿಳೆಯರಿಗೆ ಬಹಿರ್ದೆಸೆಗೆ ಈ ಇದೇ ಆಸರೆಯಾಗಿದೆ.
ನಾಗರಿಕರ ನರಕಯಾತನೆ:೬ ದಶಕಗಳ ಕಾಲ ಪರಿಸರದ ವಿನಾಶಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಈ ಬಯಲುಶೌಚ ತಾಣ ತನ್ನ ದುರ್ನಾತದಿಂದ ಸುತ್ತಲಿನ ಯಾತಗೇರಿ ಲೇನ್, ಮಟ್ಟಿಕಲ್ಲಿ ಲೇನ್, ಸಾಬೋಜಿ ಲೇನ್ ಮತ್ತು ಅಗಸಿಓಣಿ ಪ್ರದೇಶಗಳ ಜನತೆಗೆ ನಿತ್ಯ ನರಕವನ್ನೇ ಸೃಷ್ಟಿಸುತ್ತಿದೆ. ಇಷ್ಟೊಂದು ಸಮಸ್ಯೆಯಿದ್ದರೂ ನಗರಸಭೆ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ದುರಂತವಾಗಿದೆ.
ಸಾರ್ವಜನಿಕ ಶೌಚಾಲಯಗಳೇ ಇಲ್ಲ:ವಾರ್ಡ್ ನಂ.೧೭ರಲ್ಲಿ ಸಾರ್ವಜನಿಕ ಶೌಚಾಲಯಗಳೇ ಇಲ್ಲ. ಅಗಸಿಓಣಿ, ಹರಿಜನ ಕೇರಿ ಪ್ರದೇಶಗಳ ಮಹಿಳೆಯರಿಗೆ ತ್ರಿಶಲಾದೇವಿ ಕಣ್ಣಿನ ಆಸ್ಪತ್ರೆಯ ಹಿಂಭಾಗದಲ್ಲಿನ ವಿಶಾಲ ಪ್ರದೇಶದಲ್ಲಿ ಬಯಲುಶೌಚಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೂ ಅಲ್ಲಿನ ರಸ್ತೆಯನ್ನು ಖಾಸಗಿಯವರು ಮುಚ್ಚಿರುವುದರಿಂದ ಮಹಿಳೆಯರು ಬಹಿರ್ದೆಸೆಗೆ ತೆರಳಲು ಆಗುತ್ತಿಲ್ಲ. ಹರಿಜನ ಕೇರಿ ಬಳಿಯಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆಯಾದರೂ ನೀರು, ಬೆಳಕಿಲ್ಲದೆ ಪಾಳು ಬಿದ್ದಿದೆ.
ಬಯಲು ಶೌಚಮುಕ್ತಗೊಳಿಸಲು ನಿರಾಶಕ್ತಿ:ನಗರಕ್ಕೆ ಕಪ್ಪುಚುಕ್ಕಿಯಾಗಿರುವ ಬಸವ್ವಾಯಿ ದಡ್ಡಿಯನ್ನು ಬಯಲು ಶೌಚಮುಕ್ತಗೊಳಿಸಲು ಈ ಜಾಗದ ಕೋಟೆಗೋಡೆಯ ಹಿಂದೆಯೇ ನೂತನವಾಗಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಕ್ಕೆ ಹೋಗಲು ಈಗಾಗಲೇ ೮೦- ೩೦ ಅಡಿ ಅಗಲದಲ್ಲಿ ಸಿಸಿ ಹಾಕಿದ ಜಾಗವನ್ನೇ ರಸ್ತೆಯನ್ನಾಗಿಸಿ ಶೌಚಾಲಯಕ್ಕೆ ನೀರು, ವಿದ್ಯುತ್ ಸಂಪರ್ಕ ನೀಡಿದಲ್ಲಿ ಮಹಿಳೆಯರು ನಿರಾತಂಕವಾಗಿ ಶೌಚಾಲಯಕ್ಕೆ ಹೋಗಲು ಸಾಧ್ಯವಾಗಲಿದ್ದು, ಬಯಲು ಬಹಿರ್ದೆಶೆಯ ಅನಿಷ್ಠಕ್ಕೂ ಅಂತ್ಯ ಹಾಡಬಹುದಾಗಿದೆ.
ಸಾರ್ವಜನಿಕ ಶೌಚಾಲಯಕ್ಕೆ ಸುತ್ತು ಬಳಸಿ ರಸ್ತೆಯಲ್ಲಿ ತೆರಳಬೇಕೆಂದರೆ ಸಿಸಿ ಹಾಕಿರುವ ಬೈಪಾಸ್ ರಸ್ತೆ ಪುರುಷರ ಬಯಲುಶೌಚದ ಅಧಿಕೃತ ಜಾಗೆಯಂತಾಗಿದ್ದು, ಮಹಿಳೆಯರು ಇಲ್ಲಿಂದ ದಾಟಿ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಹಿಳೆಯರಿಗೆ ಅನಿವಾರ್ಯವಾಗಿ ಬಸವ್ವಾಯಿ ದಡ್ಡಿಯೇ ಬಹಿರ್ದೆಸೆಯ ಅಡ್ಡೆಯಾಗಿದೆ.ವಾರ್ಡ್ ನಂ.೧೭ರಲ್ಲಿ ಶೌಚಾಲಯಗಳ ಕೊರತೆ ಹೊರತುಪಡಿಸಿದರೆ ಉಳಿದ ಎಲ್ಲ ಸೌಕರ್ಯಗಳೂ ಇವೆ. ನಗರಸಭೆಯ ಸದಸ್ಯರು ಮತ್ತು ಅಧಿಕಾರಿಗಳು ಈ ಕಡೆಗೆ ಗಮನ ಹರಿಸಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕಿದೆ. ಅಗಸಿಓಣಿ, ಕಡಾಲಕಟ್ಟಿ, ಹರಿಜನ ಕೇರಿ ಪ್ರದೇಶಗಳ ಮಹಿಳೆಯರಿಗೆ ಈಗಿರುವ ಬಯಲುಶೌಚ ಜಾಗೆಗಳಲ್ಲೇ ಶೌಚಾಲಯ ನಿರ್ಮಿಸಲು ಸಾಧ್ಯವಿದೆ.
ನಗರಸಭೆ ಸದಸ್ಯರ ಮತ್ತು ಅಧಿಕಾರಿಗಳು ಇಚ್ಛಾಶಕ್ತಿ ತೋರಿಸಿದರೆ ಈ ಸಮಸ್ಯೆಗೆ ಪರಿಹಾರ ಸಾಧ್ಯವಿದ್ದು, ಹಳ್ಳದ ದಂಡೆಯ ನಗರಸಭೆ ಮಾಲೀಕತ್ವದ ವಿಶಾಲ ಜಾಗದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಾರ್ವಜನಿಕ ಶೌಚಾಲಯ ನಿರ್ಮಿಸಿ ನೀರು, ವಿದ್ಯುತ್ ಸೌಕರ್ಯ ಕಲ್ಪಿಸಿದಲ್ಲಿ ಸ್ವಚ್ಛ ಭಾರತ್ ಅಭಿಯಾನ ನನಸಾಗಬಲ್ಲದು. ಇಲ್ಲವಾದಲ್ಲಿ ಸ್ವಚ್ಛ ಭಾರತ್ ಅಭಿಯಾನ ಹಳ್ಳ ಹಿಡಿಯೋದು ಮಾತ್ರ ಗ್ಯಾರಂಟಿ!ಬಸವ್ವಾಯಿ ದಡ್ಡಿಯಲ್ಲಿನ ಜಾಗದ ಪಕ್ಕದ ಪಟ್ಟಣ, ಸಾಬೋಜಿ ಮತ್ತು ಜೋತಾವರ ಮನೆಯವರೊಡನೆ ಮಾತನಾಡಿ ಈಗಾಗಲೇ ಹಾಕಿರುವ ಕಾಂಕ್ರೀಟ್ನ್ನು ರಸ್ತೆಯಾಗಿ ಪರಿವರ್ತಿಸಿ ನೂತನವಾಗಿ ನಿರ್ಮಿಸಿರುವ ಶೌಚಾಲಯಕ್ಕೆ ಬೆಳಕು ಹಾಗೂ ನೀರಿನ ವ್ಯವಸ್ಥೆ ಮಾಡಿದಲ್ಲಿ ಗಿಡವೀರ, ಮಟ್ಟಿಕಲ್ಲಿ, ಸಾಬೋಜಿ ಮತ್ತು ಯಾತಗೇರಿ ಲೇನ್ ಮಹಿಳೆಯರಿಗೆ ಅನುಕೂಲವಾಗುತ್ತದೆ. ಅಗಸಿಓಣಿ, ಹರಿಜನ ಕೇರಿ ಮತ್ತು ಕಡಾಲಕಟ್ಟಿ ಓಣಿ ಮಹಿಳೆಯರಿಗೆ ಕೃಷ್ಣಾ ರಸ್ತೆಯಲ್ಲಿನ ಬಯಲುಶೌಚದ ಜಾಗದಲ್ಲಿ ಶೌಚಗೃಹ ನಿರ್ಮಿಸುವುದು ಮತ್ತು ಈಗಾಗಲೇ ಹರಿಜನಕೇರಿ ಬಳಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಕ್ಕೆ ನೀರಿನ ಸೌಕರ್ಯ ಒದಗಿಸಬೇಕಿದೆ. ನಗರಸಭೆ ಹಳ್ಳದ ಬಳಿಯ ತನ್ನ ಮಾಲೀಕತ್ವದ ಜಾಗದಲ್ಲಿ ಪುರುಷರಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಿಸಿದರೆ ಮಾತ್ರ ಈ ನರಕಯಾತನೆಯಿಂದ ಜನರನ್ನು ಹೊರತರಬಹುದಾಗಿದೆ.-ಪರಪ್ಪ ಉಮದಿ ನಾಗರಿಕರು ರಬಕವಿವಾರ್ಡನಲ್ಲಿ ಶೌಚಾಲಯ ಸಮಸ್ಯೆಯ ನಿವಾರಣೆಗೆ ಈಗಾಗಲೇ ಕ್ರಿಯಾಯೋಜನೆ ರೂಪಿಸಲಾಗಿದೆ. ಬಸವ್ವಾಯಿ ದಡ್ಡಿಗೆ ತೆರಳುವ ಮಹಿಳೆಯರ ಅನುಕೂಲತೆಗೆ ಹಿಂಬದಿಯಲ್ಲಿನ ಶೌಚಾಲಯವನ್ನು ಮುಕ್ತಗೊಳಿಸಲಾಗುತ್ತದೆ. ಅಲ್ಲಿ ಪ್ರಖರ ಬೆಳಕು ಮತ್ತು ನೀರಿನ ಸೌಕರ್ಯ ಕಲ್ಪಿಸಲು ಮತ್ತು ಬೈಪಾಸ್ ರಸ್ತೆ ಅಕ್ಕಪಕ್ಕದಲ್ಲಿ ಬಯಲುಶೌಚ ತಡೆಯಲು ಪುರುಷರ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಪೌರಾಯುಕ್ತರು ಮತ್ತು ಅಧಿಕಾರಿಗಳೊಡನೆ ಸ್ಥಳ ವೀಕ್ಷಣೆ ಮಾಡಲಾಗಿದ್ದು, ಆಯವ್ಯದಲ್ಲಿ ಅನುದಾನ ಪಡೆದುಕೊಂಡು ಶೀಘ್ರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
- ಸಂಜಯ ವೀರಪ್ಪ ತೆಗ್ಗಿ. ಮಾಜಿ ನಗರಾಧ್ಯಕ್ಷ, ಹಾಲಿ ಸದಸ್ಯ ವಾರ್ಡ ನಂ.17