ರೋಣ: ಸಂಸಾರದಲ್ಲಿದ್ದು ಪಾರಮಾರ್ಥಿಕ ಜೀವನ ಕಂಡುಕೊಂಡು, ಪ್ರತಿಯೊರ್ವ ಮಹಿಳೆಗೂ ಆದರ್ಶನೀಯರಾದ ಹೇಮರಡ್ಡಿ ಮಲ್ಲಮ್ಮ ಸ್ತ್ರೀ ಕುಲದ ಅನರ್ಘ್ಯ ರತ್ನರಾಗಿದ್ದು, ಅವರ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದು ಮಾಜಿ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಜೀವನದಲ್ಲಿ ಮಹಿಳೆಯರ ಪಾತ್ರ ಎಷ್ಟು ಮುಖ್ಯ ಅರಿಯಬೇಕು. ಸಾಮಾನ್ಯ ಕುಟುಂಬದಲ್ಲಿ ಬಂದ ಮಲ್ಲಮ್ಮ ಮಹಾಸಾಧ್ವಿಯಾಗಿ ಶ್ರಮಿಸಿದ ರೀತಿ ಎಲ್ಲ ಮಹಿಳೆಯರಿಗೂ ಮಾದರಿಯಾಗುವಂತದ್ದು, ಇಂದಿನ ಮಹಿಳೆಯರು ಅತ್ತೆ ಮಾವಂದಿರೊಂದಿಗೆ ಹೊಂದಿಕೊಂಡು ಕುಟುಂಬಕ್ಕೆ ಮಾದರಿಯಾಗಿ ಬದುಕು ನಡೆಸುವಲ್ಲಿ ಮುಂದಾಬೇಕು. ಪ್ರತಿಯೊಂದು ಮನೆಗೂ ಮಲ್ಲಮ್ಮನಂತವರು ಇರಬೇಕು. ಶಿವಶರಣೆ ಮಲ್ಲಮ್ಮನವರ ಆದರ್ಶತೆ, ಸರಳ ಜೀವನವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವಿಭಕ್ತ ಕುಟುಂಬಗಳು ಇಂದು ಕಾಣುತ್ತಿಲ್ಲ. ಕೂಡಿ ಬಾಳುವ ಕುಟುಂಬಗಳಿರಬೇಕು. ಈ ನಿಟ್ಟಿನಲ್ಲಿ ಮನೆಯಲ್ಲಿನ ತಾಯಂದಿರರ ಪಾತ್ರ ಪ್ರಮುಖ. ಮನೆಯಲ್ಲಿರುವವರು ಸಹನಾಶೀಲರಾಗಿರಬೇಕು ಎಂದರು
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಹೇಮರಡ್ಡಿ ಮಲ್ಲಮ್ಮರ ಜಯಂತಿಯನ್ನು ಪ್ರತಿ ವರ್ಷವು ವಿಜೃಂಭಣೆಯಿಂದ, ಮಹತ್ವಪೂರ್ಣವಾಗಿ ಆಚರಣೆ ಮಾಡುತ್ತ ಬರುತ್ತಿದ್ದು , ಮಲ್ಲಮ್ಮರ ಜೀವನವು ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ, ಇಡೀ ಮನುಕುಲದ ಸಮಾಜಕ್ಕೆ ಮಲ್ಲಮ್ಮರ ಜೀವನ ಆದರ್ಶಮಯವಾದದು ಎಂದರು.ಮಹತ್ವದ ಘಟ್ಟದಲ್ಲಿ ರಡ್ಡಿ ಸಮಾಜವಿದ್ದು, ಒಂದಾಗಿ ಮುನ್ನಡೆಯುವಲ್ಲಿ ಗಮನಹರಿಸಬೇಕಿದೆ. ರಡ್ಡಿ ಹಾಗೂ ವೀರಶೈವ ಲಿಂಗಾಯತ ಸಮಾಜ ಒಗ್ಗೂಡಿ ನಡೆಯಬೇಕು.ಇದಕ್ಕೆ ಯಾವುದೇ ರೀತಿಯ ವಿರೋಧ ಮಾಡಬಾರದು. ವೀರಶೈವ ಲಿಂಗಾಯತ ರಡ್ಡಿ ಎಂಬುದನ್ನು ಜಾತಿ ಗಣತಿ ಸಂದರ್ಭದಲ್ಲಿ ಬರೆಯಿಸಬೇಕು. ಈ ರೀತಿ ಮಾಡಿದಲ್ಲಿ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಇಲ್ಲವಾದಲ್ಲಿ ಮುಂದಿನ ಪೀಳಿಗ ಶಾಪ ನಮಗೆ ತಟ್ಟಲಿದೆ ಎಂದರು.
ಸಾನಿಧ್ಯವನ್ನು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿರಾಧ್ಯ ಶಿವಾಚಾರ್ಯ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.ಪ್ರಾಸ್ತಾವಿಕವಾಗಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರಡ್ಡಿ ಯುವ ಘಟಕ ರಾಜ್ಯಾಧ್ಯಕ್ಷ ಅನೀಲಕುಮಾತ ತೆಗ್ಗಿನಕೇರಿ ಮಾತನಾಡಿದರು. ಲಿಂಗಾರಡ್ಡಿ ಆಲೂರ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಬಸವರಾಜ ದೇವರು, ವಿಶ್ವನಾಥ ದೇವರು, ಐ.ಎಸ್. ಪಾಟೀಲ, ಮಿಥುನ ಜಿ. ಪಾಟೀಲ, ಶೇಖರಗೌಡ ಮಾಲಿಪಾಟೀಲ, ಶರಣಗೌಡ ಪಾಟೀಲ ಸರ್ಜಾಪೂರ, ಅಕ್ಷಯ ಪಾಟೀಲ, ಜಗದೀಶ ಆವರಡ್ಡಿ, ಮಲ್ಲಣ್ಣ ಗಡಗಿ, ರಂಗನಾಥಗೌಡ ಕೆಂಪಲಿಂಗಗೌಡ ಸೇರಿದಂತೆ ಮತ್ತಿತರರು ಉಪಸ್ಥಿತಿತರಿದ್ದರು. ಅಂದಾನೇಶ ಅರಹುಣಸಿ ಸ್ವಾಗತಿಸಿದರು.