ಶ್ರೀದೇವಿ, ಭೂದೇವಿಯರ ಅಂಗಮಣಿ ಉತ್ಸವ, ಅಶ್ವವಾಹನೋತ್ಸವ ವೈಭವ

KannadaprabhaNewsNetwork |  
Published : Jan 18, 2024, 02:02 AM IST
17ಕೆಎಂಎನ್ ಡಿ18,19 | Kannada Prabha

ಸಾರಾಂಶ

ಮೇಲುಕೋಟೆ ಶ್ರೀದೇವಿ- ಭೂದೇವಿಯರ ಪ್ರಖ್ಯಾತ ಅಂಗಮಣಿ ಉತ್ಸವ ಮತ್ತು ಚೆಲುವನಾರಾಯಣಸ್ವಾಮಿ ಅಶ್ವವಾಹನೋತ್ಸವ ಮಂಗಳವಾರ ರಾತ್ರಿ ವೈಭವದಿಂದ ನೆರವೇರಿತು. ಶ್ರೀಚೆಲುವನಾರಾಯಣ ಸ್ವಾಮಿ ದೇವಾಲಯದಿಂದ ಅಶ್ವವಾಹನೋತ್ಸವದ ವಾಹನೋತ್ಸವ ಮಂಟಪಕ್ಕೆ ಬಿರುಸಿನಿಂದ ಓಡೋಡಿ ಬರುವ ಉತ್ಸವದ ಸಂಭ್ರಮದ ಕ್ಷಣಗಳನ್ನು ಕಂಡು ಪುಳಕಿತರಾಗಿ ಹರ್ಷೋದ್ಘಾರ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಲುಕೋಟೆ ಶ್ರೀದೇವಿ- ಭೂದೇವಿಯರ ಪ್ರಖ್ಯಾತ ಅಂಗಮಣಿ ಉತ್ಸವ ಮತ್ತು ಚೆಲುವನಾರಾಯಣಸ್ವಾಮಿ ಅಶ್ವವಾಹನೋತ್ಸವ ಮಂಗಳವಾರ ರಾತ್ರಿ ವೈಭವದಿಂದ ನೆರವೇರಿತು.

ದೇವಿಯರ ವಿಶೇಷ ಅಲಂಕಾರದ ವೈಭವದ, ಸಜ್ಜೆಹಟ್ಟಿ ಮಂಟಪದಲ್ಲಿ ಮಡಿಲು ತುಂಬುವ ವೈಭವವನ್ನು ಕಣ್ತುಂಬಿಕೊಂಡು ಭಕ್ತರು ತಡರಾತ್ರಿಯವರೆಗೆ ಕಾದಿದ್ದು ಕಂಡು ಬಂತು.

ಶ್ರೀಚೆಲುವನಾರಾಯಣ ಸ್ವಾಮಿ ದೇವಾಲಯದಿಂದ ಅಶ್ವವಾಹನೋತ್ಸವದ ವಾಹನೋತ್ಸವ ಮಂಟಪಕ್ಕೆ ಬಿರುಸಿನಿಂದ ಓಡೋಡಿ ಬರುವ ಉತ್ಸವದ ಸಂಭ್ರಮದ ಕ್ಷಣಗಳನ್ನು ಕಂಡು ಪುಳಕಿತರಾಗಿ ಹರ್ಷೋದ್ಘಾರ ಮಾಡಿದರು.

ತವರು ಮನೆಯ ಸಿರಿಯನ್ನು ಬಿಂಬಿಸುವ ಶ್ರೀದೇವಿ ಭೂದೇವಿಯರ ಉತ್ಸವ ರಾತ್ರಿ 8.15ರ ಸಮಯದಲ್ಲಿ ಆರಂಭವಾಗಿ 11.30 ಗಂಟೆಗೆ ಮುಕ್ತಾಯವಾಯಿತು. ಮಹಾ ಮಂಗಳರಾತಿ ನಂತರ ದೇವಾಲಯದ ಒಳಪ್ರಾಕಾರದಲ್ಲಿ ನಡೆದ ಉತ್ಸವ ನಡೆಮಡಿಯೊಂದಿಗೆ ಅಂಗಮಣಿ ಮಂಟಪಕ್ಕೆ ತಲುಪಿತು. ಅಲ್ಲಿ ದೇವಿಯರಿಗೆ ವೈವಿಧ್ಯಮಯ ಹಣ್ಣುಗಳಿಂದ ಮಡಿಲು ತುಂಬುವ ಕೈಂಕರ್ಯ ನೆರವೇರಿಸಲಾಯಿತು. ಸ್ಥಾನಾಚಾರ್ಯರಾದ ಕರಗಂನಾರಾಯಣ ಅಯ್ಯಂಗಾರ್ ಮತ್ತು ಸಜ್ಜೆಹಟ್ಟಿಗುರುಗಳಾದ ತಿರುನಾರಾಯಣ ಅಯ್ಯಂಗಾರ್ ಗುರುಪೀಠದಿಂದ ಅಂಗಮಣಿ ಉತ್ಸವದ ಕೈಂಕರ್ಯಗಳು ನೆರವೇರಿದವು.

ಅಂಗಮಣಿ ಮಂಟಪ ಸರಳ ವಿದ್ಯುತ್ ದೀಪಾಲಂಕಾರ ಮತ್ತು ತಳಿರು ತೋರಣಗಳಿಂದ ಅಲಂಕೃತವಾಗಿತ್ತು.

ಮೊಲ ಅಡ್ಡ ಉತ್ಸವದ ವಿಶೇಷ:

ತವರು ಮನೆಗೆ ಹೋದ ದೇವಿಯರು ಬರುವುದು ತಡವಾದಾಗ ಕೋಪಗೊಂಡ ಚೆಲುವನಾರಾಯಣ ಕುದುರೆಯೇರಿ ಹೊರಟಾಗ ದಾರಿ ಮಧ್ಯೆ ಮೂರು ಸಲ ಮೊಲಬಂದು ಮತ್ತೆ ಸ್ವಾಮಿ ದೇವಾಲಯಕ್ಕೆ ಬರುವ ಆಚರಣೆಯ ಕ್ಷಣಗಳನ್ನು ವೀಕ್ಷಿಸಲು ಸುತ್ತಮುತ್ತಲಹಳ್ಳಿಗಳ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು ರಾತ್ರಿ 11.30 ಕ್ಕೆ ಆರಂಭವಾದ ಅಶ್ವವಾಹತ್ಸವ ತಡರಾತ್ರಿ ವೇಳೆಗೆ ಮುಕ್ತಾಯವಾಯಿತು.

ಕಣ್ಮನ ಸೂರೆಗಂಡ ಹಣ್ಣುಗಳ ತಟ್ಟೆಯ ವೈಭವ:

ಅಂಗಮಣಿ ಉತ್ಸವದ ನಿಮಿತ್ತ ದೇವಿಯರಿಗೆ ಅರ್ಪಿಸಲು ಸಜ್ಜೆಹಟ್ಟಿ ಮತ್ತು ಕರಗಂ ಗುರುಪೀಠಗಳಲ್ಲಿ ಹಣ್ಣು, ಹೂ, ತರಕಾರಿಗಳನ್ನು ನೂರಾರು ತಟ್ಟೆಗಳಲ್ಲಿ ಜೋಡಿಸಿದ್ದು ಭಕ್ತರ ಕಣ್ಮನಗೊಂಡಿತು.

ಮಧ್ಯಾಹ್ನ 4 ಗಂಟೆಯಿಂದಲೇ ತಂಡೋಪ ತಂಡವಾಗಿ ಆಗಮಿಸುತ್ತಿದ್ದ ನೂರಾರು ಸಂಖ್ಯೆಯ ಭಕ್ತರು ತಟ್ಟೆವೀಕ್ಷಣೆ ಮಾಡಿದರು. ಬುಧವಾರ ದೇವಿಯರಿಗೆ ಅರ್ಪಿಸಲು ಜೋಡಿಸಿದ್ದ ಹಣ್ಣು-ತರಕಾರಿಗಳಿಂದ ರಸಾಯನ, ಕದಂಬ, ಪಾಯಸ ಮಾಡಿ ದೇಗುಲಕ್ಕೆ ಬಂದ ಎಲ್ಲಾ ಭಕ್ತರಿಗೆ ಪ್ರಸಾದರೂಪವಾಗಿ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಡ್ರಗ್ಸ್‌ ವಾಸನೆ ತಡೆಗೆ ನಾಯಿಗಳ ಮಲಮೂತ್ರ!
ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಭರದ ಸಿದ್ಧತೆ