ಮಂಗಳೂರು: ಆಶಾ ಕಾರ್ಯಕರ್ತೆಯರ ಮೇಲಿನ ಹೆಚ್ಚುತ್ತಿರುವ ಡಿಜಿಟಲ್ ಕೆಲಸದ ಒತ್ತಡ, ಪ್ರೋತ್ಸಾಹ ಧನ ವಿಳಂಬ ಹಾಗೂ ಸೇವಾ ಭದ್ರತೆ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾ ಆಶಾ ಕಾರ್ಯಕರ್ತೆಯರು ಹಾಗೂ ಜಿಲ್ಲಾ ಭಾರತೀಯ ಮಜ್ದೂರು ಸಂಘ (ಬಿಎಂಎಸ್)ದ ಮುಂದಾಳತ್ವದಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಆರ್. ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಜಾರಿಯಲ್ಲಿರುವ ‘ಸಮಸ್ತ’ ಡಿಜಿಟಲ್ ಆರೋಗ್ಯ ಮಾಹಿತಿ ವ್ಯವಸ್ಥೆ ಮೂಲಕ ಆಶಾ ಕಾರ್ಯಕರ್ತೆಯರ ಮೇಲೆ ಅತಿಯಾದ ಡಿಜಿಟಲ್ ಕೆಲಸದ ಹೊರೆ ಹೇರಲಾಗುತ್ತಿದ್ದು, ಮನೆಮನೆ ಭೇಟಿ, ಗರ್ಭಿಣಿಯರ ಆರೈಕೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಗಳ ಜೊತೆಗೆ ಗಂಟೆಗಟ್ಟಲೆ ಡೇಟಾ ದಾಖಲಿಸುವ ಅನಿವಾರ್ಯತೆ ಉಂಟಾಗಿದೆ ಎಂದು ತಿಳಿಸಲಾಗಿದೆ. ಇದರಿಂದ ಆರೋಗ್ಯ ಸೇವೆಯ ಗುಣಮಟ್ಟಕ್ಕೂ ಧಕ್ಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಬಿಎಂಎಸ್ ದ.ಕ. ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು. ಮಾತನಾಡಿ, ಆಶಾ ಕಾರ್ಯಕರ್ತೆಯರು ಕೊರೊನಾ ಸೇರಿದಂತೆ ಸಂಕಷ್ಟದ ಸಂದರ್ಭಗಳಲ್ಲಿ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸಿದ್ದರೂ, ಇಂದು ಅವರಿಗೆ ತಕ್ಕ ಗೌರವ, ಭದ್ರತೆ ಹಾಗೂ ನ್ಯಾಯ ದೊರೆಯುತ್ತಿಲ್ಲ. ಸಮಸ್ತ ಆ್ಯಪ್ನ ಹೆಚ್ಚುವರಿ ಒತ್ತಡವನ್ನು ಹಿಂಪಡೆಯಬೇಕು, ಪ್ರೋತ್ಸಾಹ ಧನವನ್ನು ನಿಗದಿತ ದಿನಾಂಕಕ್ಕೆ ಪಾವತಿಸಬೇಕು ಹಾಗೂ ನಾಲ್ಕು ವರ್ಷಗಳಿಂದ ಹೆಚ್ಚಳವಾಗದಿರುವ ಧನವನ್ನು ತಕ್ಷಣ ಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.ಸಮಸ್ತ ಆ್ಯಪ್ನ ಹೆಚ್ಚುವರಿ ಕೆಲಸದ ಒತ್ತಡ ರದ್ದುಪಡಿಸುವುದು, ಪ್ರೋತ್ಸಾಹ ಧನವನ್ನು ಸಮಯಕ್ಕೆ ಬಿಡುಗಡೆಗೊಳಿಸುವುದು, ಪ್ರೋತ್ಸಾಹ ಧನ ಹೆಚ್ಚಳ ಹಾಗೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ಮಟ್ಟದ ಸಮಿತಿ ರಚಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.