ಕೃಷಿಯೊಂದಿಗೆ ಪಶು ಸಂಗೋಪನೆ ಮಾಡಿದರೆ ಅನುಕೂಲ: ಶಾಸಕ ಯು.ಬಿ. ಬಣಕಾರ

KannadaprabhaNewsNetwork | Published : Dec 16, 2024 12:47 AM

ಸಾರಾಂಶ

ರೈತರು ಹೈನುಗಾರಿಕೆ ಅಥವಾ ಕುರಿ ಸಾಕಾಣಿಕೆಯಂತಹ ಉಪ ಕಸಬುಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಹಿರೇಕೆರೂರು: ಭಾರತ ಶೇ. ೭೦ರಷ್ಟು ಕೃಷಿ ಪ್ರಧಾನವಾದ ದೇಶ. ಕೃಷಿಯ ಜೊತೆಗೆ ರೈತರು ಪಶು ಸಂಗೋಪನೆ ಬಹಳ ಮುಖ್ಯ. ಇದರಿಂದ ರೈತರ ಆದಾಯ ಮತ್ತು ಆರ್ಥಿಕವಾಗಿ ಬೆಳೆಯುವುದಕ್ಕೆ ಹೆಚ್ಚು ಸಹಾಯವಾಗುತ್ತದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ತಾಲೂಕಿನ ಯೋಗಿಕೊಪ್ಪ ಗ್ರಾಮದಲ್ಲಿ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಹಿರೇಕೆರೂರು ಆಶ್ರಯದಲ್ಲಿ ಮಿಶ್ರ ತಳಿ ಹಸು ಎಮ್ಮೆಗಳ ಪ್ರದರ್ಶನ ಹಾಗೂ ಹಾಲು ಕರೆಯುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಯಾಂತ್ರಿಕ ಬದುಕಿನ ಜೊತೆಗೆ ಹೋಗಲಾರದೇ ಈಗ ಇರುವ ಪರಿಸ್ಥಿತಿಯಲ್ಲಿ ಒಂದೇ ಬೆಳೆಯನ್ನು ಅವಲಂಬಿಸಿ ಜೀವನ ನಡೆಸಲು ಸಾಧ್ಯವಿಲ್ಲ. ಹೀಗಾಗಿ, ಹೈನುಗಾರಿಕೆ ಅಥವಾ ಕುರಿ ಸಾಕಾಣಿಕೆಯಂತಹ ಉಪ ಕಸಬುಗಳಲ್ಲಿಯೂ ತೊಡಗಿಸಿಕೊಳ್ಳಬಹುದಾಗಿದೆ. ಉತ್ತಮ ನಿರ್ವಹಣೆ ಮಾಡಿದರೆ ಲಾಭದಾಯಕ ವ್ಯವಹಾರ ಆಗಬಹುದು. ಜಾನುವಾರ ಸಂರಕ್ಷಣೆಗೆ ಮತ್ತು ಸಾಕಾಣಿಕೆಗೆ ಸರಕಾರ ಮತ್ತು ಇಲಾಖೆಯವರು ರೈತರ ಜೊತೆ ಸದಾ ಇರುತಾರೆ ಎಂದರು,

ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಸಂತಿ ಮಾತನಾಡಿ, ಜಾನುವಾರುಗಳಿಗೆ ರೋಗ ಬರದಂತೆ ನೋಡಿಕೊಳ್ಳಬೇಕು. ಸರಿಯಾದ ವೇಳೆಗೆ ಲಸಿಕೆ ಕೊಡುವುದು ಬಹಳ ಮುಖ್ಯ. ರೈತರು ಒಳ್ಳೆಯ ಹಸುಗಳನ್ನು ಸಾಕಬೇಕು. ಅದರಿಂದ ಆದಾಯ ಹೆಚ್ಚಿ ಆರ್ಥಿಕವಾಗಿ ಪ್ರಬಲಗೊಳ್ಳುತ್ತೀರಿ. ಈ ಕಾರ್ಯಕ್ರಮದ ಉದ್ದೇಶ ಹಸುಗಳನ್ನು ಸಾಕಬೇಕು ಮತ್ತು ಇನ್ನೊಬ್ಬ ರೈತನಿಗೆ ನಾನೂ ಹಸುಗಳನ್ನು ಸಾಕಬೇಕು ಎಂದು ಮನವರಿಕೆ ಆಗಬೇಕು. ಗ್ರಾಮಗಳಲ್ಲಿ ಪ್ರತಿವರ್ಷ ಹೆಚ್ಚು ಹಾಲು ಕರೆಯುವ ಹಸು ಮತ್ತು ಎಮ್ಮೆಗಳ ಸ್ಪರ್ಧೆ ಏರ್ಪಡಿಸಾಲಗುವುದು ಎಂದು ತಿಳಿಸಿದರು.

ಈ ವೇಳೆ ಪಶು ವೈದ್ಯಧಿಕಾರಿ ಡಾ. ಕಿರಣ ಎಲ್., ಡಾ. ಎಲ್.ಡಿ. ನವೀನ ಕುಮಾರ, ಪ್ರವೀಣ ಮರಿಗೌಡ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ, ಚಂದ್ರಶೇಖರ ಮಠದ, ಉಪಾಧ್ಯಕ್ಷೆ ಮಂಜುಳಾ ಹರಿಜನ, ಸದಸ್ಯರಾದ ಕರೇಗೌಡ ಎಂ. ಗೌಡ್ರ, ವನಜಾಕ್ಷಮ್ಮ ಬಣಕಾರ, ಕರೇಗೌಡ ಪಾಟೀಲ್, ನಾಗಪ್ಪ ಅಸುಂಡಿ, ಶಿವು ಮುಳಗುಂದ, ಗ್ರಾಮದ ಮುಖಂಡರು ಇದ್ದರು.

Share this article