ಅಂಶಿ ಪ್ರಸನ್ನಕುಮಾರ್
ಟಿ.ನರಸೀಪುರ ತಾಲೂಕು ಮೂಗೂರಿನ ಜಗದೀಶ್ ಮೂರ್ತಿ ಅವರು ಕಬ್ಬು ಹಾಗೂ ಬಾಳೆ ಬೆಳೆಯಲ್ಲಿ ಹೆಸರು ಮಾಡಿದ್ದಾರೆ.
ಅವರಿಗೆ ಆರು ಎಕರೆ ಜಮೀನಿದೆ. ಕಬಿನಿ ಬಲದಂಡೆ ನಾಲೆಯಿಂದ ನೀರಾವರಿ ಸೌಲಭ್ಯವೂ ಇದೆ. ಕೊಳವೆ ಬಾವಿಯನ್ನು ಕೂಡ ಕೊರೆಸಿದ್ದಾರೆ.ಪಿಯುಸಿವರೆಗೆ ಓದಿರುವ ಅವರು 1982 ರಿಂದಲೂ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಮುಖವಾಗಿ ಭತ್ತ, ಕಬ್ಬು, ಬಾಳೆ ಬೆಳೆಯುತ್ತಾರೆ. ಎರಡೂವರೆ ಎಕರೆಯಲ್ಲಿ ಕಬ್ಬು ಬೆಳೆದಿದ್ದರು. ಪ್ರತಿ ಎಕರೆಗೆ 80 ಟನ್ ಇಳುವರಿ ಬಂದಿತ್ತು. ಮೊದಲು ನಂಜನಗೂಡಿನ ಅಳಗಂಚಿಯಲ್ಲಿರುವ ಬನ್ನಾರಿ ಅಮ್ಮನ್ ಕಾರ್ಖಾನೆಗೆ, ನಂತರ ಕುಂತೂರು ಸಕ್ಕರೆ ಕಾರ್ಖಾನೆಗೆ ಪೂರೈಸುತ್ತಿದ್ದರು. ಕಳೆದ ವರ್ಷ ವಿಳಂಬವಾದ್ದರಿಂದ ಪಾಂಡವಪುರ ಸಕ್ಕರೆ ಕಾರ್ಖಾನೆಗೆ ಪೂರೈಸಿದ್ದರು. ಮೂರು ಕೂಳೆ ಆಗಿದ್ದರಿಂದ ಸಂಪೂರ್ಣವಾಗಿ ತೆಗೆದು, ಮತ್ತೆ ಹೊಸದಾಗಿ ಕಬ್ಬು ನೆಡುತ್ತಿದ್ದಾರೆ. ಎರಡೂವರೆ ಎಕರೆಯಲ್ಲಿ ಜಿ9 ಬಾಳೆ ಬೆಳೆದಿದ್ದಾರೆ. ಇನ್ನೇನು ಫಸಲು ಕೈಸೇರುವ ಹಂತದಲ್ಲಿದೆ. ಕಲ್ಲಂಗಡಿ, ಮಂಗಳೂರು ಸೌತೆ ಕೂಡ ಬೆಳೆಯುತ್ತಾರೆ.ಎತ್ತುಗಳನ್ನು ಸಾಕುತ್ತಾರೆ. ಸಾಮಾನ್ಯವಾಗಿ ಮುಡುಕುತೊರೆ ಜಾತ್ರೆಯಲ್ಲಿ ಮಾರಾಟ ಮಾಡುತ್ತಾರೆ. ಸುತ್ತೂರು ಜೆಎಸ್ಎಸ್ ಕೆವಿಕೆಯಲ್ಲಿ ಮಣ್ಣು ಪರೀಕ್ಷೆ ಮಾಡಿಸುತ್ತಾರೆ. ಕೃಷಿ, ತೋಟಗಾರಿಕೆ ಇಲಾಖೆ, ಎನ್ಆರ್ಇಜಿಯಿಂದ ಸಹಾಯಧನ ಪಡೆದಿದ್ದಾರೆ. ಹನಿ, ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಟ್ರ್ಯಾಕ್ಟರ್, ಟಿಲ್ಲರ್ ಬಾಡಿಗೆಗೆ ಪಡೆಯುತ್ತಾರೆ. ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ಬಳಸುತ್ತಾರೆ. ಅಗತ್ಯವಿರುವೆಡೆ ರಾಸಾಯನಿಕ ಗೊಬ್ಬರ ಕೂಡ ಹಾಕುತ್ತಾರೆ.
ಸಂಪರ್ಕ ವಿಳಾಸ
ಮೂಗೂರು,
ಟಿ.ನರಸೀಪುರ ತಾಲೂಕು
ಮೊ. 90086 20672
ಜಗದೀಶ್ ಮೂರ್ತಿ ಅವರಿಗೆ ಪತ್ನಿ ಮಮತಾ, ಸೋದರ ಧರ್ಮೇಂದ್ರ ಕೃಷಿಯಲ್ಲಿ ಸಂಪೂರ್ಣ ಸಾಥ್ ನೀಡುತ್ತಿದ್ದಾರೆ. ಇವರ ಪುತ್ರ ಎಂ.ಜೆ. ವಿನಯ್ ಮೈಸೂರಿನ ಎಟಿಎಂ ಕಾಲೇಜಿನಲ್ಲಿ ಬಿಇ ಪೂರೈಸೆ, ಬೆಂಗಳೂರಿನಲ್ಲಿ ಹತ್ತು ತಿಂಗಳ ಹೆಚ್ಚುವರಿ ಕೋರ್ಸ್ ಮಾಡಿ, ಅಲ್ಲಿಯೇ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ.