ಕನ್ನಡಪ್ರಭ ವಾರ್ತೆ ಚನ್ನಗಿರಿ
ಪ್ರಸ್ತುತ ವರ್ಷದಲ್ಲಿ ಸೂಕ್ತ ಸಮಯಕ್ಕೆ ಮಳೆ ಬಾರದೆ ರೈತರು ಕಂಗಾಲಾಗಿದ್ದು, ರೈತರು ನೀರಿನ ಬಳಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿ, ಮಿತವಾಗಿ ಬಳಸಿ ಬೆಳೆಗಳ ಬೆಳೆಯಬೇಕು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ ಹೇಳಿದರು.ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದ ಆವರಣದಲ್ಲಿ ಬಸವತತ್ವದ ಮಹಾ ಬೆಳಗಿನಲ್ಲಿ ಬೆಳಗಿದೆ ಲಿಂಗೈಕ್ಯ ಶ್ರೀ ಸಂಗಮನಾಥ ಸ್ವಾಮೀಜಿ 62ನೇ ವರ್ಷದ ಸ್ಮರಣೋತ್ಸವ ಹಾಗೂ ಲಿಂಗೈಕ್ಯ ಶ್ರೀ ಚನ್ನಬಸವ ಸ್ವಾಮೀಜಿ17ನೇ ವರ್ಷದ ಸ್ಮರಣೋತ್ಸವ ಮತ್ತು ಬಸವ ತತ್ವ ಸಮ್ಮೇಳನದ ಎರಡನೇ ದಿನವಾದ ಶನಿವಾರ ನಡೆದ ರೈತ ಸಂಗಮ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿ ರೈತರು ಹೆಚ್ಚು ಇಳುವರಿ ಪಡೆಯುವ ಉದ್ದೇಶದಿಂದ ಬೆಳೆಗಳಿಗೆ ವಿವಿಧ ವಿಷಕಾರಿ ರಾಸಾಯನಿಕ ಗೊಬ್ಬರ, ಔಷಧಗಳ ಸಿಂಪಡಿಸುತ್ತಿದ್ದು ಇದರಿಂದ ಬೆಳೆ ವಿಷಪೂರಿತವಾಗುತ್ತದೆ ಆದ್ದರಿಂದ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳ ಬೆಳೆಯಲು ರೈತರು ಮುಂದಾಗಬೇಕು ಎಂದರು.
ಇಂದಿನ ಪ್ರಸ್ತುತ ಸ್ಥಿತಿಯಲ್ಲಿ ಮಣ್ಣು ಸಂಪೂರ್ಣ ವಿಷಮಯವಾಗಿದ್ದು ಜೀವ ಸತ್ವವುಳ್ಳ ಮಣ್ಣು ಕಣ್ಮರೆಯಾಗಿರುವುದು ಮನುಷ್ಯನ ಕ್ರೌರ್ಯ ಎದ್ದು ಕಾಣುತ್ತದೆ. ರೈತ ಈ ದೇಶದ ಬೆನ್ನೆಲುಬು ಹಾಗಾಗಿ ಪ್ರತಿಯೊಬ್ಬರೂ ಕಾಂಕ್ರೀಟ್ ಕಾಡುಗಳ ನಿರ್ಮಿಸುವ ಬದಲು ನಿಮ್ಮ-ನಿಮ್ಮ ಮನೆಯ ಸುತ್ತ, ಹೊಲಗಳಲ್ಲಿ ಮರ-ಗಿಡಗಳ ಬೆಳೆಸುವುದರಿಂದ ಬರಗಾಲ ತಡೆಗಟ್ಟಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಹಲಗೂರಿನ ಶ್ರೀ ಓಂಕಾರೇಶ್ವರ ಸ್ವಾಮೀಜಿ, ಮುನಗೋಳಿನ ಶ್ರೀ ವಿರತಿಶಾನಂದ ಸ್ವಾಮೀಜಿ, ಜಯಬಸವಾನಂದ ಸ್ವಾಮೀಜಿ, ರಾಜ್ಯ ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ, ಓಂಕಾರಪ್ಪ, ಶರಣಪ್ಪ, ತುಮ್ ಕೋಸ್ ಅಧ್ಯಕ್ಷ ಆರ್.ಎಂ.ರವಿ, ಜಿ.ಎನ್.ಸ್ವಾಮಿ, ಎಂ.ಯು.ಚನ್ನಬಸಪ್ಪ, ಜಿ.ಎಸ್.ಶಿವಮೂರ್ತಿ, ಎಂ.ಜಿ.ಧನಂಜಯ್, ಕಾಕನೂರು ಎಂ.ಬಿ.ನಾಗರಾಜ್ ಸೇರಿ ಮೊದಲಾದವರಿದ್ದರು.
ಇಂದಿನ ಪರಿಸ್ಥಿತಿಯಲ್ಲಿ ಮಣ್ಣು ಪರೀಕ್ಷೆಗೊಳಪಡಿಸಿ ಗೊಬ್ಬರ ಹಾಕಬೇಕು. ಹಾಗೆಯೇ ರಕ್ತ ಪರೀಕ್ಷೆ ಮಾಡಿ ಊಟ ಮಾಡುವ ಕಾಲಕ್ಕೆ ಬಂದಿದ್ದೇವೆ. ಹಿಂದಿನ ಕಾಲದಲ್ಲಿ ಎಷ್ಟು ಜೊತೆ ಎತ್ತುಗಳು ಮನೆಯಲ್ಲಿದ್ದಾವೆ ಎನ್ನುವ ಆಧಾರದ ಮೇಲೆ ಆ ಮನೆತನದ ಗೌರವ ವ್ಯಕ್ತಿತ್ವ ತಿಳಿಯುತ್ತಿತ್ತು. ಆಗ ಭೂಮಿ ತಾಯಿ ಪೂಜೆ ಮಾಡುವುದರಿಂದ ಶ್ರೇಷ್ಠ ಸಂಸ್ಕೃತಿ, ಸಂಸ್ಕಾರ ಬೆಳೆಯಲು ಸಾಧ್ಯವಾಗಿತ್ತು. ಡಾ.ಗುರುಬಸವ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತ ಮಠ