ಕಾರ್ಯಕರ್ತರು, ಮುಖಂಡರ ಒತ್ತಡ । ಸಿಎಂ, ಡಿಸಿಎಂಗೆ ಮನವಿ
ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿರಾಜ್ಯದಲ್ಲಿನ ಎಲ್ಲ ನಿಗಮ-ಮಂಡಳಿಗಳಿಗೆ ಏಕಕಾಲಕ್ಕೆ ನೇಮಕ ಮಾಡಿ, ಲೋಕಸಭೆ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗೆಲ್ಲಿಸುತ್ತೇವೆ....
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಏಳು ತಿಂಗಳು ಬಳಿಕ ನಿಗಮ, ಮಂಡಳಿಗೆ ನೇಮಕಕ್ಕೆ ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್ಗೆ ಕಾರ್ಯಕರ್ತರು ಮಾಡುತ್ತಿರುವ ಒಕ್ಕೊರಲ ಆಗ್ರಹವಿದು.ಶಾಸಕರನ್ನಷ್ಟೇ ಸಮಾಧಾನಪಡಿಸಬೇಡಿ, ಕಾರ್ಯಕರ್ತರಿಗೂ ಮೊದಲ ಹಂತದಲ್ಲೇ ನೇಮಕ ಮಾಡಿಬಿಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಮಾಡುತ್ತಿದ್ದಾರೆ.
ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಒಂದೇ ತಿಂಗಳಲ್ಲಿ ನಿಗಮ, ಮಂಡಳಿಗಳಿಗೆ ನೇಮಕ ಮಾಡಲಾಗುವುದು. ಸಚಿವಗಿರಿ ಸಿಗದ ಹಿರಿಯ ಶಾಸಕರು ಹಾಗೂ ಟಿಕೆಟ್ ಕೈ ತಪ್ಪಿದವರಿಗೆ ಈ ಮೂಲಕ ಸಮಾಧಾನ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಏಳು ತಿಂಗಳಾದರೂ ಈ ವರೆಗೂ ಈ ನೇಮಕವನ್ನೇ ಮಾಡಲಿಲ್ಲ. ಇದರಿಂದಾಗಿ ಈಗ ಒತ್ತಡ ಹೆಚ್ಚಿದೆ. ಈ ಒತ್ತಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ದೌಡಾಯಿಸುವಂತೆ ಮಾಡಿದೆ.ಧಾರವಾಡ ಜಿಲ್ಲೆಗೆಷ್ಟು?
ಧಾರವಾಡ ಗ್ರಾಮೀಣ ಜಿಲ್ಲಾ ಸಮಿತಿಗೆ 72,, ಮಹಾನಗರ ಜಿಲ್ಲಾ ಸಮಿತಿಗೆ 300ಕ್ಕೂ ಅಧಿಕ ಅರ್ಜಿಗಳು ಕಾರ್ಯಕರ್ತರಿಂದ ಬಂದಿವೆ. ಸರಿಸುಮಾರು 400 ಅರ್ಜಿಗಳನ್ನು ಉಭಯ ಡಿಸಿಸಿ ಪರಿಶೀಲನೆ ಮಾಡಿ ಅಂತಿಮ ಪಟ್ಟಿ ತಯಾರಿಸಿ ಕೆಪಿಸಿಸಿಗೆ ಕಳುಹಿಸುವ ಸಿದ್ಧತೆ ನಡೆದಿದೆ.ಡಿಸಿಸಿಗೆ ಕಾರ್ಯಕರ್ತರು ಮತ್ತು ಮುಖಂಡರು ಮಾತ್ರ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇಲ್ಲಿನ ಹುಡಾ ಅಧ್ಯಕ್ಷಗಿರಿ, ಸದಸ್ಯತ್ವ, ಬಾಲವಿಕಾಸ ಅಕಾಡೆಮಿ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ, ಎನ್ಜಿಇಎಫ್, ಪಾಲಿಕೆಗೆ ನಾಮನಿರ್ದೇಶಿತ, ಸಿಂಡಿಕೇಟ್ ಸದಸ್ಯತ್ವ ಹೀಗೆ ವಿವಿಧ ಸ್ಥಳೀಯ ಮಟ್ಟದ ನಿಗಮ, ಮಂಡಳಿ ಸೇರಿದಂತೆ ರಾಜ್ಯ ಮಟ್ಟದ ನಿಗಮ, ಮಂಡಳಿಗಳಿಗೂ ಇಲ್ಲಿ ಅರ್ಜಿ ಸಲ್ಲಿಕೆಯಾಗಿವೆಯಂತೆ. ಇನ್ನು ಶಾಸಕರು ನೇರವಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಧಾರವಾಡ ಜಿಲ್ಲಾ ಗ್ರಾಮೀಣ ಸಮಿತಿ ಅಧ್ಯಕ್ಷ ಅನಿಲಕುಮಾರ ಪಾಟೀಲ, ಗ್ರಾಮೀಣ ಜಿಲ್ಲಾ ಸಮಿತಿಗೆ 72 ಜನರಿಂದ ಅರ್ಜಿ ಬಂದಿವೆ. ಏಕಕಾಲಕ್ಕೆ ನಿಗಮ, ಮಂಡಳಿಗಳಿಗೆ ನೇಮಕ ಮಾಡಿ ಎಂಬ ಬೇಡಿಕೆ ಬೇಡಿಕೆಯೂ ಇದೆ ಎಂದರು.ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಫ್ ಹಳ್ಳೂರ ಮಾತನಾಡಿ, ಮಹಾನಗರ ಜಿಲ್ಲಾ ಸಮಿತಿಗೆ 200-300ಕ್ಕೂ ಹೆಚ್ಚು ಜನ ನಿಗಮ, ಮಂಡಳಿ ನೇಮಕಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಕೆಪಿಸಿಸಿಗೆ ಕಳುಹಿಸುತ್ತೇವೆ ಎಂದರು.
,