ಕನ್ನಡಪ್ರಭ ವಾರ್ತೆ ಮೈಸೂರು
ಜಯನಗರದಲ್ಲಿರುವ ಅರಣ್ಯ ಇಲಾಖೆಯ ಮಳಲವಾಡಿಕೆರೆಯ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ಭೂಗಳ್ಳರು ಕಬಳಿಸಲು ಮುಂದಾಗಿರುವುದನ್ನು ಖಂಡಿಸಿ ಸಾಲುಮರ ತಿಮ್ಮಕ್ಕ ವೃಕ್ಷೋದ್ಯಾನ ಅಭಿವೃದ್ಧಿ ಹಾಗೂ ಹೋರಾಟ ಸಮಿತಿಯವರು ಉದ್ಯಾನವನದ ಮುಂಭಾಗದಲ್ಲಿ ಭಾನುವಾರ ಪ್ರತಿಭಟಿಸಿದರು.ಈ ವೇಳೆ ಸಮಿತಿಯ ಪೋಷಕರಾದ ಮಾಜಿ ಉಪ ಮೇಯರ್ ವಿ. ಶೈಲೇಂದ್ರ ಮಾತನಾಡಿ, ಉದ್ಯಾನವನದ ಸ್ಥಳವನ್ನು ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಸ್ಥಳದಲ್ಲಿ ತಾಲೂಕು ಕಚೇರಿ ತೆರೆಯುವ ಚಿಂತನೆ ನಡೆಸಿ, ನಂತರ ಅರಣ್ಯ ಪ್ರದೇಶವೆಂದು ಘೋಷಿಸಿದರು. ಇಲಾಖೆಗೂ ಹಸ್ತಾಂತರಿಸಲಾಯಿತು. ಸುಮಾರು 33 ಎಕರೆ ಸ್ಥಳವನ್ನು ಅರಣ್ಯ ಇಲಾಖೆಯೂ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ನಿರ್ಮಿಸಿದರು ಎಂದರು.
ಉದ್ಯಾನವನ ನಿರ್ಮಾಣಗೊಂಡ ನಂತರ ಸಾರ್ವಜನಿಕರು ಇಲಾಖೆಯೊಂದಿಗೆ ಜೊತೆಗೂಡಿ ವೃಕ್ಷೋದ್ಯಾನವನ್ನು ಅಭಿವೃದ್ಧಿ ಪಡಿಸಲು ಸಹಕಾರ ನೀಡಿದ್ದು, ಉದ್ಯಾನವನದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದೆ. 1800 ಮರಗಳನ್ನು ಪೋಷಿಸಲಾಗಿದೆ. ವಾಕಿಂಗ್ ಪಾತ್, ಮಕ್ಕಳಿಗೆ ಆಟೋಟ ಉಪಕರಣ ಹಾಗೂ ಜಿಮ್ ಅಳವಡಿಸಲಾಗಿದ್ದು, ಹೀಗೆ ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ವೃಕ್ಷೋದ್ಯಾನದ ನಿರ್ವಹಣೆಯಲ್ಲಿ ತೊಡಗಿದ್ದೇವೆ ಎಂದು ಅವರು ತಿಳಿಸಿದರು.ಹೀಗಿರುವಾಗ ಶನಿವಾರ ವೃಕ್ಷೋದ್ಯಾನದ ತಡೆಗೋಡೆಯನ್ನು ಒಡೆದು ಹಾಕಿ ಅಕ್ರಮವಾಗಿ ಜೆಸಿಬಿ ನುಗಿಸಿ, ಪ್ರವೇಶ ಪಡೆದ ಭೂಮಾಫಿಯಾದ ಕಳ್ಳರು ಜಲ್ಲಿ ಕಲ್ಲು, ಎಂ ಸ್ಯಾಂಡ್, ಕಾಂಕ್ರಿಟ್ ಹಲಗೆ, ಕಾಂಕ್ರಿಟ್ ಗೋಡೆಗಳನ್ನು ತಂದು ಏಕಾಏಕಿ ಗುಂಡಿಗಳನ್ನು ತೋಡಿ ಗೋಡೆ ನಿರ್ಮಿಸಲು ಮುಂದಾಗಿದ್ದು, ಸಾರ್ವಜನಿಕರು ಅರಣ್ಯ ಇಲಾಖೆಯ ಗಮನಕ್ಕೆ ತಂದ ತಕ್ಷಣ ಅಧಿಕಾರಿಗಳು ಗೋಡೆ ನಿರ್ಮಾಣವನ್ನು ಸ್ಥಗಿತಗೊಳಿಸಿದ್ದಾರೆ.
ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನನ್ನಾಗೆ ಉಳಿಸಿಕೊಳ್ಳಲು, ಭೂಗಳ್ಳರಿಂದ ಕಾಪಾಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಅನುವು ಮಾಡಿಕೊಡಬೇಕು ಹಾಗೂ ಭೂಗಳ್ಳರ ಮೇಲೆ ಉನ್ನತ ಮಟ್ಟದ ತನಿಖೆ ಮಾಡಿ ತಪ್ಪಿತ್ಥರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.ಸಮಿತಿಯ ಪದಾಧಿಕಾರಿಗಳು ಹಾಗೂ ಸ್ಥಳೀಯರು ಇದ್ದರು.
----ಬಾಕ್ಸ್...
ಒತ್ತುವರಿ ವಿರುದ್ಧ ಕ್ರಮಕ್ಕೆ ಅರಣ್ಯ ಇಲಾಖೆ ದೂರುಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ಒತ್ತುವರಿ ಮಾಡಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದು, ಜಯನಗರದ ಸಿದ್ದಪ್ಪ, ಬಿ. ರಾಜೀವ ಸೇರಿದಂತೆ 50 ಮಂದಿ ವಿರುದ್ಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಲವಡಿ ಗ್ರಾಮದ ಸರ್ವೆ ನಂ.31ರ 33.02 ಎಕರೆ ಪ್ರದೇಶದಲ್ಲಿನ ರಕ್ಷಿತ ಅರಣ್ಯ ಪ್ರದೇಶವಿದ್ದು, ಮೈಸೂರು ನಗರದ ಹಸರೀಕರಣ ವಲಯದ ವ್ಯಾಪ್ತಿಗೆ ಸೇರಿದ್ದು, ಟ್ರೀ ಪಾರ್ಕ್ ಅಭಿವೃದ್ಧಿಪಡಿಸಲಾಗಿದೆ. ಶನಿವಾರ ಸಿದ್ದಪ್ಪ, ರಾಜೀವ ಸೇರಿದಂತೆ 50 ಮಂದಿ ತಂಡವು ಉದ್ಯಾನವನ ತಡೆಗೋಡೆಯನ್ನು ಒಡೆದು ಅತಿಕ್ರಮ ಪ್ರವೇಶ ಮಾಡಿದಲ್ಲದೇ ತಡೆ ಗೋಡೆ ನಿರ್ಮಾಣ ಕಾಮಗಾರಿ ನಡೆಸಿ, ಅತಿಕ್ರಮ ಪ್ರವೇಶ ಮಾಡಿದ್ದು, ಈ ಸಂಬಂಧ ಕಾನೂನು ಕ್ರಮ ಜರುಗಿಸುವಂತೆ ಅರಣ್ಯ ಇಲಾಖೆಯ ಆರ್ಎಫ್ಒ ದಿವ್ಯಶ್ರೀ ದೂರು ನೀಡಿದ್ದಾರೆ.