ಅಡಕೆ ತೋಟ ಜಲಾವೃತ: ಫಸಲು ನಾಶದ ಭೀತಿ

KannadaprabhaNewsNetwork |  
Published : Oct 25, 2024, 01:03 AM IST
ಬೀರೂರು-ಅಜ್ಜಂಪುರ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಬೈಪಾಸ್ ಹೆದ್ದಾರಿ ಕಾಮಗಾರಿಯಲ್ಲಿ ಯಗಟಿ ರಸ್ತೆಯ ಕರ್ಲಹಳ್ಳ ಚಾನಲ್ ಬಂದ್ ಮಾಡಿದ ಪರಿಣಾಮ ಈರೋಜಿರಾವ್ ಎಂಬುವರ ಅಡಿಕೆ ತೋಟ ಜಲಾವೃತವಾಗಿರುವುದು | Kannada Prabha

ಸಾರಾಂಶ

ಬೀರೂರು, ಹೋಬಳಿಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಬೀರೂರು- ಅಜ್ಜಂಪುರ ರಸ್ತೆಯ ಪಕ್ಕದಲ್ಲಿ ಯಗಟಿ ಕಡೆ ಹರಿಯುವ ಕರ್ಲಹಳ್ಳ ಕಾಲುವೆ ಭರ್ತಿಯಾಗಿ, ಪಕ್ಕದ ಅಡಕೆ ತೋಟ ಜಲಾವೃತವಾಗಿದೆ.

ಪಟ್ಟಣದ ಹೊರವಲಯದ ಗಾಳೀಹಳ್ಳಿ ಕೆರೆಯಿಂದ ಕೋಡಿಬಿದ್ದ ನೀರು,

ಕನ್ನಡಪ್ರಭ ವಾರ್ತೆ, ಬೀರೂರು

ಹೋಬಳಿಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಬೀರೂರು- ಅಜ್ಜಂಪುರ ರಸ್ತೆಯ ಪಕ್ಕದಲ್ಲಿ ಯಗಟಿ ಕಡೆ ಹರಿಯುವ ಕರ್ಲಹಳ್ಳ ಕಾಲುವೆ ಭರ್ತಿಯಾಗಿ, ಪಕ್ಕದ ಅಡಕೆ ತೋಟ ಜಲಾವೃತವಾಗಿದೆ.

ಪಟ್ಟಣದ ಹೊರವಲಯದ ಗಾಳೀಹಳ್ಳಿ ಕೆರೆಯಿಂದ ಕೋಡಿಬಿದ್ದ ನೀರು, ವಾಣಿವಿಲಾಸ ಸಾಗರದ ಕಡೆ, ಕರ್ಲಹಳ್ಳಕ್ಕೆ ಹರಿಯುತ್ತಿದ್ದು, ಅಜ್ಜಂಪುರ ರಸ್ತೆ ಯಲ್ಲಿರುವ ರಹೀಂಸಾಬ್ ಲೇಔಟ್ ಹಿಂಭಾಗದಿಂದ ಶಿವಮೊಗ್ಗ ಬೈಪಾಸ್ ರಸ್ತೆ ಪಕ್ಕದಲ್ಲಿ ನಿರ್ಮಿಸಿದ ಒಳಚರಂಡಿ ಮೂಲಕ ದೊಡ್ಡ ಕಾಲುವೆಗೆ ಸೇರುತ್ತಿದೆ.

ಬೈಪಾಸ್ ರಸ್ತೆ ನಿರ್ಮಾಣ ಸಂದರ್ಭದಲ್ಲಿ ದೊಡ್ಡ ಕಾಲುವೆ ಮುಚ್ಚಿ, ಸಣ್ಣ ಡೆಕ್ ನಿರ್ಮಾಣ ಮಾಡಲಾಗಿತ್ತು.ಆದ್ದರಿಂದ ರಸ್ತೆ ಮೇಲೆ ನೀರು ಹರಿದು ಸಮಸ್ಯೆಯಾಗಿತ್ತು. ಹೆದ್ದಾರಿ ವಿಭಾಗದ ಎಂಜಿನಿಯರ್, ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಇಲಾಖೆಯವರನ್ನು ಶಾಸಕರು ಸ್ಥಳಕ್ಕೆ ಕರೆಸಿಕೊಂಡು ಶೀಘ್ರ ಸಮಸ್ಯೆ ಬಗೆಹರಿಸಿಕೊಡುವಂತೆ ಸೂಚಿಸಿದ್ದರು. ಅದರಂತೆ ಹೆದ್ದಾರಿ ಪ್ರಾಧಿಕಾರದವರು ಬೈಪಾಸ್ ರಸ್ತೆ ಸೇತುವೆ ಕೆಳಭಾಗದಲ್ಲಿ ಸಣ್ಣ ಒಳ ಚರಂಡಿ ನಿರ್ಮಿಸಿ ನೀರು ಹರಿದುಹೋಗಲು ಅನುವು ಮಾಡಿಕೊಟ್ಟಿದ್ದರು.

ಕಳೆದದೊಂದು ವಾರದಿಂದ ಬೀರೂರು ಹೋಬಳಿ ಮತ್ತು ಪಟ್ಟಣದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಗಾಳೀಹಳ್ಳಿ ಕೆರೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದ್ದು, ಕರ್ಲಹಳ್ಳದಿಂದ ಮುಂದೆ ಹರಿದು ಹೋಗಲು ವ್ಯವಸ್ಥೆ ಇಲ್ಲದೆ ಅಕ್ಕಪಕ್ಕದ ತೋಟ, ಜಮೀನು ಹಾಗೂ ಯುಜಿಡಿಯ ಟ್ರೀಟ್‌ಮೆಂಟ್ ಪ್ಲಾಂಟ್‌ಗೆ ನುಗ್ಗುತ್ತಿದೆ.

ಅವೈಜ್ಞಾನಿಕ ಬೈಪಾಸ್ ರಸ್ತೆ ನಿರ್ಮಾಣದಿಂದ ಯಗಟಿ ರಸ್ತೆಯ ನಮ್ಮ ತೋಟದಲ್ಲಿ ಕಾಲಿಡಲು ಆಗುತ್ತಿಲ್ಲ. ಮೊದಲೆಲ್ಲಾ ನೀರು ಕರ್ಲಹಳ್ಳದ ಮೂಲಕ ಸರಾಗವಾಗಿ ಹರಿದು ಹೋಗುತ್ತಿತ್ತು. ತೋಟ ಫಸಲು ನೀಡುವ ಹಂತದಲ್ಲಿದ್ದು, ಈ ತಿಂಗಳಿನಲ್ಲಿ ಅಡಕೆ ಮತ್ತು ತೆಂಗಿನ ಫಸಲಿನ ಕೊಯ್ಲು ಆಗಬೇಕಿತ್ತು. ಆದರೆ ಈ ರೀತಿ ನೀರು ಹರಿಯುತ್ತಿರುವ ಸಂದರ್ಭದಲ್ಲಿ ಫಸಲು ಉದುರಿ, ಕೊಚ್ಚಿ ಹೋಗುವ ಸಾಧ್ಯತೆ ಇದೆ. ನಮ್ಮ ಕಷ್ಟಕ್ಕೆ ದನಿಯಾಗುವವರು. ಈ ವಿಷಯವಾಗಿ ಈ ಹಿಂದೆಯೇ ಪುರಸಭೆ, ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೂ ಮನವಿ ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಕೃಷಿಕ ಈರೋಜಿ ರಾವ್ ಅಳಲು ತೋಡಿಕೊಂಡರು.

ಸರ್ಕಾರ ನಡೆಸುವ ಅಭಿವೃದ್ಧಿ ಕಾರ್ಯಗಳು ಅಗತ್ಯವಾಗಿ ಮುನ್ನಡೆಯಬೇಕು. ಆದರೆ, ಸಾರ್ವಜನಿಕರಿಗೆ, ರೈತರಿಗೆ ತೊಂದರೆಯಾದರೆ ಇದಕ್ಕೆ ಪರಿಹಾರವೇನು ಎನ್ನುವುದು ಪ್ರಶ್ನೆಯಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಿ ನೀರು ಸಮರ್ಪಕವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ