ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳುವಿನ ಕಾಟ: ರೈತರಿಗೆ ಸಲಹೆ

KannadaprabhaNewsNetwork | Published : Jul 19, 2024 12:48 AM

ಸಾರಾಂಶ

ಮೊಟ್ಟೆಯಿಂದ ಹೊರಬರುವ ಮೊದಲ ಹಂತದ ಮರಿಹುಳುಗಳು ಗುಂಪಾಗಿದ್ದು, ಎಲೆಯ ಹಸಿರು ಭಾಗವನ್ನು ಕೊರೆದು ತಿನ್ನುತ್ತವೆ.

ಹೊಸಪೇಟೆ: ಮೆಕ್ಕಜೋಳ ಬೆಳೆಗೆ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಳೆ ನಿರ್ವಹಣೆಗೆ ರೈತರಿಗೆ ಜಿಲ್ಲಾ ಕೃಷಿ ಇಲಾಖೆ ಸಲಹೆ ನೀಡಿದೆ.

ಹೆಣ್ಣು ಪತಂಗವು ಎಲೆಗಳ ಮೇಲೆ, ಕೆಳಗೆ ಅಥವಾ ಸುಳಿಯಲ್ಲಿ ಗುಂಪು ಗುಂಪಾಗಿ ಮೊಟ್ಟೆ ಇಡುತ್ತದೆ. ಮೊಟ್ಟೆಯಿಂದ ಹೊರಬರುವ ಮೊದಲ ಹಂತದ ಮರಿಹುಳುಗಳು ಗುಂಪಾಗಿದ್ದು, ಎಲೆಯ ಹಸಿರು ಭಾಗವನ್ನು ಕೊರೆದು ತಿನ್ನುತ್ತವೆ. ನಂತರ ಬೆಳೆದ ಮರಿಗಳು ಪಕ್ಕದ ಗಿಡಗಳಿಗೆ ಹರಡಿ ಸುಳಿಯಲ್ಲಿ ಇದ್ದು ಎಲೆಗಳನ್ನು ತಿನ್ನುತ್ತವೆ. ಹಾನಿಗೊಳಗಾದ ಎಲೆಗಳಲ್ಲಿ ಸಾಲಾಗಿ ಉದ್ದನೆಯ ರಂಧ್ರ ಕಂಡು ಬರುತ್ತದೆ. ನಂತರ ಬೆಳೆದ ಮರಿಹುಳು ಎಲೆಗಳನ್ನು ತುದಿಯಿಂದ ಮಧ್ಯದ ಎಲೆ ಚಿಗುರು ತಿನ್ನುವುದರಿಂದ ಎಲೆಗಳು ಹರಿದಂತೆ ಗೋಚರವಾಗುತ್ತದೆ. ಕೀಟದ ಬಾಧೆಯು ತೀವ್ರವಾದಲ್ಲಿ ಸುಳಿಯನ್ನು ತಿಂದು ಅಧಿಕ ಪ್ರಮಾಣದಲ್ಲಿ ಹಿಕ್ಕೆಗಳನ್ನು ಹೊರ ಹಾಕುತ್ತದೆ. ಒಣಗಿದ ಈ ಹಿಕ್ಕೆಗಳು ತೌಡನ್ನು ಹೋಲುವುದರಿಂದ ಗಿಡದ ಮೇಲೆಲ್ಲ ತೌಡು ಬಿದ್ದಿರುವಂತೆ ಕಾಣಿಸುತ್ತದೆ.ನಿರ್ವಹಣಾ ಕ್ರಮಗಳು:

ಸೈಂಟ್ರಾನಿಲಿಪ್ರೋಲ್ ಶೇ.19.8, ಥೈಯಾಮೆಥೋಕ್ಷಮ್ ಶೇ.19.8 ಎಫ್‌ಎಸ್ ಮಿಲಿ/ಕೆಜಿ ಅಥವಾ ಕ್ಲೋರಂಟ್ರಾನಿಲಿಪ್ರೋಲ್ ಶೇ.50 ಎಫ್‌ಎಸ್ 5.6 ಮಿಲಿ/ಕೆಜಿಯೊಂದಿಗೆ ಬೀಜೋಪಚಾರ ಮಾಡಿ ಬಿತ್ತನೆ ಕೈಗೊಳ್ಳುವುದರಿಂದ 15-20 ದಿನಗಳವರೆಗೆ ಪರಿಣಾಮಕಾರಿಯಾಗಿರುತ್ತದೆ. ಬೆಳೆಯ ಆರಂಭಿಕ ಹಂತದಲ್ಲಿ (30 ದಿನಗಳವರೆಗೆ) ಎಕರೆಗೆ 10 ಪಕ್ಷಿ ಪರ್ಚಗಳನ್ನು ನಿರ್ಮಿಸುವುದು. ರಸಗೊಬ್ಬರಗಳನ್ನು ಸಮತೋಲಿತವಾಗಿ ಬಳಸುವುದು. ಕೀಟದ ಮೊಟ್ಟೆಯ ರಾಶಿ ಮತ್ತು ಮರಿಹುಳುಗಳನ್ನು ಕೈಯಿಂದ ಆರಿಸುವುದು ಮತ್ತು ನಾಶಪಡಿಸುವುದು. ಪ್ರತಿ ಎಕರೆಗೆ 15ರಂತೆ ಮೋಹಕ ಬಲೆಗಳನ್ನು ಬಳಸಿ ಗಂಡು ಪತಂಗಗಳನ್ನು ಸಾಮೂಹಿಕ ಬಲೆಗೆ ಬೀಳಿಸಿ ನಾಶಪಡಿಸಬೇಕು. ಮೊದಲ ಹಂತದ ಕೀಟಗಳನ್ನು ನಿಯಂತ್ರಿಸಲು ಹಾಗೂ ಮೊಟ್ಟೆ ಒಡೆಯುವ ಸಾಮರ್ಥ್ಯವನ್ನು ಕಡಿಮೆ ಮಾಡಲು ಶೇ.5 ಎನ್‌ಎಸ್‌ಕೆಇ/ಅಜಾಡಿರಾಚಿತಿನ್ 1500 ಪಿಪಿಎಂ 5ಎಂಎಲ್.1 ನೀರಿನೊಂದಿಗೆ ಸಿಂಪಡಣೆ ಮಾಡುವುದು. ಶೇ.10 ಕ್ಕಿಂತ ಹೆಚ್ಚು, ಎಲೆಗಳ ಹಾನಿ ಕಂಡು ಬಂದಾಗ ಅಥವಾ 2ನೇ ಮತ್ತು 3ನೇ ಹಂತದ ಕೀಟ ನಿರ್ವಹಣೆಗೆ ಸ್ಪಿನೇಟೊರಮ್ ಶೇ.11.7 ಎಸ್‌ಸಿ ಅಥವಾ ಕ್ಲೋರಂಟ್ರಾನಿಲಿಪ್ಲೋಲ್ ಶೇ.18.5 ಎಸ್ಸಿ ಥಿಯಾಮೆಥೋಕ್ಷಮ್ ಶೆ.12.6 ಪ್ಲಸ್ ಲಾಂಬ್ಡಾ ಸೈಯಾಲೊತ್ರಿನ್ ಶೇ.9.5 ಜೆಡ್‌ಸಿ ಕೀಟನಾಶಕಗಳನ್ನು ಬಳಸುವುದು. ಬಾಸಿಲಸ್ ಥುರಿಂಜೆನ್ಸಿಸ್ 2ಜಿ/ಲಿಟ್ ಅಥವಾ ಮೆತಾರಿಜಿಯೆಮ್ ಯಾನಿಸೊಪ್ಲಿ 5ಜಿ.ಲಿಟ್ ಜೈವಿಕ ಪೀಡೆನಾಶಕಗಳನ್ನು ಸಸ್ಯಗಳ ಸುರುಳಿಗೆ ಸಿಂಪರಣೆ ಮಾಡಬೇಕು ಎಂದು ತಿಳಿಸಿದ್ದಾರೆ.

ಪ್ರೌಢಾವಸ್ಥೆಯ ಕೀಟದ ನಿರ್ವಹಣೆಗೆ 10 ಕೆಜಿ ಅಕ್ಕಿ ಹೊಟ್ಟು ಪ್ಲಸ್ 2 ಕೆಜಿ ಬೆಲ್ಲದ ಮಿಶ್ರಣವನ್ನು 2-3 ಲೀಟರ್ ನೀರಿನಲ್ಲಿ 24 ಗಂಟೆಗಳ ಕಾಲ ಹುದುಗಿಸಲು ಇರಿಸಿ. 100 ಗ್ರಾಂ ಥಿಯೋಡಿಕಾರ್ಬ್ ಅನ್ನು ಅರ್ಧ ಗಂಟೆ ಮೊದಲು ಸೇರಿಸಿ ವಿಷ ಆಹಾರವನ್ನು ತಯಾರಿ ಸಸ್ಯಗಳ ಸುರುಳಿಗೆ ಹಾಕಬೇಕು. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಲು ಕೋರಲಾಗಿದೆ ಎಂದು ವಿಜಯನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಶರಣಪ್ಪ ಮುದುಗಲ್‌ ತಿಳಿಸಿದ್ದಾರೆ.

Share this article