ಕನ್ನಡಪ್ರಭ ವಾರ್ತೆ ಕಲಬುರಗಿ
ಅದೇ ರೀತಿ ಕಳ್ಳತನವಾದ ಕಾರು ಮಧ್ಯಪ್ರದೇಶದಲ್ಲಿ ಪತ್ತೆಯಾಗಿದೆ. ಕಳ್ಳರ ಸೆರೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ನಗರ ಪೋಲಿಸ್ ಆಯುಕ್ತ ಚೇತನ್ ಆರ್. ಹೇಳಿದರು.
ಈ ಕುರಿತು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಮಾನಾಸ್ಪದ ರೀತಿಯಲ್ಲಿ ಮಾರಕಾಸ್ತ್ರ ಹೊಂದಿ ದ್ವಿಚಕ್ರವಾಹನಗಳ ಮೇಲೆ ಸಂಚರಿಸುತ್ತಿದ್ದ ವ್ಯಕ್ತಿಗಳಿಬ್ಬರನ್ನು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಬಂಧಿತರು ಮನೆಗಳ್ಳತನ ಮಾಡಿರುವ ಕುರಿತು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದರು.ನಗರದ ಕೋಟನೂರ್(ಡಿ) ಹತ್ತಿರ ನಾಲ್ವರು ಎರಡು ದ್ವಿಚಕ್ರವಾಹನಗಳ ಮೇಲೆ ಅನುಮಾನಾಸ್ಪದ ರೀತಿಯಲ್ಲಿ ಹೋಗುತ್ತಿದ್ದರು. ಅವರನ್ನು ಪೋಲಿಸರು ಬೆನ್ನತ್ತಿದಾಗ ಇಬ್ಬರು ಸೆರೆ ಸಿಕ್ಕರು. ಇಬ್ಬರು ಓಡಿ ಹೋದರು. ಸೆರೆ ಸಿಕ್ಕ ಇಬ್ಬರ ಹತ್ತಿರ ಒಂದು ಕಬ್ಬಿಣದ ರಾಡ್, ಬೈಕ್ನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಆಳಂದ್ ತಾಲೂಕಿನ ಕಮಸರ್ ನಾಯಕ್ ತಾಂಡಾದ ಕೂಲಿ ಕೆಲಸಗಾರರಾದ ಅಗಲು ಬಗ್ಗು ಚವ್ಹಾಣ್ (50), ಸೀತಾರಾಮ್ ಬಗ್ಗು ಚವ್ಹಾಣ್ (26), ಓಡಿ ಹೋದವರನ್ನು ಗುಂತಕಲ್ನ ಹಾನಸಿಂಗ್ ಅಲಿಯಾಸ್ ಹನಿಸಿಂಗ್ ಪವಾರ್, ಕುಮಸಿ ನಾಯಕ್ ತಾಂಡಾದ ಸೋಮನಾಥ್ ಬಗ್ಗು ಚವ್ಹಾಣ್ ಎಂದು ಬಂಧಿತರು ಬಹಿರಂಗಪಡಿಸಿದ್ದಾರೆ.ನಾಲ್ವರು ಆರೋಪಿಗಳು ತಮ್ಮೂರಿನಿಂದ ಬೈಕ್ನಲ್ಲಿ ಬಂದು ನಗರದ ಸಾಯಿರಾಮ ನಗರ, ನೃಪತುಂಗ ಕಾಲೋನಿ, ಹುಂಡೇಕಾರ್ ಕಾಲೋನಿ, ಭೋಪಾಲ್ ತೆಗನೂರ್ ಗ್ರಾಮದಲ್ಲಿ ಕಳ್ಳತನ ಮಾಡಿದ ಕುರಿತು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ.ಒಟ್ಟು 6 ಪ್ರಕರಣಗಳಲ್ಲಿ 4,30,000 ರು.ಗಳ ಮೌಲ್ಯದ 72 ಗ್ರಾಂ ಚಿನ್ನಾಭರಣ, 18,000 ರು ಮೌಲ್ಯದ 265 ಗ್ರಾಂ ಬೆಳ್ಳಿ ಆಭರಣಗಳು, 80,000 ರು. ಮೌಲ್ಯದ 2 ಬೈಕ್ ಸೇರಿ ಒಟ್ಟು 5,28,000 ರು. ಬೆಲೆ ಬಾಳುವ ಬಂಗಾರ, ಬೆಳ್ಳಿ ಮತ್ತು ದ್ವಿಚಕ್ರವಾಹನಗಳನ್ನು ಪೋಲಿಸರು ತಮ್ಮ ವಶಕ್ಕೆ ತೆಗೆದುಕೊಂಡರು ಎಂದು ಅವರು ಹೇಳಿದರು.
ಕಾರು ಪತ್ತೆ:ಅದೇ ರೀತಿ ಕಳೆದ 2023ರ ಸೆ.19ರಂದು ಜಯನಗರದ ನಿವೃತ್ತ ಕೆಜಿಬಿ ಬ್ಯಾಂಕ್ ನೌಕರ ಗೋಪಾಲರಾವ್ ಕುಲಕರ್ಣಿ ತಮ್ಮ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋದಾಗ ಮನೆಯ ಹೊರಗಡೆ ಇದ್ದ ಕಾರು ಹಾಗೂ ಮನೆ ಕೀಲಿ ಮುರಿದು ಸುಮಾರು 1,96,500 ರು. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಪ್ರಕರಣವನ್ನು ಪೋಲಿಸರು ಬೇಧಿಸಿದ್ದು, ಕಳುವಾದ ಕಾರು ಮಧ್ಯಪ್ರದೇಶದ ದಿಶಾ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಪೋಲಿಸ್ ಆಯುಕ್ತ ಚೇತನ್ ಆರ್. ಹೇಳಿದರು. ಎಂ.ಬಿ. ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.