ಹುಬ್ಬಳ್ಳಿ: ಪಾಲಿಕೆ ವ್ಯಾಪ್ತಿಯಲ್ಲಿರುವ ಆರ್ಯಭಟ್ ಟೆಕ್ ಪಾರ್ಕ್ನಲ್ಲಿನ ನಿವೇಶನ ಪಡೆದವರು ಅದೇ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದಾರೋ ಇಲ್ವೋ ಎಂಬುದನ್ನು ಪರಿಶೀಲಿಸಲು ಸದನ ಸಮಿತಿ ರಚಿಸಲು ನಿರ್ಧರಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಅಲ್ಲಿನ ದೀಕ್ಷಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ಗೆ ನೀಡಿರುವ ನಿವೇಶನವನ್ನು ವಾಪಸ್ ಪಡೆಯಲು ನಿರ್ಣಯ ಕೈಗೊಂಡಿತು.
ಅದಕ್ಕೆ ಅಧಿಕಾರಿಗಳು, ದೀಕ್ಷಾ ಟೆಕ್ನಾಲಜಿ ಕಂಪನಿಯೊಂದು ನಿವೇಶನ ಪಡೆದ ಉದ್ದೇಶಕ್ಕೆ ಬಳಸುತ್ತಿಲ್ಲವಷ್ಟೇ. ಉಳಿದ ಆರು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ವಲಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನೂ ಮಾಡಿದ್ದಾರೆ. ಆದಕಾರಣ ದೀಕ್ಷಾ ಟೆಕ್ನಾಲಜಿ ಕಂಪನಿಯಿಂದ ನಿವೇಶನ ವಾಪಸ್ ಪಡೆಯಲಾಗುವುದು ಎಂದರು.
ಅದಕ್ಕೆ ಈರೇಶ ಅಂಚಟಗೇರಿ, ಅಲ್ಲಿ ಯಾವ ಕಂಪನಿಗಳಿಗೆ ನಿವೇಶನ ನೀಡಲಾಗಿದೆ. ಯಾವ್ಯಾವ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಪರಿಶೀಲಿಸಲು ಸದನ ಸಮಿತಿ ರಚಿಸುವುದು ಸೂಕ್ತ ಎಂದರು. ಅದಕ್ಕೆ ಧ್ವನಿ ಗೂಡಿಸಿದ ವೀರಣ್ಣ ಸವಡಿ, ಈ ಬಗ್ಗೆ ಪರಿಶೀಲನೆ ನಡೆಸಬೇಕು. ಇಲ್ಲದಿದ್ದಲ್ಲಿ ಮುಂದೆ ಮುಡಾದಂತೆ ಇಲ್ಲಿಯೂ ಹಗರಣವಾಗಬಾರದು ಎಂದರು.ಸದನ ಸಮಿತಿ ರಚನೆಗೆ ಅಸ್ತು ಎಂದು ರೂಲಿಂಗ್ ನೀಡಿದ ಮೇಯರ್, ದೀಕ್ಷಾದಿಂದ ನಿವೇಶನ ವಾಪಸ್ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯ ಪ್ರಕಟಿಸಿದರು.
ಈ ನಡುವೆ ಪಾಲಿಕೆ ವ್ಯಾಪ್ತಿ ವಿಸ್ತರಣೆ ಕುರಿತಂತೆ ಈ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. ರಾಯನಾಳ, ಅಂಚಟಗೇರಿ, ಯರಿಕೊಪ್ಪ, ಮನಸೂರ, ಬೇಲೂರ ಗ್ರಾಮಗಳ ಕೆಲ ಬಡಾವಣೆಗಳು ಪಾಲಿಕೆ ವ್ಯಾಪ್ತಿಗೆ ಬರುತ್ತವೆ. ಆದರೆ ಪಾಲಿಕೆಗೆ ಸೇರಿಸಲು ಅಲ್ಲಿನ ಪಂಚಾಯತಿಗಳು ಒಪ್ಪುತ್ತಿಲ್ಲ ಎಂದು ನಗರ ಯೋಜನೆ ವಿಭಾಗದ ಉಪನಿರ್ದೇಶಕಿ ಮೀನಾಕ್ಷಿ ಸಭೆಗೆ ತಿಳಿಸಿದರು.
ಅಮೃತ್ ಯೋಜನೆಯ ಕಾಮಗಾರಿಯ ಟೆಂಡರ್ನ್ನು ಡಿಎಂಎ (ಪೌರಾಡಳಿತ ನಿರ್ದೇಶನಾಲಯ) ಕರೆಯುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪಾಲಿಕೆ ಸದಸ್ಯರು, ಎಲ್ಲ ಟೆಂಡರ್ಗಳನ್ನು ಡಿಎಂಎ ಕರೆಯುತ್ತಿದ್ದರೆ, ಪಾಲಿಕೆ ಏಕೆ ಬೇಕು. ಇಲ್ಲಿನ ಆಯುಕ್ತರು, ಎಂಜಿನಿಯರ್ಗಳೆಲ್ಲ ಏಕೆ ಬೇಕು ಎಂದು ಖಾರವಾಗಿ ಪ್ರಶ್ನಿಸಿದರು.