ಸಂಸದನಾಗಿ ಭ್ರಷ್ಟಾಚಾರ ಮಾಡಿಲ್ಲ, ತಲೆತಗ್ಗಿಸುವ ಕಾರ್ಯ ಮಾಡಿಲ್ಲ: ಕೇಂದ್ರ ಸಚಿವ ಜೋಶಿ

KannadaprabhaNewsNetwork | Published : Feb 27, 2024 1:31 AM

ಅಭಿವೃದ್ಧಿ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ನನ್ನ ವಿರೋಧಿಗಳು ಸಹ ಕೆಲಸ ಮಾಡಿಲ್ಲ ಎನ್ನುವ ಧೈರ್ಯ ಹೊಂದಿಲ್ಲ ಎಂದು ಸಚಿವ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದನಾಗಿ ಆಯ್ಕೆಯಾಗಿದ್ದು, ಈ ಅವಧಿಯಲ್ಲಿ ನಯಾಪೈಸಾ ಭ್ರಷ್ಟಾಚಾರ ಮಾಡಿಲ್ಲ ಹಾಗೂ ಕ್ಷೇತ್ರದ ಜನರು ತಲೆತಗ್ಗಿಸುವ ಕಾರ್ಯ ಮಾಡಿಲ್ಲ ಎಂದು ಕೇಂದ್ರ ಸಂಸದೀಯ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿಯ ಸರೂರ ಟಿವಿಎಸ್‌ ಶೋಂ ಆವರಣದಲ್ಲಿ ಸೋಮವಾರ ಧಾರವಾಡ ಲೋಕಸಭಾ ಬಿಜೆಪಿ ಪಕ್ಷದ ಕಾರ್ಯಾಲಯದ ಉದ್ಘಾಟನೆ ವೇಳೆ ಮಾತನಾಡಿದರು.

ದೇಶದ ದೊಡ್ಡ ದೊಡ್ಡ ಉದ್ಯಮಿಗಳು ಭೇಟಿಯಾಗುತ್ತಾರೆ. ಯಾವತ್ತೂ ಅವರಿಂದ ನಿರೀಕ್ಷೆ ಮಾಡಿಲ್ಲ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರದಲ್ಲಿ ತೊಡಗಬಾರದು ಎಂಬ ದೃಢ ಸಂಕಲ್ಪ ಮಾಡಿದ್ದೇನೆ ಎಂದ ಅವರು, ತಮಗೆ ಪಕ್ಷ ಎಲ್ಲವೂ ಕೊಟ್ಟಿದೆ. ಸಾಮಾನ್ಯ ಕಾರ್ಯಕರ್ತನಾದ ನನಗೆ ಸಂಸತ್ತಿನಲ್ಲಿ ಒಂದು ಸ್ಥಾನಮಾನ ಸಿಕ್ಕಿರುವ ಸಮಾಧಾನವಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯನ್ನು ಐದು ವರ್ಷಗಳ ಕಾಲ ಸಂಪೂರ್ಣ ಅವಧಿ ಪೂರೈಸಿದ 3ನೇ ಸಚಿವ ನಾನು ಎಂಬ ಹೆಮ್ಮೆಯೂ ಇದೆ ಎಂದರು.

ಮೊದಲಿನ ಹತ್ತು ವರ್ಷಗಳ ಕಾಲ ಕ್ಷೇತ್ರದ ಜನರೊಂದಿಗೆ ಬೆರತು ಹೋಗಿದ್ದೇನು. ಆದರೆ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶ ನಡೆಸುವ ಹಲವು ಜವಾಬ್ದಾರಿಗಳನ್ನು ನೀಡಿದ್ದರಿಂದ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಂಚರಿಸಲು ಸಾಧ್ಯವಾಗಿಲ್ಲ. ಆದರೆ, ಅಭಿವೃದ್ಧಿ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ನನ್ನ ವಿರೋಧಿಗಳು ಸಹ ಕೆಲಸ ಮಾಡಿಲ್ಲ ಎನ್ನುವ ಧೈರ್ಯ ಹೊಂದಿಲ್ಲ. ನಾನು ಮಾಡಿರುವ ಕಾರ್ಯಗಳ ಬಗ್ಗೆ ಪುಸ್ತಕ ಸಿದ್ಧವಾಗಿದ್ದು ಫೆ. 28ರಂದು ಹುಬ್ಬಳ್ಳಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ನರೇಂದ್ರ ಮೋದಿ ಅವರು ಪ್ರಧಾನಿ ಆದಾಗಿನಿಂದ ಭಾರತದಲ್ಲಿ ₹25 ಕೋಟಿ ಜನರು ಬಹು ಆಯಾಮದಲ್ಲಿ ಬಡತನದಿಂದ ಹೊರ ಬಂದಿದ್ದಾರೆ ಎಂದು ನೀತಿ ಆಯೋಗ ತನ್ನ ಅಧ್ಯಯನದಲ್ಲಿ ಉಲ್ಲೇಖಿಸಿದೆ. ಬರುವ ದಿನಗಳಲ್ಲಿ ಬಡತನ ರೇಖೆ ಇನ್ನೂ ಕಡಿಮೆ ಆಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಜೋಶಿ, ಆರ್ಥಿಕ ಸ್ಥಿತಿ ಬದಲಾವಣೆ ತರುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಜಗತ್ತಿನಲ್ಲಿ 5ನೇ ಸ್ಥಾನದಲ್ಲಿರುವ ಭಾರತ 3ನೇ ಸ್ಥಾನಕ್ಕೆ ಏರುವ ಸಮಯ ಇನ್ನೇನು ಬರಲಿದೆ ಎಂದರು.

ಉದ್ಯಮಿ ವಿಜಯ ಸಂಕೇಶ್ವರ ಮಾತನಾಡಿ, ಮುಜುಗರ ಪಡುವಂತೆ ಇದ್ದ ಭಾರತೀಯರ ಸ್ಥಿತಿಯನ್ನು ಜಗತ್ತಿನಲ್ಲಿ ಮೋದಿ ಸರ್ಕಾರ ಹೆಮ್ಮೆ ಪಡುವ ರೀತಿ ಮಾಡಿದೆ. ರಾಷ್ಟ್ರೀಯತೆ ಬಿಜೆಪಿಯ ಪ್ರತಿಯೊಬ್ಬಕಾರ್ಯಕರ್ತರಲ್ಲೂ ಇದೆ. ಬೇರೆ ಪಕ್ಷಗಳ ಬಾಡಿಗೆ ಕಾರ್ಯಕರ್ತರ ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರಿಲ್ಲ. ಹೀಗಾಗಿ ಹೆಚ್ಚಿನ ಮತಗಳ ಅಂತರದಿಂದ ಮತ್ತೊಮ್ಮೆ ಜೋಶಿ ಅವರನ್ನು ಗೆಲ್ಲಿಸುವ ಕಾರ್ಯ ಮಾಡೋಣ ಎಂದರು. ಶಾಸಕರಾದ ಅರವಿಂದ ಬೆಲ್ಲದ ಹಾಗೂ ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿದರು. ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಬಿಜೆಪಿ ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಸೇರಿದಂತೆ ಮುಖಂಡರು ಇದ್ದರು.

800 ಕೋಟಿ ಬಾಕಿ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ವಿದ್ಯುತ್‌ ಉಚಿತವಾಗಿ ನೀಡುತ್ತಿದೆ. ಇದರ ಪರಿಣಾಮ ಸರ್ಕಾರದ ಮೇಲೆ ಆರ್ಥಿಕವಾಗಿ ತುಂಬ ಹೊರೆ ಬಿದ್ದು ಲೋಡಶೆಡ್ಡಿಂಗ್‌ ಪರಿಸ್ಥಿತಿ ಉಂಟಾಗಲಿದೆ. ಕೊನೆಗೆ ವಿದ್ಯುತ್‌ ಸಂಪೂರ್ಣ ಕೊಡಲು ಸಾಧ್ಯವೂ ಆಗದೇ ಇರಬಹುದು. ಈಗಾಗಲೇ ಕರ್ನಾಟಕ ಸರ್ಕಾರ ಕೇಂದ್ರ ಕಲ್ಲಿದ್ದಲು ಇಲಾಖೆಗೆ ರು. 800 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.