ಪುತ್ತೂರು: ಹೌದು... ಸೋಮವಾರ ಪುತ್ತೂರು ಶಾಸಕ ಅಶೋಕ್ ರೈ ಅವರು ತಮ್ಮ ಕಚೇರಿಗೆ ಬಂದಿದ್ದರು, ನೂರಾರು ಮಂದಿಯಿಂದ ಅಹವಾಲು ಸ್ವೀಕರಿಸಿದರು, ಸಂಕಷ್ಟ ಆಲಿಸಿದರು, ಬಹುತೇಕರ ಸಮಸ್ಯೆಗೆ ಸ್ಪಂದಿಸಿದರು, ಸ್ಥಳದಿಂದಲೇ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಪರಿಹರಿಸಿದರು ನಗುತ್ತಲೇ ಇವರು ತಮ್ಮ ಬಳಿ ಬಂದ ಪ್ರತೀಯೊಬ್ಬರಲ್ಲೂ ಮಾತನಾಡಿಸಿದರು. ಬೆಳಗ್ಗೆ ೧೨ರಿಂದಯಿಂದ ರಾತ್ರಿ ೭.೧೫ ರತನಕ ಕಚೇರಿಯಲ್ಲೇ ಇದ್ದರು...ಆದರೆ ಶಾಸಕ ಅಶೋಕ್ ರೈ ಅವರು ಭಾರವಾದ ನೋವನ್ನು ತನ್ನ ಮನಸ್ಸಿನಲ್ಲಿ ಅದುಮಿಟ್ಟು ಇಷ್ಟೆಲ್ಲಾ ಕೆಲಸವನ್ನು ಮಾಡುತ್ತಿದ್ದರು ಎಂದು ಅಲ್ಲಿ ಸೇರಿದ್ದ ಯಾರಿಗೂ ಗೊತ್ತಾಗಲಿಲ್ಲ, ಸಂಕಷ್ಟದ ನಡುವೆ ಜನರ ಸಮಸ್ಯೆಗೆ ಸ್ಪಂದನೆ ಮಾಡಿದ್ದಾರೆ ಎಂದು ಕಚೇರಿಗೆ ಬಂದ ಯಾವ ಸಾರ್ವಜನಿಕರಿಗೂ ಗೊತ್ತಾಗಲಿಲ್ಲ.ಶಾಸಕರ ಪುತ್ರ ಭಾನುವಾರ ಬೆಂಗಳೂರಿನಲ್ಲಿ ನಡೆದ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಜಿಲ್ಲೆಯಿಂದ ಮೂವರು ಬಾಸ್ಕೆಟ್ ಬಾಲ್ ಪಟುಗಳು ಬೆಂಗಳೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಆಟವಾಡುತ್ತಿದ್ದ ವೇಳೆ ಶಾಸಕ ಪುತ್ರನ ಕಾಲು ಟ್ವಿಸ್ಟ್ ಆಗಿ ಎಲುಬು ತುಂಡರಿಸಿತ್ತು. ಪುತ್ರನನ್ನು ಮಂಗಳೂರಿಗೆ ಕರೆದುಕೊಂಡು ಬಂದು ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸೋಮವಾರ ಬೆಳಗ್ಗೆ ೧೦.೩೦ ಕ್ಕೆ ಮಗನ ಕಾಲು ಸರ್ಜರಿಯಾಗಿದೆ. ಪತ್ನಿ ಸುಮಾ ರೈ ಆಸ್ಪತ್ರೆಯಲ್ಲಿದ್ದರು.ತನ್ನ ಮಗನಿಗೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಶಾಸಕರು ಆಸ್ಪತ್ರೆಗೆ ಹೋಬೇಕಿತ್ತು. ಆದರೆ ಅವರು ಭಾನುವಾರ ಇಡೀದಿನ ಪುತ್ತೂರಿನಲ್ಲಿ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು, ಸೋಮವಾರವೂ ಕಚೇರಿಯಲ್ಲಿದ್ದರು.