ಓಕಳಿಪುರದ ಅಷ್ಟಪಥ ಕಾರಿಡಾರ್‌ ಲೋಕಾರ್ಪಣೆ

KannadaprabhaNewsNetwork |  
Published : Mar 14, 2024, 02:03 AM IST
ಸುಭಾಷ್ ನಗರದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆಶವಕುಮಾರ್ ಅನಾವರಣಗೊಳಿಸಿದರು. ಮಲ್ಲಿಕಾರ್ಜುನ ಖರ್ಗೆ, ದಿನೇಶ್‌ ಗುಂಡೂರಾವ್‌, ಬೈರತಿ ಸುರೇಶ್‌ ಇದ್ದರು. | Kannada Prabha

ಸಾರಾಂಶ

ನಗರದ ಪ್ರಮುಖ ಪ್ರದೇಶ ಮತ್ತು ಹೊರ ಜಿಲ್ಲೆಗಳನ್ನು ಸಂಪರ್ಕಿಸುವಲ್ಲಿ ಮುಖ್ಯವಾಗಿರುವ ಓಕಳಿಪುರಂ ಅಷ್ಟಪಥ ಕಾರಿಡಾರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೆಜೆಸ್ಟಿಕ್‌ ಸಮೀಪದ ಓಕಳಿಪುರದ ಅಷ್ಟಪಥ ಕಾರಿಡಾರನ್ನು (ರಾಜೀವ್ ಗಾಂಧಿ ಸಿಗ್ನಲ್ ಮುಕ್ತ ಅಷ್ಟಪಥ ಕಾರಿಡಾರ್) ಬುಧವಾರ ಸಂಚಾರ ಮುಕ್ತಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸುಭಾಷ್ ನಗರದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕಂಚಿನ ಪ್ರತಿಮೆ ಅನಾವರಣಗೊಳಿಸಿದರು.

ರಾಜೀವ್ ಗಾಂಧಿ ಸಿಗ್ನಲ್ ಮುಕ್ತ ಅಷ್ಟಪಥ ಕಾರಿಡಾರ್‌ನಿಂದ ಗಾಂಧಿನಗರ, ಮೆಜೆಸ್ಟಿಕ್, ಬೆಂಗಳೂರು ನಗರ ರೈಲ್ವೆ ನಿಲ್ದಾಣ, ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ ಹಾಗೂ ಮಾಗಡಿ ರಸ್ತೆ ಹೀಗೆ ಬೆಂಗಳೂರು ನಗರ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿದೆ. ಪ್ರಮುಖ ವಸತಿ, ವಾಣಿಜ್ಯ ಹಾಗೂ ಕೈಗಾರಿಕಾ ಪ್ರದೇಶಗಳ ನಡುವಿನ ಏಕೈಕ ಕೊಂಡಿಯಾಗಲಿದೆ.

ಯೋಜನೆಗಾಗಿ ಭೂಸ್ವಾಧೀನಕ್ಕಾಗಿ ₹165.65 ಕೋಟಿ ವೆಚ್ಚ ಮಾಡಲಾಗಿದೆ. ರೈಲ್ವೆ ಕೆಳಸೇತುವೆಗಾಗಿ ಚೆನ್ನೈ ಹಳಿಗಳ ಕೆಳಗೆ ವಾಹನ ಸಂಚಾರಕ್ಕಾಗಿ 4 ಆರ್‌ಸಿಸಿ ಬಾಕ್ಸ್‌ಗಳು, ತುಮಕೂರು ಹಳಿಗಳ ಕೆಳಗೆ 4 ಆರ್‌ಸಿಸಿ ಬಾಕ್ಸ್‌ಗಳ ಅಳವಡಿಕೆ ಮತ್ತು ಪಾದಚಾರಿಗಳಿಗಾಗಿ ಪ್ರತ್ಯೇಕ 2 ಆರ್‌ಸಿಸಿ ಬಾಕ್ಸ್‌ಗಳು, ನಿರ್ಮಾಣವನ್ನು ₹87.60 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ.

ಬಿಬಿಎಂಪಿ ವತಿಯಿಂದ 2 ಫ್ಲೈಓವರ್‌ ಹಾಗೂ ಒಂದು ಕೆಳಸೇತುವೆಯ ನಿರ್ಮಾಣ, ಪಾದಚಾರಿ ಮೇಲು ಸೇತುವೆ ನಿರ್ಮಾಣ, ನೆಲ ಮಟ್ಟದ ರಸ್ತೆಗಳು, ನೆಲಮಟ್ಟದಲ್ಲಿ ಸಣ್ಣ ಸಣ್ಣ ದ್ವೀಪಗಳನ್ನು ನಿರ್ಮಿಸಿ ಗಿಡ ಸಸ್ಯ, ತೋಟಗಾರಿಕೆ ಕೈಗೊಳ್ಳಲಾಗಿದೆ, ಇದ್ದಕ್ಕಾಗಿ ₹102.84 ಕೋಟಿ ವೆಚ್ಚ ಮಾಡಲಾಗಿದೆ.

ಇದೇ ವೇಳೆ ಸುಭಾಷ್ ನಗರದ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ನಿರ್ಮಾಣವಾಗಿರುವ ರಾಜೀವ್ ಗಾಂಧಿ ಅವರ ಕಂಚಿನ ಪ್ರತಿಮೆ ಹಾಗೂ ಸಮಗ್ರ ಜಂಕ್ಷನ್ ಅಭಿವೃದ್ಧಿ ಮಾಡಲಾಗಿದೆ.

ಒಟ್ಟು ಮೊತ್ತ ₹2.65 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಜಂಕ್ಷನ್ ಅಭಿವೃದ್ದಿಗೆ ₹1.40 ಕೋಟಿ, ಕಂಚಿನ ಪ್ರತಿಮೆಗೆ ₹1.25 ಕೋಟಿ ವೆಚ್ಚವಾಗಿದೆ. ರಾಜೀವ್ ಗಾಂಧಿ ಅವರ ಕಂಚಿನ ಪ್ರತಿಮೆಯ ಎತ್ತರ 15 ಅಡಿಗಳು ಇದೆ. ಈ ಜಂಕ್ಷನ್‌ನಲ್ಲಿ ಒಟ್ಟು 4 ರಸ್ತೆಗಳು ಹಾದುಹೋಗುತ್ತಿದ್ದು, ಮುಖ್ಯವಾಗಿ ರಾಜಾಜಿನಗರ ಹಾಗೂ ಮಲ್ಲೇಶ್ವರ ಕಡೆಗೆ ಸಂಪರ್ಕ ಕಲ್ಪಿಸಿಕೊಡುತ್ತದೆ. ಜಂಕ್ಷನ್‌ನಲ್ಲಿ ಪಾದಚಾರಿಗಳು ಹಾಗೂ ಬಸ್ ತಂಗುದಾಣಕ್ಕೆ ಬರುವ ಪ್ರಯಾಣಿಕರು ವಿಶ್ರಮಿಸಲು ವಿಶೇಷವಾಗಿ ವಿನ್ಯಾಸಗೊಳಿಸಿದ ಸುಸಜ್ಜಿತ ಆಸನಗಳ ವ್ಯವಸ್ಥೆ, ಮನರಂಜಿಸುವ ಕಾರಂಜಿಗಳು, ಆಕರ್ಷಕ ವಿದ್ಯುತ್ ದೀಪಗಳ ವ್ಯವಸ್ಥೆ ಹಾಗೂ ಜಂಕ್ಷನ್ ಸುತ್ತಮುತ್ತ ಹಸಿರು ಗಿಡಗಳನ್ನು ನೆಡಲಾಗಿದೆ.

ಈ ವೇಳೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಭೈರತಿ ಸುರೇಶ್, ಮಾಜಿ ಸಚಿವ ಎಚ್.ಎಂ ರೇವಣ್ಣ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.ಪ್ರಮುಖ ಅಂಶಗಳು

*ರಾಜೀವ್‌ ಗಾಂಧಿ ಪ್ರತಿಮೆ ಹಾಗೂ ಜಂಕ್ಷನ್‌ ಅಬಿವೃದ್ಧಿ

-ಒಟ್ಟು ವೆಚ್ಚ: ₹2.65 ಕೋಟಿ

-ರಾಜೀವ್‌ ಗಾಂಧಿ ಕಂಚಿನ ಪ್ರತಿಮೆ ನಿರ್ಮಾಣ

-ಪ್ರತಿಮೆ ಎತ್ತರ 15 ಅಡಿ

- ಜಂಕ್ಷನ್‌ ವಿಸ್ತೀರ್ಣ 495 ಚ.ಮೀ

----

*ಸಿಗ್ನಲ್‌ ಮುಕ್ತ ಕಾರಿಡಾರ್

*ಕಾಮಗಾರಿ ಒಟ್ಟು ವೆಚ್ಚ: ₹356.39 ಕೋಟಿ

*ಅಷ್ಟಪಥ ಕಾರಿಡರ್‌ ಯೋಜನೆಯಲ್ಲಿ 2 ಮೇಲ್ಸೇತುವೆ, 1 ಕೆಳಸೇತುವೆ ಹಾಗೂ 10 ರೈಲ್ವೆ ಕೆಳ ಸೇತುವೆ ನಿರ್ಮಾಣ

*ರಾಜಾಜಿನಗರ ಮತ್ತು ಮಲ್ಲೇಶ್ವರದಿಂದ ರೈಲ್ವೆ ನಿಲ್ದಾಣಕ್ಕೆ ಪ್ರದೇಶಕ್ಕೆ 2 ಮೇಲ್ಸೇತುವೆ, 1 ರೈಲ್ವೆ ಕೆಳ ಸೇತುವೆ ಇದೀಗ ಸಂಚಾರ ಮುಕ್ತ

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ