ಶಿರಸಿ: ಆರೋಪಿಯನ್ನು ಹಿಡಿಯಲು ಹೋದಾಗ ಮೂವರು ಪೊಲೀಸರ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿರಸಿ ತಾಲೂಕಿನ ಮಳಲಿಯ ಅರ್ಜುನ (ಅರುಣ) ಲಕ್ಷ್ಮಣ ಗೌಡ (27) ಆರೋಪಿಯಾಗಿದ್ದು, ಬನವಾಸಿ ಪೊಲೀಸ್ ಠಾಣೆಯ ಸಿಬ್ಬಂದಿ ಜಗದೀಶ ಕೆ., ಮಂಜಪ್ಪ ಪಿ., ಮಂಜುನಾಥ ನಡುವಿನಮನೆ ಗಾಯಾಳುಗಳು.ಅರ್ಜುನನ ವಿರುದ್ಧ ಅತ್ಯಾಚಾರ ಪ್ರಕರಣ ಬನವಾಸಿ ಠಾಣೆಯಲ್ಲಿ ದಾಖಲಾಗಿತ್ತು. ಕೆಲದಿನದ ಹಿಂದೆ ಅರೋಪಿಯನ್ನು ಬಂಧಿಸಲು ಬನವಾಸಿಯ ಪೊಲೀಸರು ಮಳಲಿಗೆ ಹೋದಾಗ ಅರ್ಜುನ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ್ದನು. ಮಂಕಿಯಲ್ಲಿ ದೇಗುಲ ಹುಂಡಿ ಕಳ್ಳತನಹೊನ್ನಾವರ: ತಾಲೂಕಿನ ಮಂಕಿಯ ದೊಡ್ಡಗುಂದ ಮಹಾಸತಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಅಲ್ಲಿನ 2 ಕಾಣಿಕೆ ಹುಂಡಿಗಳನ್ನು ಕದ್ದೊಯ್ದ ಘಟನೆ ಶನಿವಾರ ನಡೆದಿದೆ.ದೊಡ್ಡಗುಂದದ ದೀಪಯ್ಯನ ಮನೆಯ ಕುಟುಂಬದ ಮಹಾಸತಿ ದೇವಸ್ಥಾನಕ್ಕೆ ಊರಿನ ಜನರು ಪೂಜೆ ಮಾಡುತ್ತಾ ಬಂದಿದ್ದರು. ಈ ದೇವಸ್ಥಾನದಲ್ಲಿ 2 ಕಾಣಿಕೆ ಡಬ್ಬಗಳನ್ನು ಇಟ್ಟಿದ್ದರು. ದೇವಸ್ಥಾನಕ್ಕೆ ಬರುವ ಜನರು ಈ ಹುಂಡಿಗಳಲ್ಲಿ ಕಾಣಿಕೆ ಹಣವನ್ನು ಹಾಕುತ್ತಾ ಬಂದಿದ್ದರು.
ಕಳ್ಳರು ದೇವಸ್ಥಾನದ ಒಳಗಡೆ ಹೋಗಿ ಗರ್ಭಗುಡಿಯ ಹೊರೆಗೆ ಇದ್ದ ಕಾಣಿಕೆ ಡಬ್ಬದಲ್ಲಿದ್ದ ಸುಮಾರು ₹30000 ಭಕ್ತರ ಕಾಣಿಕೆ ಹಣ ಸಮೇತ ಕಾಣಿಕೆ ಡಬ್ಬವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.ಕಳ್ಳರ ಪತ್ತೆಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗಣಪತಿ ರಾಮಾ ನಾಯ್ಕ ಮಂಕಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಂಕಿಯಲ್ಲಿ ಕಳ್ಳರ ಹಾವಳಿ ಮಿತಿ ಮೀರಿದ್ದು, ಇತ್ತೀಚೆಗೆ ಬಂಗಾರದ ಅಂಗಡಿ ಕಳ್ಳತನ ನಡೆಸಿ ಲಕ್ಷಾಂತರ ರು. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕದ್ದಿದ್ದರು. ಒಂದಾದ ಮೇಲೊಂದು ಕಳ್ಳತನ ನಡೆಯುತ್ತಿರುವ ಪ್ರಕರಣ ಜನರ ನಿದ್ದೆಗೆಡಿಸಿದೆ.