ಕನ್ನಡಪ್ರಭ ವಾರ್ತೆ ಪಾಂಡವಪುರ
ಶಾಂತಿ ನಗರದ ನಿವಾಸಿ ಶಿಕ್ಷಕಿ ಅನಿತಾ (36) ಗಂಭೀರ ಗಾಯಗೊಂಡಿರುವ ಮಹಿಳೆ. ಘಟನೆ ಸಂಬಂಧ ಆರೋಪಿ, ಪತಿ ಶಿಕ್ಷಕ ನಟರಾಜು (47)ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ನಟರಾಜು ತಾಲೂಕಿನ ರಾಗಿಮುದ್ದನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. ಗಾಯಗೊಂಡಿರುವ ಪತ್ನಿ ಅನಿತಾ ಪಟ್ಟಣದ ನೀಲಗೀರಿಸ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಪತಿ ನಟರಾಜು ಮತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದಿಂದ ಮನೆಯಲ್ಲಿ ಪತಿ, ಪತ್ನಿ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಗುರುವಾರ ರಾತ್ರಿ ಗಲಾಟೆ ನಡೆದಿದೆ. ನಂತರ ಪತ್ನಿ ಅನಿತಾ ಶುಕ್ರವಾರ ಬೆಳಗ್ಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿದ್ಧತೆ ನಡೆಸಿ ಪೂಜೆ ಮಾಡುತ್ತಿದ್ದ ವೇಳೆ ಪತಿ ನಟರಾಜು, ಪತ್ನಿ ಅನಿತಾ ಅವರ ತಲೆಭಾಗಕ್ಕೆ ಕಬ್ಬಿಣದ ಸರಳಿನಿಂದ ಬಲವಾಗಿ ನಾಲ್ಕೈದು ಬಾರಿ ಹೊಡೆದಿದ್ದಾನೆ. ಘಟನೆಯಿಂದ ತೀವ್ರ ರಕ್ತಸ್ರಾವಗೊಂಡ ಅನಿತಾ ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ವಿವೇಕಾನಂದ, ಸಬ್ ಇನ್ಸ್ಪೆಕ್ಟರ್ ಉಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆರೋಪಿ, ಶಿಕ್ಷಕ ನಟರಾಜುನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ದಂಪತಿಗೆ ವಿಶೃತ, ವನದ ಎಂಬ ಇಬ್ಬರು ಮಕ್ಕಳಿದ್ದಾರೆ. ಘಟನೆ ಸಂಬಂಧ ಶಿಕ್ಷಕಿ ಅನಿತಾ ಅವರ ಚಿಕ್ಕಮ್ಮನ ಮಗ ಆರ್.ಅಭಿಲಾಷ್ ನೀಡಿದ ದೂರಿನ ಮೇರೆಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.