ಸುರಪುರದಲ್ಲಿ ಗರಿಗೆದರುತ್ತಿರುವ ವಿಧಾನಸಭೆ ಉಪಚುನಾವಣೆ

KannadaprabhaNewsNetwork |  
Published : Mar 24, 2024, 01:34 AM IST
ನರಸಿಂಹ ನಾಯಕ್‌ (ರಾಜೂಗೌಡ), ಮಾಜಿ ಸಚಿವರು, ಬಿಜೆಪಿ | Kannada Prabha

ಸಾರಾಂಶ

ಶಾಸಕರಾಗಿದ್ದ, ಹಿರಿಯ ಕಾಂಗ್ರೆಸ್ಸಿಗ ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಸುರಪುರ (ಶೋರಾಪುರ- ಎಸ್ಟಿ ಮೀಸಲು) ವಿಧಾನಸಭೆ ಕ್ಷೇತ್ರದ ಚುನಾವಣೆ ಲೋಕಸಭೆ ಚುನಾವಣೆಯ ಜೊತೆಗೇ, ಅಂದರೆ ಮೇ 7ರಂದು ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ, ಇಲ್ಲಿ ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಕಾವು ರಂಗೇರುತ್ತಿದೆ.

ನಾಗರಾಜ್ ನ್ಯಾಮತಿ

ಸುರಪುರ: ಶಾಸಕರಾಗಿದ್ದ, ಹಿರಿಯ ಕಾಂಗ್ರೆಸ್ಸಿಗ ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಸುರಪುರ (ಶೋರಾಪುರ- ಎಸ್ಟಿ ಮೀಸಲು) ವಿಧಾನಸಭೆ ಕ್ಷೇತ್ರದ ಚುನಾವಣೆ ಲೋಕಸಭೆ ಚುನಾವಣೆಯ ಜೊತೆಗೇ, ಅಂದರೆ ಮೇ 7ರಂದು ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ, ಇಲ್ಲಿ ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಕಾವು ರಂಗೇರುತ್ತಿದೆ.

ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ್‌ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಅವರಿಗೆ ಕಾಂಗ್ರೆಸ್‌ ಪಕ್ಷ ಅಧಿಕೃತ ಅಭ್ಯರ್ಥಿಯೆಂದು ಘೋಷಿಸಿದೆ. ಇನ್ನು, ಭಾರತೀಯ ಜನತಾ ಪಕ್ಷದಿಂದ ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಅವರಿಗೇ ಟಿಕೆಟ್‌ ಸಹಜ ಎನ್ನಲಾಗಿದೆ. ಹೀಗಾಗಿ, ಲೋಕಸಭಾ ಚುನಾವಣೆಯ ಕಾಲದಲ್ಲೇ ವಿಧಾನಸಭೆ ಉಪ ಚುನಾವಣೆಯೂ ಬಂದೆರಗಿರುವುದು ಚುನಾವಣಾ ವಾತಾವರಣವನ್ನು ಮತ್ತಷ್ಟೂ ಕಾವೇರಿಸಿದೆ.

ಮತದಾರರ ಮನ-ಮನೆ ಗೆಲ್ಲಲು ನಾಯಕರ ಕಸರತ್ತು:

ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರನ್ನು ತಮ್ಮತ್ತ ಒಲಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮತದಾರರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ತಾವು ಮಾಡಿರುವ ಮತ್ತು ಮುಂದೆ ಮಾಡಲಿರುವ ಕನಸಿನ ಯೋಜನೆಗಳನ್ನು ಜನರ ಮುಂದೆಯಿಡುತ್ತ ಮನವೊಲಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.

ಕಾಂಗ್ರೆಸ್: ಕೆಲದಿನಗಳಿಂದ ಕಾಂಗ್ರೆಸ್ ಕಚೇರಿಯಲ್ಲಿ ಮತ್ತು ಪ್ರಮುಖ ಗ್ರಾಮಗಳಲ್ಲಿ ಸಭೆಗಳನ್ನು ನಡೆಯುತ್ತಿವೆ. ಅಲ್ಲದೆ ರಂಜಾನ್ ಆರಂಭವಾಗಿರುವುದರಿಂದ ಇಫ್ತಾರಕೂಟಗಳಲ್ಲಿ ನಾಯಕರುಗಳು ಕಾಣಿಸಿಕೊಂಡಿದ್ದಾರೆ. ಮದುವೆ, ಗೃಹಪ್ರವೇಶ, ಜಾತ್ರೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಬಿಜೆಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜೂಗೌಡರಿಗೇ ಬಿಜೆಪಿ ಟಿಕೆಟ್ ಎಂಬುದಾಗಿ ಘೋಷಿಸಿದ್ದು, ಅಧಿಕೃತ ಮುದ್ರೆ ಒತ್ತುವುದು ಬಾಕಿಯಿದ್ದು, ಭಾನುವಾರ ಹೆಸರು ಘೋಷಣೆ ಸಾಧ್ಯೆತೆಯಿದೆ ಎನ್ನಲಾಗಿದೆ. ಬಿಜೆಪಿ ನಾಯಕರು ಹುಣಸಗಿ ಮತ್ತು ಸುರಪುರದಲ್ಲಿ ಮುಖಂಡರು, ನಾಯಕರ ಸಭೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಬೂತ್‌ ಮಟ್ಟದ ಏಜಂಟರ್ ಸಭೆ, ಕಾರ್ಯಕರ್ತರ ಸಭೆಗಳು ಜರುಗುತ್ತಿವೆ. ಬಿಜೆಪಿ ನಾಯಕರು 15 ದಿನಗಳಿಂದ ಸಕ್ರೀಯವಾಗಿ ತೊಡಗಿಕೊಂಡು ಸಮಾರಂಭಗಳಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬಿಜೆಪಿ ಮತ್ತು ತಾವು ಮಾಡಿರುವ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

ಇನ್ನು, ತಂದೆ, ಶಾಸಕರಾದ ವೆಂಕಟಪ್ಪ ನಾಯಕರರು ಅಕಾಲಿಕ ಮರಣ ಹೊಂದುತ್ತಾರೆಂದು ಯಾರು ಭಾವಿಸಿರಲಿಲ್ಲ. ಇದು ಸಾಕಷ್ಟು ನೋವು ತಂದಿದೆ. ಕಾಂಗ್ರೆಸ್ ಕಾರ್ಯಕರ್ತರು ನಿರಾಶೆಗೆ ಒಳಗಾಗಬೇಕಿಲ್ಲ. ನಿಮ್ಮೊಂದಿಗೆ ವೆಂಕಟಪ್ಪ ನಾಯಕನ ಕುಟುಂಬವಿದೆ ಎಂಬುದು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕರ ಮಾತಾಗಿದೆ.

ಉಪಚುನಾವಣೆಯನ್ನು ನಾವು ಬಯಸಿರಲಿಲ್ಲ. ಸುರಪುರ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮತದಾರರು ಯಾರು ಮರೆತಿಲ್ಲ. ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಒತ್ತಾಯದ ಮೇರೆಗೆ ಚುನಾವಣೆ ಎದುರಿಸಲಿದ್ದೇವೆ ಎಂಬುದು ಮಾಜಿ ಸಚಿವ ರಾಜೂಗೌಡರ ಅಭಿಪ್ರಾಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ರೇಸ್‌ಕೋರ್ಸ್‌ ಕುಣಿಗಲ್‌ಗೆ ಶಿಫ್ಟ್‌ : ಸಂಪುಟ
ಶಕ್ತಿ ಯೋಜನೆ ಫಲಾನುಭವಿ ಸ್ತ್ರೀಯರಿಗೆ ಸ್ಮಾರ್ಟ್‌ಕಾರ್ಡ್‌