ಜೋತಿಷ್ಯ ಅಪೂರ್ವ ಸಂಪತ್ತು: ರಾಘವೇಶ್ವರ ಶ್ರೀ

KannadaprabhaNewsNetwork |  
Published : Sep 09, 2024, 01:34 AM IST
ಅಪೂರ್ವ ಗೋಪ್ರೇಮಿ ಬೆಂಗಳೂರಿನ ಡಾ. ಶ್ಯಾಮ್‍ಪ್ರಸಾದ್ ಅವರ ವ್ಯಕ್ತಿತ್ವವನ್ನು ಮಂಜುನಾಥ ಸುವರ್ಣಗದ್ದೆ ಅನಾವರಣಗೊಳಿಸಿದರು | Kannada Prabha

ಸಾರಾಂಶ

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ರಾಘವೇಶ್ವರ ಶ್ರೀಗಳು 50ನೇ ದಿನವಾದ ಶುಕ್ರವಾರ ಕಾಲ ಸರಣಿಯಲ್ಲಿ ಪ್ರವಚನ ಅನುಗ್ರಹಿಸಿದರು.

ಗೋಕರ್ಣ: ಪೂರ್ವಜರು ಕಾಲಜ್ಞಾನವನ್ನು ಅರಿಯುವ ಜೋತಿಷ್ಯದಂಥ ಅಪೂರ್ವ ಸಂಪತ್ತನ್ನು ಬಿಟ್ಟುಹೋಗಿದ್ದು, ಅದನ್ನು ಅರ್ಥ ಮಾಡಿಕೊಳ್ಳದಿರುವುದು ನಮ್ಮ ದೌರ್ಭಾಗ್ಯ. ವ್ಯಕ್ತಿ ಪ್ರಶ್ನೆ ಕೇಳುವ ಮೊದಲ ಅಕ್ಷರದಿಂದಲೇ ಇಡೀ ಫಲವನ್ನು ತಿಳಿಯಬಹುದಾದ ಅಪೂರ್ವ ವಿಧಾನವೂ ಜೋತಿಷ್ಯದ ಒಂದು ಭಾಗವಾಗಿತ್ತು ಎಂದು ರಾಘವೇಶ್ವರ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು 50ನೇ ದಿನವಾದ ಶುಕ್ರವಾರ ಕಾಲ ಸರಣಿಯಲ್ಲಿ ಪ್ರವಚನ ಅನುಗ್ರಹಿಸಿದರು.ಅ ವರ್ಗ, ಕ ವರ್ಗ, ಚ ವರ್ಗ, ಟ, ತ, ಪ ಹಾಗೂ ಯ ವರ್ಗಗಳ ಮೊದಲ ಅಕ್ಷರಗಳಿಗೆ ಭಿನ್ನ ಫಲವಿದೆ. ಪ್ರಥಮಾಕ್ಷರವನ್ನು ಸೂಚಿಸುವ ಗ್ರಹದ ರಾಶಿಯನ್ನು ಲಗ್ನವಾಗಿ ಪರಿಗಣಿಸಿ ಅದರ ಮೇಲೆ ಫಲ ವಿಶ್ಲೇಷಿಸುವುದು ಅಪೂರ್ವ ಕಲೆ ಎಂದು ಶ್ರೀಗಳು ಬಣ್ಣಿಸಿದರು. ಅ, ಕ, ಚ, ಟ, ತ, ಪ ಮತ್ತು ಯ ವರ್ಗಗಳೊಇಗೆ ಕ್ರಮವಾಗಿ ರವಿ, ಕುಜ, ಶುಕ್ರ, ಬುಧ, ಗುರು, ಶನಿ ಹಾಗೂ ಚಂದ್ರ ಗ್ರಹಗಳು. ಅಂತೆಯೇ ಹೃಸ್ವ ಮತ್ತು ದೀರ್ಘ ಸ್ವರಗಳು, ವ್ಯಂಜನಗಳಿಗೆ ಪ್ರತ್ಯೇಕ ಫಲವನ್ನು ನಿರೂಪಿಸಲಾಗಿದೆ ಎಂದರು.ಅಕ್ಷರಗಣದಲ್ಲಿ ಮೂರು ಅಕ್ಷರಗಳ ಒಂದು ಗಣಕ್ಕೆ ಪ್ರತ್ಯೇಕ ಗುಣವಿದೆ. ಇದರ ಆಧಾರದಲ್ಲೂ ಜ್ಯೋತಿಷ ಚಿಂತನೆ ನಡೆಸಬಹುದು. ಯ ಗಣಕ್ಕೆ ಜಲದೇವತೆ, ಉತ್ತಮ ಸಮೃದ್ಧಿ ಫಲ. ಮ ಗಣಕ್ಕೆ ಸಂಪತ್ತು, ತ ಗಣಕ್ಕೆ ಶೂನ್ಯತೆ, ರ ಗಣಕ್ಕೆ ಮರಣ, ಜ ಗಣಕ್ಕೆ ರೋಗ, ಭ ಗಣಕ್ಕೆ ಪ್ರಖ್ಯಾತ ಕೀರ್ತಿಯ ಫಲವನ್ನು ಹೇಳಿದೆ ಎಂದರು.ವಾಲ್ಮೀಕಿಗಳು ರಾಮನ ಜಾತಕದ ಆರು ಗ್ರಹಗಳನ್ನು ವಿಶಿಷ್ಟವಾಗಿ ಬಣ್ಣಿಸಿದ್ದಾರೆ. ಸೂರ್ಯ, ಚಂದ್ರ, ಮಂಗಳ, ಗುರು, ಶುಕ್ರ, ಶನಿ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ದಾರೆ. ಆದರೆ ಬುಧನ ಉಲ್ಲೇಖವನ್ನು ರಾಮಾಯಣದಲ್ಲಿ ವಾಲ್ಮೀಕಿಯವರು ಮಾಡಿಲ್ಲ. ಆದರೆ ವಾಸ್ತವವಾಗಿ ಲೆಕ್ಕಾಚಾರದ ಪ್ರಕಾರ, ರವಿಯ ಪಕ್ಕದಲ್ಲಿ ಬುಧ ಇದ್ದಾನೆ. ರವಿ, ಬುಧ, ಶುಕ್ರ ಜತೆಗೆ ಇರುವುದರಿಂದ ರವಿ ಜತೆಗೆ ಇರುತ್ತಾನೆ ಅಥವಾ ಹಿಂದಿನ ಇಲ್ಲವೇ ಮುಂದಿನ ಮನೆಯಲ್ಲಿದ್ದಾನೆ ಎಂದರು.ಅಪರೂಪದ ಗೋಪ್ರೇಮಿ, ವೈದ್ಯ ಶ್ಯಾಂಪ್ರಸಾದ್ ವ್ಯಕ್ತಿತ್ವ ಶುಕ್ರವಾರ ಅನಾವರಣವಾಗಿದೆ. ಗೋವಿಗಾಗಿ, ಗುರುವಿಗಾಗಿ, ಸತ್ಕಾರ್ಯಕ್ಕಾಗಿ ಬೇಡುವ ಹವ್ಯಾಸ ತುಂಬಾ ಔಚಿತ್ಯಪೂರ್ಣ. ಜಾತಕದಲ್ಲಿ ಬೇಡುವ ಯೋಗವಿದ್ದರೆ, ಈ ರೀತಿಯಲ್ಲಿ ಬರಬೇಕು. ಸಾಡೇಸಾತ್ ಶನಿ ಕಾಟದಿಂದ ಮನೆಬಿಟ್ಟು ಹೊರಟು ಹೋಗುವ ಸಂದರ್ಭ ಬರುತ್ತದೆ. ಕೆಲವರಿಗೆ ಅದು ಒಳ್ಳೆಯ ರೀತಿಯಲ್ಲಿ ಬರುತ್ತದೆ. ಸತ್ಕಾರ್ಯಕ್ಕಾಗಿ ನಡೆದಾಗ ಔಚಿತ್ಯಪೂರ್ಣವಾಗುತ್ತದೆ. ಉದಾಹರಣೆಗೆ ಶ್ರೀರಾಮ ವನವಾಸಕ್ಕೆ ತೆರಳುವ ಸಂದರ್ಭದಲ್ಲಿ ಮನೆ ಬಿಡಬೇಕಾಯಿತು. ಆದರೆ ಇಂದಿಗೂ ರಾಮಾಯಣದ ಅನುಸಂಧಾನವಾಗುತ್ತಿರುವುದು ಅದರ ಮಹತ್ವವನ್ನು ಸಾರುತ್ತದೆ ಎಂದು ಬಣ್ಣಿಸಿದರು.ಅಪೂರ್ವ ಗೋಪ್ರೇಮಿ ಬೆಂಗಳೂರಿನ ಡಾ. ಶ್ಯಾಮ್‍ಪ್ರಸಾದ್ ಅವರ ವ್ಯಕ್ತಿತ್ವವನ್ನು ಮಂಜುನಾಥ ಸುವರ್ಣಗದ್ದೆ ಅನಾವರಣಗೊಳಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಯುವ ಪ್ರಧಾನ ಕೇಶವಪ್ರಕಾಶ್ ಎಂ., ಚಾತುಮಾಸ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಕೇಂದ್ರೀಯ ಸಮಿತಿ ಅಧ್ಯಕ್ಷ ಎಸ್.ಎಸ್. ಹೆಗಡೆ, ವಿವಿವಿ ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಕಾರ್ಯದರ್ಶಿ ಜಿ.ಕೆ. ಮಧು, ಶ್ರೀಶ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...