ಹುಬ್ಬಳ್ಳಿ: ಇಲ್ಲಿನ ಮೂರು ಸಾವಿರ ಮಠದ ಆವರಣದಲ್ಲಿರುವ ಡಾ. ಮೂಜಗಂ ಸಭಾಭವನದಲ್ಲಿ ಆಯೋಜಿಸಿದ್ದ ಸೊಪ್ಪು ಮೇಳ ಭಾನುವಾರ ತೆರೆಕಂಡಿತು. ಎರಡು ದಿನಗಳ ಈ ಮೇಳದಲ್ಲಿ ವಿವಿಧೆಡೆಯಿಂದ 3 ಸಾವಿರಕ್ಕೂ ಅಧಿಕ ಜನರು ಆಗಮಿಸಿ ಮೇಳದ ಸದುಪಯೋಗ ಪಡೆದುಕೊಂಡರು. ಮೇಳದಲ್ಲಿ ಒಟ್ಟು ₹5 ಲಕ್ಷ ವಹಿವಾಟು ನಡೆಯಿತು.
ನಂತರ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಹುಬ್ಬಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಬಾಪುಗೌಡ ಬಿರಾದಾರ, ಇಂತಹ ಮೇಳಗಳನ್ನು ಆಯೋಜಿಸುವ ಮೂಲಕ ಗ್ರಾಹಕರಲ್ಲಿ ಶುದ್ಧ ಆಹಾರದ ಕುರಿತ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಆಯುರ್ವೇದ ತಜ್ಞೆ ಡಾ. ಅನಿತಾ ಕೆಂಭಾವಿ ಮಾತನಾಡಿ, ನಿತ್ಯದ ಆಹಾರದಲ್ಲಿ ಪೋಷಕಾಂಶಯುಕ್ತ ಸೊಪ್ಪುಗಳ ಬಳಕೆ ಕಡಿಮೆಯಾಗುತ್ತಿದೆ. ಶರೀರವು ಸದೃಢವಾಗಿ ಇರಬೇಕಾದರೆ ಸೊಪ್ಪುಗಳ ಸೇವನೆ ಅತ್ಯಗತ್ಯ ಎಂದರು.ಸಹಜ ಸಮೃದ್ಧ ಮುಖ್ಯಸ್ಥ ಜಿ. ಕೃಷ್ಣ ಪ್ರಸಾದ್, ಶಿವಮೊಗ್ಗದ ಮುರಳೀಧರ ಗುಂಗುರಮಳೆ, ಶಾಂತಕುಮಾರ, ಹುಬ್ಬಳ್ಳಿ ರೋಟರಿ ಕ್ಲಬ್ ಕಾರ್ಯದರ್ಶಿ ಎ.ವಿ. ಸಂಕನೂರ ಸೇರಿದಂತೆ ಹಲವರಿದ್ದರು.
ಚಿತ್ರಕಲಾ ಸ್ಪರ್ಧೆ ವಿಜೇತರುಸೊಪ್ಪಿನ ಚಿತ್ರಕಲಾ ಸ್ಪರ್ಧೆಯಲ್ಲಿ 1ರಿಂದ 4ನೇ ತರಗತಿ ವಿಭಾಗದಲ್ಲಿ ಪ್ರಿಯಲ್ ಕಬಾಡೆ (ಪ್ರಥಮ), ಕುಮುದಾ ಟಿ. ಬಸವ (ದ್ವಿತೀಯ), ನಿಹಾರಿಕಾ ಮುರುಗೋಡ (ತೃತೀಯ) ಹಾಗೂ ನಿಖಿತಾ (ಪ್ರೋತ್ಸಾಹಕರ) ಬಹುಮಾನ ಪಡೆದರು. 5ರಿಂದ 7ನೇ ತರಗತಿ ಒಳಗಿನ ವಿಭಾಗದಲ್ಲಿ ಭುವನ ಟಿ. (ಪ್ರಥಮ), ಸಾನ್ವಿ ಯರಗುಪ್ಪ (ದ್ವಿತೀಯ), ಸಂಜನಾ ಪಾಟೀಲ(ತೃತೀಯ), ಶಿವು ಪ್ರದೀಪ್, ಕನಿಕ ಕೆ. ಹಾಗೂ ನಿಖಿತಾ ಪ್ರೋತ್ಸಾಹಕರ ಬಹುಮಾನ ಗಳಿಸಿದರು. ಚಿತ್ರಕಲಾ ಶಿಕ್ಷಕರಾದ ರತ್ನ ಮುರಶಿಳ್ಳಿ ಹಾಗೂ ಶಿಲ್ಪಕಲಾ ಬಂಕಾಪುರ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.