ಹಾವೇರಿ:ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾಜಿ ಪ್ರಧಾನಿ, ಭಾರತರತ್ನ ದಿ. ಅಟಲ್ ಬಿಹಾರಿ ವಾಜಪೇಯಿ 100ನೇ ಜನ್ಮದಿನವನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ವೇಳೆ ಜಿಲ್ಲಾಧ್ಯಕ್ಷರಾದ ಅರುಣಕುಮಾರ ಪೂಜಾರ ಮಾತನಾಡಿ, ಅಟಲ್ ಜೀ ಅವರು ವಿಶ್ವ ಕಂಡ ಮಹಾನ್ ವ್ಯಕ್ತಿ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯತೆಯ ವಿಚಾರಧಾರೆಗಳನ್ನು ಪ್ರಚಾರಗೊಳಿಸಿ ಸ್ವಾತಂತ್ರ್ಯಕ್ಕಾಗಿ ಕಾರ್ಯಮಾಡಿ ಸ್ವ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷದ ನೀತಿಗಳನ್ನು ವಿರೋಧಿಸಿದರು. ಅಟಲ್ ಜೀ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತದ ರಾಜಕೀಯ ನೀತಿ ಬದಲಾಯಿಸಿ ಸ್ವದೇಶಿ ನೀತಿಗೆ ಪ್ರಾಧಾನ್ಯತೆ ನೀಡಿದರು ಎಂದರು.ಚತುಷ್ಪಥ ಹಾಗೂ ಸರ್ವಶಿಕ್ಷಣ ಅಭಿಯಾನ ಹಾಗೂ ಪೊಕ್ರಾನ್ ಅಣುಸ್ಫೋಟದ ಮೂಲಕ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಕ್ತಿಶಾಲಿಯಾಗಿ ಮಾಡಿದರು. ಭಯೋತ್ಪಾದನೆ ತಡೆ ಕಾಯ್ದೆ ಜಾರಿಗೆ ತರುವ ಮೂಲಕ ಅಟಲ್ ಜೀ ಅವರು ಭಾರತಕ್ಕೆ ಹೊಸ ಆಯಾಮ ನೀಡಿದರು. ಅಟಲ್ ಜೀ ಅವರು ಪ್ರಸಿದ್ಧ ಕವಿ ಹಾಗೂ ಬರಹಗಾರರು ಆಗಿದ್ದರು ಎಂದು ಸ್ಮರಿಸಿದರು. ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ಭಾರತದ ಆರ್ಥಿಕಾಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ವಹಿಸಿದರು. ಇವರು ಗ್ರಾಮೀಣ ಬಡಜನರ ಆರ್ಥಿಕ ಸಬಲೀಕರಣದ ಸದುದ್ದೇಶ ಹೊಂದಿ, ಉತ್ತಮ ಗ್ರಾಮೀಣ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ, ಮಾನವ ಸಂಪನ್ಮೂಲಗಳ ಬೆಳೆವಣಿಗೆಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು ಎಂದು ತಿಳಿಸಿದರು.
ರಾಜಕೀಯ ಸ್ಥಿರತೆಯ ಪ್ರಯತ್ನ, ಆರ್ಥಿಕ ಬೆಳೆವಣಿಗೆಯಲ್ಲಿ ಪ್ರಗತಿ, ಉತ್ತಮ ಹೆದ್ದಾರಿಗಳ ನಿರ್ಮಾಣ, ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉತ್ತಮ ವಿದೇಶಾಂಗ ಸಂಬಂಧಗಳು ಇವರ ಸರ್ಕಾರದ ಪ್ರಮುಖ ಸಾಧನೆಗಳೆನ್ನಬಹುದು. ಭಾರತೀಯ ಸಾರ್ವಜನಿಕ ಜೀವನದಲ್ಲಿ ಅಜಾತಶತ್ರು ಎಂದೇ ಹೆಸರು ಮಾಡಿದ್ದಾರೆ. ಮಾತುಗಾರಿಕೆಯಲ್ಲಿ ಅವರನ್ನು ಮೀರಿಸುವರಿಲ್ಲ. ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿ ಇತಿಹಾಸ ನಿರ್ಮಿಸಿದರು ಎಂದು ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ವಿದ್ಯಾ ಶೆಟ್ಟಿ, ಸುರೇಶ ಹೊಸಮನಿ, ರಾಜಶೇಖರ ಕಟ್ಟೆಗೌಡ್ರ, ನಂಜುಂಡೇಶ ಕಳ್ಳೇರ, ಡಾ. ಸಂತೋಷ ಆಲದಕಟ್ಟಿ, ವೆಂಕಟೇಶ ನಾರಾಯಣಿ, ವೀರಣ್ಣ ಅಂಗಡಿ, ಗಿರೀಶ ತುಪ್ಪದ, ನೀಲಪ್ಪ ಚಾವಡಿ, ಮುರಗೆಪ್ಪ ಶೆಟ್ಟರ, ಪ್ರಭು ಹಿಟ್ನಳ್ಳಿ, ರಮೇಶ ಪಾಲನಕರ, ಶಿವಯೋಗಿ ಹುಲಿಕಂತಿಮಠ, ಲಲಿತಾ ಗುಂಡೇನಹಳ್ಳಿ, ಚನ್ನಮ್ಮ ಬ್ಯಾಡಗಿ, ಲತಾ ಬಡ್ನಿಮಠ, ರೋಹಿಣಿ ಪಾಟೀಲ, ಪಕ್ಕಿರೇಶ ಹಾವನೂರ, ಮಂಜುನಾಥ ಹುಲಗೂರ, ಗುಡ್ಡಪ್ಪ ಭರಡಿ, ಮಂಜುನಾಥ ಮಡಿವಾಳರ, ವಿಜಯಕುಮಾರ ಕುಡ್ಲಪ್ಪನವರ, ಶಂಭುಲಿಂಗಪ್ಪ ಹತ್ತಿ, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.