ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

(ಟಿಂಟ್‌ ಬಾಕ್ಸ್‌)ದಲಿತರ ಮೇಲೆ ದೌರ್ಜನ್ಯ ಎಸಗಿದರೆ ನಿರ್ದಾಕ್ಷಿಣ್ಯ ಕ್ರಮ

KannadaprabhaNewsNetwork | Published : Jul 22, 2024 1:16 AM

ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ಹಾಗೂ ಶೋಷಣೆಗಳು ನಡೆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಕೆ.ಸಿ.ಗಿರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ಹಾಗೂ ಶೋಷಣೆಗಳು ನಡೆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಕೆ.ಸಿ.ಗಿರಿ ತಿಳಿಸಿದರು.

ಪಟ್ಟಣದ ಪುರ ಪೊಲೀಸ್ ಠಾಣೆ ಕಚೇರಿಯಲ್ಲಿ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ವ್ಯಾಪ್ತಿ ಸೇರಿದಂತೆ ಎಲ್ಲೇ ಆಗಲಿ ದಲಿತ ಸಮುದಾಯದ ಮೇಲೆ ದೌರ್ಜನ್ಯ ನಡೆದರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ದಲಿತ ಸಮುದಾಯದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿವೆ. ಅದನ್ನು ಅರ್ಹ ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಯೋಜನೆಗಳು ಸಮರ್ಪಕವಾಗಿ ದೊರೆಯದೆ ಇರುವುದರ ಕುರಿತು ಮಾಹಿತಿ ನೀಡಿದರೆ, ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಗ್ರಾಮಗಳಲ್ಲಿ ದಲಿತ ಸಮುದಾಯದವರಿಗೆ ಹೋಟೆಲ್‌ಗಳಲ್ಲಿ, ಸೆಲೂನ್‌ಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರೆ ಕೂಡಲೇ ಸ್ಥಳಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ನೀವು ನೀಡುವ ಮಾಹಿತಿ ಆಧರಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸದಾ ನಿಮ್ಮ ಜತೆ ಇರಲಿದೆ ಎಂದು ಭರವಸೆ ನೀಡಿದರು.

ನಗರ ವೃತ್ತ ನಿರೀಕ್ಷಕ ರವಿಕಿರಣ್ ಮಾತನಾಡಿ, ನಿಮ್ಮ ಮೇಲೆ ಯಾವುದೇ ರೀತಿಯ ಶೋಷಣೆ ದಬ್ಬಾಳಿಕೆ ನಡೆದರೆ ಅದನ್ನು ಭಯದಿಂದ ಮರೆಮಾಚುವ ಪ್ರಯತ್ನ ಮಾಡಬೇಡಿ. ಶೋಷಣೆಯನ್ನು ತಡೆಯುವ ಕೆಲಸ ಮಾಡದಿದ್ದಲ್ಲಿ ಅದು ಮುಂದುವರಿಯುತ್ತಲೇ ಇರುತ್ತದೆ. ಪೊಲೀಸ್ ಇಲಾಖೆ ಇರುವುದೇ ದೌರ್ಜನ್ಯಗಳನ್ನು ತಡೆಯುವುದಕ್ಕೆ. ಆ ಹಿನ್ನೆಲೆಯಲ್ಲಿ ನಿರ್ಭೀತಿಯಿಂದ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ ಎಂದು ಹೇಳಿದರು.

ಗ್ರಾಮಾಂತರ ವೃತ್ತ ನಿರೀಕ್ಷಕ ಟಿ.ಟಿ.ಕೃಷ್ಣ ಮಾತನಾಡಿ, ತಮ್ಮ ಠಾಣೆಯ ವ್ಯಾಪ್ತಿಗಳಲ್ಲಿ ದಲಿತ ಸಮುದಾಯದ ಮೇಲೆ ಶೋಷಣೆಗಳು ನಡೆದರೆ ಮಾಹಿತಿ ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಇದೇ ವೇಳೆ ದಲಿತ ಮುಖಂಡರು ಹಲವು ಸಮಸ್ಯೆಗಳ ಕುರಿತು ಪೊಲೀಸ್ ಅಧಿಕಾರಿಗಳ ಗಮನ ಸೆಳೆದರು. ನಗರ ಠಾಣೆಯ ಪಿಎಸ್‌ಐ ಹರೀಶ್, ಅಕ್ಕೂರು ಠಾಣೆಯ ಪಿಎಸ್‌ಐ ಬಸವರಾಜು, ಪೂರ್ವ ಠಾಣೆಯ ಪಿಎಸ್‌ಐ ಆಕಾಶ್‌ ಪತ್ತಾರ್ ಇತರರು ಹಾಜರಿದ್ದರು. ಪೊಟೋ೨೧ಸಿಪಿಟಿ೧:

ಚನ್ನಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ದಲಿತ ಸಮುದಾಯದ ಕುಂದುಕೊರತೆ ಸಭೆ ನಡೆಯಿತು.