ಕನ್ನಡಪ್ರಭ ವಾರ್ತೆ ವಿಜಯಪುರ
ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಪೂರ್ಣ ತೋರಿಸದೇ ಸಣ್ಣ ತುಣುಕನ್ನು ಕಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಶಾ ಅವರನ್ನು ಅಂಬೇಡ್ಕರ್ ವಿರೋಧಿ ಎಂದು ಬಿಂಬಿಸುತ್ತಿರುವ ಕಾಂಗ್ರೆಸ್ ನಡೆ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.ಈ ವೇಳೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ ಮಾತನಾಡಿ, ದೇಶದಲ್ಲಿ ತುರ್ತು ಪರಸ್ಥಿತಿ ಹೇರಿದ್ದ ಕುಖ್ಯಾತಿಯ ಕಾಂಗ್ರೆಸ್ ದಲಿತರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸ್ವಲ್ಪವೂ ಗೌರವ ಕೊಡದೆ ಅವಮಾನಿಸಿದೆ. ಕಾಂಗ್ರೆಸ್ ಈಗ ಅಮಿತ್ ಶಾ ಹೇಳಿಕೆಯನ್ನು ಕಟ್ ಮಾಡಿ ಅವಮಾನ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ.ರವಿ ಅವರನ್ನು ಕಾಂಗ್ರೆಸ್ ಸರ್ಕಾರ ಅಸಾಂವಿಧಾನಿಕವಾಗಿ ಹಾಗೂ ಅಗೌರವದಿಂದ ನಡೆಸಿಕೊಳ್ಳುತ್ತಿದೆ. ಇದೀಗ ಕರ್ನಾಟಕದಲ್ಲೂ ತುರ್ತು ಪರಿಸ್ಥಿತಿ ಹೇರಲು ಹೊರಟಿದೆ. ಪ್ರಜಾಪ್ರಭುತ್ವದ ದೇಗುಲದಂತಿರುವ ಸುವರ್ಣಸೌಧಕ್ಕೆ ಗೂಂಡಾಗಳನ್ನು ಛೂ ಬಿಟ್ಟು ಜನಪ್ರತಿನಿದಿಗಳ ಮೇಲೆ ಹಲ್ಲೆ ನಡೆಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ನಾಯಕ ಸಿ.ಟಿ.ರವಿ ಅವರ ಮೇಲೆ ಹಲ್ಲೆ ನಡೆದಿದ್ದರೂ ಪೊಲೀಸ್ ಇಲಾಖೆ ಅವರನ್ನೇ ಬಂಧಿಸಿದೆ. ಆ ಮೂಲಕ ಈ ಭ್ರಷ್ಟ ಸರ್ಕಾರ ಪೊಲೀಸ್ ಇಲಾಖೆಯನ್ನು ಸಹಿತ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಗೂಂಡಾ ರಾಜ್ಯ ನಿರ್ಮಾಣ ಮಾಡಲು ಹೊರಟಿದೆ ಎಂದು ಟೀಕಿಸಿದರು.ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ ನೇಬಗೇರಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಜಾಪ್ರಭುತ್ವ ಉಳಿಸಿ ಗೂಂಡಾ ಕಾಂಗ್ರೆಸ್ ತೊಲಗಿಸಿ ಎಂಬ ಬೃಹತ್ ಜನಾಂದೋಲನ ಹಮ್ಮಿಕೊಳ್ಳುತ್ತಿದ್ದೇವೆ. ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಬೇಷರತ್ ಬಿಡುಗಡೆ ಮಾಡಿ ಕಾಂಗ್ರೆಸ್ ಗೂಂಡಾಗಳನ್ನು ಜೈಲಿಗೆ ಅಟ್ಟುವವರೆಗೂ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ. ಇದು ಬಿಜೆಪಿ ಪಂಥಾಹ್ವಾನ ಎಂದು ಗುಡುಗಿದರು.
ಪ್ರಧಾನ ಕಾರ್ಯದರ್ಶಿ ಮುಳುಗೋಡ ಪಾಟೀಲ್, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಚಿದಾನಂದ ಚಲವಾದಿ, ರಾಜೇಶ್ ತಾವಸೆ, ಲಕ್ಷ್ಮಿ ಕನ್ನೊಳ್ಳಿ, ರಾಘವೇಂದ್ರ ಕಾಫ್ಸೆ, ನಗರ ಮಂಡಳ ಅಧ್ಯಕ್ಷ ಶಂಕರ ಹೂಗಾರ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ, ರಾಜಕುಮಾರ ಗೌಂಡಿ, ಆನಂದ ಮುಚ್ಚಂಡಿ, ಪರಶುರಾಮ ಹೊಸಪೇಟೆ, ಪ್ರವೀಣ ಒಂದಾಲಮಠ, ಅಪ್ಪು ದೇಸಾಯಿ, ರವಿ ಬಿರಾದಾರ, ರವಿಚಂದ್ರ ಉಪನದಿನ್ನಿ, ವಿಠ್ಠಲ ನಡುವಿನಕೆರೆ, ವಿನೋದ ಪತ್ತಾರ, ಸ್ವರೂಪ ಸಪ್ತಾಳೆ, ಅನಿಲ ಉಪ್ಪಾರ, ಕಿರಣ ರಾಥೋಡ, ರಾಹುಲ ಹಿರೇಮಠ, ವಿಟ್ಟಲ ಕಾಗರ್, ಸುಚಿತ್ರ ಜಾಧವ, ಸುವರ್ಣ ಕುರ್ಲೆ, ರಾಜಲಕ್ಷ್ಮಿ ಪ್ರತನ್ನವರ, ವಿನೋದ್ ತೆಲಸಂಗ ಇದ್ದರು.