ಚಿಕ್ಕಬಳ್ಳಾಪುರ ಗುಡಿಸಲು ಮುಕ್ತ ತಾಲೂಕನ್ನಾಗಿಸಲು ಯತ್ನ

KannadaprabhaNewsNetwork | Published : Feb 18, 2025 12:30 AM

ಸಾರಾಂಶ

ನಗರ ಮತ್ತು ಗ್ರಾಮಾಂತರದ ರಸ್ತೆಗಳ ಅಭಿವೃದ್ದಿಗಾಗಿ 50 ಕೋಟಿ ಅನುದಾನ ತಂದಿದ್ದು, ಶೀಘ್ರದಲ್ಲೇ ಗುದ್ದಲಿ ಪೂಜೆ ನೆರವೇರಿಸಲಾಗುವುದು. ವಿಜಯ ನಗರದ ಅರಸರಾದ ಶ್ರೀ ಕೃಷ್ಣದೇವರಾಯರ ವಿಗ್ರಹ ಸ್ಥಾಪನೆ ಮತ್ತು ಕನ್ನಡ ಭವನಕ್ಕೆ ಶ್ರೀ ಕೃಷ್ಣದೇವರಾಯರರ ಕಲಾಭವನ ಎಂದು ನಾಮಕರಣಕ್ಕೆ ಜಿಲ್ಲಾ ಉಸ್ತವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರವರಲ್ಲಿ ಮನವಿ ಮಾಡಲಾಗುವುದು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಗುಡಿಸಲು ಮುಕ್ತ ಕ್ಷೇತ್ರವನ್ನಾಗಿಸಲು ನಿರ್ಧರಿಸಿದ್ದು, ಅದಕ್ಕಾಗಿ ವಸತಿ ಸಚಿವ ಜಮೀರ್ ಅಹಮ್ಮದ್‌ ಅವರಿಂದ ಈಗಾಗಲೇ 3 ಸಾವಿರ ವಸತಿಗಳನ್ನು ಮಂಜೂರು ಮಾಡಿಸಲಾಗಿದೆ. ಇನ್ನೂ ಹೆಚ್ಚುವರಿಯಾಗಿ 1000 ವಸತಿಗಳಿಗೆ ಮನವಿ ಮಾಡುತ್ತೇನೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದರು.

ತಾಲೂಕಿನ ಎಸ್.ಗೊಲ್ಲಹಳ್ಳಿ ಗ್ರಾಮಪಂಚಾಯಿತಿಯ ಗೊಲ್ಲದೊಡ್ಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ನೂತನ ಅಂಬೇಡ್ಕರ್ ಭವನ, ಅಂಗನವಾಡಿ ಕಟ್ಟಡ ಮತ್ತು ಸರಕಾರಿ ಶಾಲೆ ನವೀಕರಣ ಸೇರಿ ಒಟ್ಟು 50 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಎತ್ತಿನಹೊಳೆಗೆ ₹480 ಕೋಟಿ

ಈ ಬಾರಿಯ ಬಜೆಟ್ ನಲ್ಲಿ ಕ್ಷೇತ್ರಕ್ಕೆ 480 ಕೋಟಿ ರು.ಗಳನ್ನು ಕೇಳಿದ್ದು ಎತ್ತಿನ ಹೊಳೆ ಕಾಮಗಾರಿಗೆ ಬಳಸಲಾಗುವುದು. ಅದೇ ರೀತಿ ಎತ್ತಿನ ಹೊಳೆ ನೀರನ್ನು ಜಕ್ಕಲ ಮಡುಗು ಜಲಾಶಯಕ್ಕೆ ಹರಿಸಲು ಅದರ ಎತ್ತರ ಹೆಚ್ಚಿಸಲು ತೀರ್ಮಾನಿಸಲಾಗಿದೆ. ನೆರೆಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ರನ್ನು ಭೇಟಿಯಾಗಿ ಅನುಮತಿ ಪಡೆಯುವುದಾಗಿ ತಿಳಿಸಿದರು.

ನಗರ ಮತ್ತು ಗ್ರಾಮಾಂತರದ ರಸ್ತೆಗಳ ಅಭಿವೃದ್ದಿಗಾಗಿ 50 ಕೋಟಿ ಅನುದಾನ ತಂದಿದ್ದು, ಶೀಘ್ರದಲ್ಲೇ ಗುದ್ದಲಿ ಪೂಜೆ ನೆರವೇರಿಸಲಾಗುವುದು. ವಿಜಯ ನಗರದ ಅರಸರಾದ ಶ್ರೀ ಕೃಷ್ಣದೇವರಾಯರ ವಿಗ್ರಹ ಸ್ಥಾಪನೆ ಮತ್ತು ಕನ್ನಡ ಭವನಕ್ಕೆ ಶ್ರೀ ಕೃಷ್ಣದೇವರಾಯರರ ಕಲಾಭವನ ಎಂದು ನಾಮಕರಣಕ್ಕೆ ಜಿಲ್ಲಾ ಉಸ್ತವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರವರಲ್ಲಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.

100 ಕ್ಕೂ ಹೆಚ್ಚು ಅರ್ಜಿ ಸ್ವೀಕಾರ

ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಸುಮಾರು 100 ಕ್ಕೂ ಹೆಚ್ಚು ಅರ್ಜಿಗಳನ್ನು ಗ್ರಾಮಸ್ಥರಿಂದ ಸ್ವೀಕರಿಸಲಾಗಿದೆ. ಪ್ರಧಾನವಾಗಿ ಪಿಂಚಣಿ, ವೃದ್ಧಾಪ್ಯವೇತನ, ಭಾಗ್ಯಲಕ್ಷ್ಮಿ ಹಣ ಬ್ಯಾಂಕಿನಲ್ಲಿ ವಿಳಂಭ,ನಿವೇಶನ ಕೊಡಿ, ಖಾತಾ ಸಮಸ್ಯೆ ಪರಿಹರಿಸಿ,ಸ್ಮಶಾಸನಕ್ಕೆ ರಸ್ತೆಯಿಲ್ಲ, ಆನಾರೋಗ್ಯವಿದೆ ಚಿಕಿತ್ಸೆಗೆ ನೆರವು ಕೋರಿರುವ ಅರ್ಜಿಗಳು ಬಂದಿವೆ.ಗೊಲ್ಲದೊಡ್ಡಿ ಗ್ರಾಮದಲ್ಲಿ ಅಂಬೇಡ್ಕರ್ ಭವನ,ಅಂಗನವಾಡಿ,ಸರ್ಕಾರಿ ಶಾಲೆ ನವೀಕರಣ ಸೇರಿ 50 ಲಕ್ಷದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ಶಾಸಕರಿಗೆ ಅಹವಾಲು ಸಲ್ಲಿಕೆ

ಗೊಲ್ಲದೊಡ್ಡಿ ಗ್ರಾಮದ ದೇವಾಲಯದ ಮುಂಭಾಗ ಚಾಪೆಯ ಮೇಲೆ ಕುಳಿತ ಶಾಸಕರು ಮತ್ತು ಅಧಿಕಾರಿಗಳು ಸಾರ್ವಜನಿಕರಿಗೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಅಹವಾಲು ಸಲ್ಲಿಸಿ ಕಷ್ಟಗಳನ್ನು ಹೇಳಿಕೊಂಡರು. ಅಹವಾಲು ಸ್ವೀಕರಿಸಿದ ಶಾಸಕರು ಪರಿಹಾರ ಆಗಬಹುದಾದ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.

ಈ ವೇಳೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ತಹಶೀಲ್ದಾರ್ ಅನಿಲ್,ತಾ ಪಂ ಇಓ ಮಂಜುನಾಥ್,ಟಿಹೆಚ್ಒ ಮಂಜುಳ,ಎಡಿಎಲ್ ಆರ್ ವಿವೇಕ್ ಮಹದೇವ್, ಕೃಷಿ ಸಹಾಯಕ ನಿರ್ದೇಶಕ ಮುನಿರಾಜು, ಕೆಪಿಸಿಸಿ ಪ್ರದಾನಕಾರ್ಯದರ್ಶಿ ರಾಜ್ ಕುಮಾರ್, ಮುಖಂಡರಾದ ಅರವಿಂದ, ಎಸ್.ಪಿ.ಶ್ರೀನಿವಾಸ್, ಲಕ್ಷ್ಮೀಪತಿ, ನಾಗಭೂಷಣ್ ಇದ್ದರು.

Share this article