ಕನ್ನಡಪ್ರಭ ವಾರ್ತೆ ಹನೂರು
ಆಸ್ತಿ ತಿದ್ದುಪಡಿ ದಾಖಲೆ ನೀಡದೇ ಇರುವ ಬಗ್ಗೆ ಪೆಟ್ರೋಲ್ಕ್ಯಾನ್ ಜೊತೆ ಬಂದ ವ್ಯಕ್ತಿಗೆ ಒಂದು ಗಂಟೆಯಲ್ಲಿ ಆಸ್ತಿ ಪತ್ರ ನೀಡಿ ಪಟ್ಟಣ ಪಂಚಾಯಿತಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.ಪಟ್ಟಣ ಪಂಚಾಯಿತಿಯಲ್ಲಿ ಆಸ್ತಿ ತಿದ್ದುಪಡಿ ವಿಳಂಬ ಧೋರಣೆ ವ್ಯಕ್ತಿಯೋರ್ವ ಪೆಟ್ರೋಲ್ ಕ್ಯಾನ್ ಜೊತೆ ಕಚೇರಿಗೆ ಆಗಮಿಸಿ ಅಧಿಕಾರಿ, ಸಿಬ್ಬಂದಿ ಬಗ್ಗೆ ಅಕ್ರೋಶ ವ್ಯಕ್ತಪಡಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಜರುಗಿದೆ.ಹನೂರು ಪಪಂ ವ್ಯಾಪ್ತಿಯ ಎರಡನೇ ವಾರ್ಡಿನ ಸೊಪ್ಪಿನ ಕೇರಿ ಬಡಾವಣೆಯ ನಿವಾಸಿ ಸುರೇಶ್ ಕಳೆದ 2 ವರ್ಷಗಳ ಹಿಂದೆ ತಮ್ಮ ಮನೆಯ ಆಸ್ತಿ ತಿದ್ದುಪಡಿ ಕೆಲಸಕ್ಕಾಗಿ ದಾಖಲಾತಿಗಳ ಜೊತೆ ಕಚೇರಿಗೆ ಸಲ್ಲಿಸಿದ್ದು ಪಟ್ಟಣ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಸ್ಪಂದಿಸದೆ ಆಸ್ತಿ ತಿದ್ದುಪಡಿ ಮಾಡಲು ವಿಳಂಬ ಧೋರಣೆ ಅನುಸರಿಸಿದ ಹಿನ್ನೆಲೆಯಲ್ಲಿ ಗುರುವಾರ ಬೇಸತ್ತ ಸುರೇಶ್ ಪೆಟ್ರೋಲ್ ತುಂಬಿದ ಕ್ಯಾನ್ ಸಹಿತ ಕಚೇರಿಗೆ ಬಂದು ಕಚೇರಿಯ ಆವರಣದಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಸಂಧಾನ ಯಶಸ್ವಿ:ಪಟ್ಟಣ ಪಂಚಾಯಿತಿಯಲ್ಲಿ ಆಸ್ತಿ ತಿದ್ದುಪಡಿಗೆ ವಿಳಂಬ ಧೋರಣೆ ಮತ್ತು ಲಂಚಕ್ಕೆ ಬೇಡಿಕೆ ಅಧಿಕಾರಿ ಸಿಬ್ಬಂದಿ ವರ್ಗದವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಸುರೇಶ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿಸುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಸುರೇಶ್ ಅವರನ್ನು ಸಮಾಧಾನಪಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಿ, ಆಸ್ತಿ ತಿದ್ದುಪಡಿಯ ದಾಖಲಾತಿಗಳನ್ನು ಪರಿಶೀಲಿಸಿ ವ್ಯಕ್ತಿಗೆ ನೀಡುವಂತೆ ಸೂಚನೆ ನೀಡಿದರು. ಇದರಿಂದಾಗಿ ಪೊಲೀಸರ ಮನವೂಲಿಕೆಯಿಂದ ಸಾರ್ವಜನಿಕರು ಸಹ ಈ ವೇಳೆಯಲ್ಲಿ ವ್ಯಕ್ತಿಯನ್ನು ಸಮಾಧಾನಪಡಿಸಿದರು.
1 ಗಂಟೆಯಲ್ಲಿ ತಿದ್ದುಪಡಿ ಆಸ್ತಿ ಪತ್ರ ನೀಡಿದ ಪಟ್ಟಣ ಪಂಚಾಯ್ತಿ:ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಪಟ್ಟಣದ ಎರಡನೇ ವಾರ್ಡಿನ ಸುರೇಶ್ ಆಸ್ತಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿ ಪಟ್ಟಣ ಪಂಚಾಯತಿಗೆ ಅಲೆದು ಸುಸ್ತಾದ ಹಿನ್ನೆಲೆಯಲ್ಲಿ ಇಲ್ಲಿನ ಅಧಿಕಾರಿ, ಸಿಬ್ಬಂದಿ ವಿಳಂಬ ಧೋರಣೆ ಮತ್ತು ದುಂಡಾವರ್ತಿಯಿಂದ ನಡೆದುಕೊಂಡಿರುವ ಬಗ್ಗೆ ತಮ್ಮ ಅಕ್ರೋಶ ಹೊರಹಾಕಿದ ಸುರೇಶ್ ಗೆ ಮುಖ್ಯ ಅಧಿಕಾರಿ ಮಹೇಶ್ ಸ್ಪಂದಿಸಿ ಅರ್ಜಿ ಸಲ್ಲಿಸಿದ್ದ ಬಗ್ಗೆ ಪರಿಶೀಲಿಸಿ ಉಳಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಒಂದು ಗಂಟೆಯಲ್ಲಿಯೇ ಸುರೇಶ ಅವರಿಗೆ ಸೇರಿದ ಆಸ್ತಿಯ ತಿದ್ದುಪಡಿ ದಾಖಲೆಗಳನ್ನು ನೀಡುವ ಮೂಲಕ ಕ್ರಮ ಕೈಗೊಂಡಿದ್ದಾರೆ.ಸಾರ್ವಜನಿಕರ ಆಕ್ರೋಶಕ್ಕೆ ಕಾರಣ:
ಪಟ್ಟಣ ಪಂಚಾಯಿತಿಯಲ್ಲಿ ಮಧ್ಯವರ್ತಿಗಳ ವಿಪರೀತ ಹಾವಳಿಯಿಂದ ಇಲ್ಲಿನ ಅಧಿಕಾರಿ, ಸಿಬ್ಬಂದಿ ನೇರವಾಗಿ ಬರುವ ಸಾರ್ವಜನಿಕರಿಗೆ ಸ್ಪಂದಿಸದೆ ಇರುವುದರಿಂದ ಕಳೆದ ಎರಡು ವರ್ಷಗಳಿಂದ ಆಸ್ತಿ ತಿದ್ದುಪಡಿಗೆ ಸುರೇಶ್ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದ್ದರೂ ತಿದ್ದುಪಡಿ ಮಾಡಿ ದಾಖಲೆ ನೀಡದೆ ಇರುವುದರಿಂದ ಇಂತಹ ಘಟನೆಗೆ ಕಾರಣವಾಗಿದೆ. ಹೀಗಾಗಿ ಸಂಬಂಧಪಟ್ಟ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಇಂತಹ ಘಟನೆಗಳು ಜರುಗದಂತೆ ಮತ್ತು ಪಪಂಯಲ್ಲಿ ಸಾರ್ವಜನಿಕರಿಗೆ ಕೆಲಸ ಕಾರ್ಯಗಳು ವಿಳಂಬ ಧೋರಣೆ ಆಗದೆ ನಿಗದಿತ ಸಮಯದಲ್ಲಿ ಕೆಲಸ ಮಾಡಿಕೊಡಲು ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಚನೆ ನೀಡಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.