ಕಾರ್ಕಳ: ಭಾರತವು ಸಂಶೋಧನಾ ಕ್ಷೇತ್ರದಲ್ಲಿ ಲಭ್ಯವಿರುವ ಅನೇಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾದ ಅಗತ್ಯವಿದೆ. ದೇಶದ ಸಂಶೋಧನಾ ವಲಯವು ಕೇವಲ ಕಲಿಕೆಗಷ್ಟೇ ಸೀಮಿತವಾಗದೆ ಜ್ಞಾನ ಸೃಜನಶೀಲತೆಯತ್ತ ಮುನ್ನಡೆಯಬೇಕು ಎಂದು ಸಿಎಸ್ಐಆರ್ – ರಾಷ್ಟ್ರೀಯ ಓಶನೋಗ್ರಫಿ ಸಂಸ್ಥೆ (ಎನ್ಐಒ), ಗೋವಾದ ನಿರ್ದೇಶಕ ಡಾ. ಸುನಿಲ್ ಕುಮಾರ್ ಸಿಂಗ್ ಅಭಿಪ್ರಾಯಪಟ್ಟರು.
ಸಂಶೋಧಕರೂ, ವಿದ್ಯಾರ್ಥಿಗಳೂ ತಮ್ಮ ಅಧ್ಯಯನ ಮತ್ತು ಸಂಶೋಧನಾ ಕಾರ್ಯಗಳನ್ನು ಗುಣಮಟ್ಟದ ಸಂಶೋಧನಾ ಪ್ರಬಂಧಗಳು ಹಾಗೂ ಪೇಟೆಂಟ್ಗಳಾಗಿ ರೂಪಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಬೌದ್ಧಿಕ ಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ. ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು. ಕೇಂದ್ರ ಸರ್ಕಾರವು ಸಂಶೋಧನೆ ಮತ್ತು ನಾವೀನ್ಯತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಪ್ರಧಾನಮಂತ್ರಿ ಸಂಶೋಧನಾ ಫೆಲೊಶಿಪ್ ಸೇರಿದಂತೆ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಪಾನ್ನ ರಿತ್ಸುಮೇಕಾನ್ ವಿವಿಯ ಪ್ರಾಧ್ಯಾಪಕ ಹಾಗೂ ಉಪ ಡೀನ್ ಪ್ರೊ. ಯಸುಹಿರೋ ಶಿಯೋಮಿ, ದಕ್ಷಿಣ ಕೊರಿಯಾದ ಕುನ್ಸಾನ್ ರಾಷ್ಟ್ರೀಯ ವಿವಿಯ ಸ್ಕೂಲ್ ಆಫ್ ಕಂಪ್ಯೂಟರ್ ಅಂಡ್ ಸಾಫ್ಟ್ವೇರ್ ನ ಪ್ರಾಧ್ಯಾಪಕ ಡಾ. ಇನ್ ಹೋ ರಾ, ಈಜಿಪ್ಟ್ನ ಅಲ್–ಅಝರ್ ವಿವಿಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಹೆಶೀಂ ನಬೀಲ್, ಮಲೇಷ್ಯಾ ವಿವಿಯ ಟೆಕ್ನಾಜಿ ಮಲೇಷಿಯ ವಿದ್ಯಾಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಮೊಹಮ್ಮದ್ ಇಬ್ರಾಹಿಂ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿ ಅಮೂಲ್ಯ ವಾದ ಅನುಭವಗಳನ್ನು ಹಂಚಿಕೊಂಡರು ಹಾಗೂ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಅಂತರ್ ಶಿಸ್ತೀಯ ಸಂಶೋಧನೆಯ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿವಿಯ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ ಮಾತನಾಡಿ, ಸಂಘಟನಾ ಸಮಿತಿಯ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪೋಷಿಸುವ ಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಈ ಸಂದರ್ಭ ಕಾನ್ಫರೆನ್ಸ್ ಪ್ರೊಸೀಡಿಂಗ್ಸ್ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಸ್ವಾಗತಿಸಿದರು. ಸಮ್ಮೇಳನದ ಮುಖ್ಯ ಸಂಚಾಲಕ ಮತ್ತು ಡೀನ್ (ಆರ್ ಅಂಡ್ ಡಿ) ಡಾ. ಸುದೇಶ್ ಬೇಕಲ್ ಅವರು ಸಮ್ಮೇಳನದ ಬಗ್ಗೆ ಸಮಗ್ರ ನೋಟವನ್ನು ನೀಡಿದರು. ಸಮ್ಮೇಳನದ ಕಾರ್ಯದರ್ಶಿ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ. ಪ್ರಭಾ ನಿರಂಜನ್ ವಂದಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅನುಷಾ ಆರ್. ಶರತ್ ಹಾಗೂ ಮಾನವಿಕ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಭರತ್ ನಿರೂಪಿಸಿದರು.‘ಐ.ಸಿ.ಇ.ಟಿ.ಇ-೨೦೨೬’ ಮಲ್ಟಿ ಕಾನ್ಫರೆನ್ಸ್ ಅಡಿಯಲ್ಲಿ ಬಯೋಟೆಕ್ನಾಲಜಿ ವಿಭಾಗದ ವತಿಯಿಂದ ‘ಇಂಟರ್ ನ್ಯಾಶನಲ್ ಕಾನ್ಫರೆನ್ಸ್ ಆನ್ ನರ್ಚರಿಂಗ್ ಇನ್ನೋವೇಟಿವ್ ಟೆಕ್ನಾಲಲಾಜಿಕಲ್ ಟ್ರೆಂಡ್ಸ್ ಇನ್ ಎಂಜಿನಿಯರಿಂಗ್- ಬಯೋಸೈನ್ಸ್’ ಎಂಬ ಕಾನ್ಫರೆನ್ಸ್ನ್ನು ಹಮ್ಮಿಕೊಳ್ಳಲಾಗಿತ್ತು. ಸಿವಿಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ‘ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಸಿವಿಲ್ ಎಂಜಿನಿಯರಿಂಗ್ ಟ್ರೆಂಡ್ಸ್ ಆ್ಯಂಡ್ ಚ್ಯಾಲೆಂಜಸ್ ಫಾರ್ ಸಸ್ಟೈನೆಬಿಲಿಟಿ’ ಎಂಬ ಕಾನ್ಫರೆನ್ಸ್, ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಶನ್ ಸೈನ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಕಂಪ್ಯೂಟರ್ ಕಮ್ಯೂನಿಕೇಶನ್ ಎಂಜಿನಿಯರಿಂಗ್, ಎಂಸಿಎ ವಿಭಾಗಗಳ ಜಂಟಿ ಆಶ್ರಯದಲ್ಲಿ ‘ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಂಡ್ ಡೇಟಾ ಎಂಜಿನಿಯರಿಂಗ್’, ಎಲೆಕ್ಟ್ರಿಕಲ್ ವಿಭಾಗದ ವತಿಯಿಂದ ‘ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಅಡ್ವಾನ್ಸಸ್ ಇನ್ ರಿನಿವೇಬಲ್ ಎನರ್ಜಿ ಅಂಡ್ ಎಲೆಕ್ಟ್ರಿಕ್ ವೆಹಿಕಲ್, ಎಲೆಕ್ಟ್ರಾನಿಕ್ಸ್ ವಿಭಾಗದ ‘ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ವಿ.ಎಲ್.ಎಸ್.ಐ, ಸಿಗ್ನಲ್ ಪ್ರೊಸೆಸಿಂಗ್, ಪವರ್ ಎಲೆಕ್ಟ್ರಾನಿಕ್ಸ್, ಐಒಟಿ, ಕಮ್ಯೂನಿಕೇಶನ್ ಅಂಡ್ ಎಂಬೆಡೆಡ್ ಸಿಸ್ಟಮ್ಸ್’, ಮೆಕ್ಯಾನಿಕಲ್ ಹಾಗೂ ರೋಬೋಟಿಕ್ಸ್ ವಿಭಾಗದ ‘ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಸ್ಮಾರ್ಟ್ ಆ್ಯಂಡ್ ಸಸ್ಟೈನೆಬಲ್ ಡೆವಲಪ್ಮೆಂಟ್ಸ್ ಇನ್ ಮೆಟೀರಿಯಲ್ಸ್, ಮ್ಯಾನುಫ್ಯಾಕ್ಚರಿಂಗ್ ಆಂಡ್ ಎನರ್ಜಿ ಎಂಜಿನಿಯರಿಂಗ್’ ಹಾಗೂ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಭಾಗದ ವತಿಯಿಂದ ‘ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಮೆಟೀರಿಯಲ್ಸ್ ಸೈನ್ಸ್ ಅಂಡ್ ಮ್ಯಾತಮೆಟಿಕ್ಸ್ ಫಾರ್ ಅಡ್ವಾನ್ಸ್ಡ್ ಟೆಕ್ನಾಲಜಿ’ ಎಂಬ ವಿಷಯಗಳ ಬಗೆಗೆ ಒಟ್ಟು ೭ ಕಾನ್ಫರೆನ್ಸ್ ಗಳನ್ನು ಹಮ್ಮಿಕೊಳ್ಳಲಾಯಿತು.ಈ ಎರಡು ದಿನಗಳ ಕಾನ್ಫರೆನ್ಸ್ ನ ಅವಧಿಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರುವಾಸಿಯಾದ ವಿವಿಧ ವಿಭಾಗಗಳ ೧೫ ಸಾಧಕರು ದಿಕ್ಸೂಚಿ ಭಾಷಣಗಳನ್ನು ನಡೆಸಿಕೊಡಲಿರುವರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಶೋಧಕರಿಂದ ಗುಣಮಟ್ಟದ ಸಂಶೋಧನಾ ಪ್ರಬಂಧಗಳು ಮಂಡನೆಗೊಳ್ಳಲಿವೆ.