ಎಸ್‌.ಆರ್‌. ಪಾಟೀಲ ಸೇರಿದಂತೆ 12 ಸಾಧಕರಿಗೆ ಅವ್ವ ಪ್ರಶಸ್ತಿ

KannadaprabhaNewsNetwork | Published : Dec 9, 2024 12:48 AM

ಸಾರಾಂಶ

ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ 14ನೇ ಪುಣ್ಯಸ್ಮರಣೆ ಅಂಗವಾಗಿ ಅವ್ವ ಸೇವಾ ಟ್ರಸ್ಟ್‌ ವತಿಯಿಂದ ಡಿ. 15ರಂದು ಬೆಳಗ್ಗೆ 10.30ಕ್ಕೆ 12 ಸಾಧಕರಿಗೆ ಅವ್ವ ಪ್ರಶಸ್ತಿ-2024 ಪ್ರದಾನ

ಹುಬ್ಬಳ್ಳಿ: ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ 14ನೇ ಪುಣ್ಯ​ಸ್ಮ​ರ​ಣೆ ಅಂಗವಾಗಿ ಅವ್ವ ಸೇವಾ ಟ್ರಸ್ಟ್‌ ವತಿಯಿಂದ ಡಿ. 15ರಂದು ಬೆಳಗ್ಗೆ 10.30ಕ್ಕೆ 12 ಸಾ​ಧ​ಕ​ರಿಗೆ ಅವ್ವ ಪ್ರಶಸ್ತಿ-2024 ಪ್ರದಾನ ಮಾಡಲಾಗುವುದು. ಇಲ್ಲಿನ ದೇಶಪಾಂಡೆ ನಗರದ ಗುಜರಾತ್‌ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್‌ ಅಧ್ಯಕ್ಷರೂ ಆಗಿರುವ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನ​ಗ​ರದಲ್ಲಿ ಭಾ​ನು​ವಾರ ಸು​ದ್ದಿ​ಗೋ​ಷ್ಠಿ​ಯಲ್ಲಿ ಮಾ​ತ​ನಾ​ಡಿದ ಅ​ವ​ರು, ಈ ಬಾ​ರಿಯ ಪ್ರ​ಶ​ಸ್ತಿಗೆ ವಿ​ವಿಧ ಕ್ಷೇ​ತ್ರಗಳಲ್ಲಿ ಸಾ​ಧನೆ ಮಾ​ಡಿದ ಒಟ್ಟು 12 ಸಾ​ಧ​ಕ​ರನ್ನು ಆಯ್ಕೆ ಮಾ​ಡ​ಲಾ​ಗಿ​ದೆ ಎಂದ​ರು.

ಹಿ​ರಿಯ ರಾ​ಜ​ಕಾ​ರಣಿ ಎ​ಸ್‌.​ಆ​ರ್‌. ​ಪಾ​ಟೀಲ, ಪ​ತ್ರ​ಕರ್ತ ಚಂದ್ರ​ಕಾಂತ ವಡ್ಡು, ಸಿ​ತಾರ ವಾ​ದಕ ಛೋಟೆ ರ​ಹ​ಮತ್‌ ಖಾ​ನ್‌, ಸಾಹಿತಿ ಸಂಗಮನಾಥ ಲೋಕಾಪುರ, ಗಾಯಕಿ ರೇಖಾ ಹೆಗಡೆ, ಭಾಗವತ ಕೇಶವ ಹೆಗಡೆ ಕೊಳಗಿ, ಉದ್ಯಮಿ ಮಹೇಂದ್ರ ಸಿಂಘಿ, ಬಸವ ತತ್ವ ಪ್ರಚಾರಕ ಎಸ್‌. ಮಹದೇವಯ್ಯ, ಸಮಾಜ ಸೇವಕಿ ರಾಜೇಶ್ವರಿ ಪಾಟೀಲ, ಜಾ​ನಪದ ಕಲಾವಿದ ಬಸವರಾಜ ಶಿಗ್ಗಾಂವಿ, ಸ್ಕೇ​ಟಿಂಗ್‌ ಕ್ರೀ​ಡಾ​ಪಟು ತ್ರಿಶಾ ಜಡಲಾ ಹಾಗೂ ಎಸ್ಸೆ​ಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ ಬಾಗಲಕೋಟೆಯ ಅಂಕಿತಾ ಕೊಣ್ಣೂರ ಅವ್ವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಬಾರಿ ಸ್ಮರಣಿಕೆ ಜತೆಗೆ ₹25 ಸಾವಿರ ನಗದು ಬ​ಹು​ಮಾನ ನೀಡಲಾಗುತ್ತಿದೆ ಎಂದು ನುಡಿದರು.

ಇ​ಳ​ಕಲ್‌ ಚಿತ್ತರಗಿಯ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವ​ಹಿ​ಸುವರು. ಡಿ​ಸಿಎಂ ಡಿ.ಕೆ. ಶಿವಕುಮಾರ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶಸ್ತಿ ಪ್ರದಾನ ಮಾಡುವರು. ಉಪನ್ಯಾಸಕಿ ಅಕ್ಷಯಾ ಗೋಖಲೆ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದ​ರು.

ಸಾ​ಧ​ಕರ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ಪ್ರ​ಕ​ಟ​ಗೊಂಡ ವರದಿ, ಮಾಹಿತಿ ಹಾಗೂ ಸಮಾಜದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದಕ್ಕೊಂದು ಪ್ರತ್ಯೇಕ ಸಮಿತಿ ರಚಿಸಿದ್ದೇವೆ. ಇ​ಲ್ಲಿ​ಯ​ವ​ರೆಗೆ ಅವ್ವ ಸೇವಾ ಟ್ರಸ್ಟ್‌ ವ​ತಿ​ಯಿಂದ 68 ಸಾ​ಧ​ಕ​ರಿಗೆ ಅವ್ವ ಪ್ರ​ಶಸ್ತಿ ಪ್ರ​ದಾನ ಮಾ​ಡ​ಲಾ​ಗಿದೆ ಎಂದ​ರು.

ಸು​ದ್ದಿ​ಗೋ​ಷ್ಠಿ​ಯಲ್ಲಿ ಟ್ರಸ್ಟ್‌ ಕಾ​ರ್ಯ​ದರ್ಶಿ ಶಶಿ ಸಾಲಿ, ಸ​ಹ​ಕಾ​ರ್ಯ​ದ​ರ್ಶಿ ಶ್ರೀಪಾದ ರಾಣೆ, ವೆಂಕಟೇಶ ಬದ್ದಿ, ರಾಜು ದೇವರ ಇದ್ದರು.

Share this article