ಗದಗ: ಮತದಾನ ಪ್ರಮಾಣ ಹೆಚ್ಚಳಕ್ಕೆ ಜನರಲ್ಲಿ ಜಾಗೃತಿ ಮೂಡಿಸುವುದು ತುಂಬಾ ಅವಶ್ಯಕ ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಓ ಮಾಣಿಕರಾವ್ ಪಾಟೀಲ ಹೇಳಿದರು.
ಮೇ 7 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು.ಜತೆಗೆ ಮನೆಯ ಪಕ್ಕದವರಿಗೆ ಮತ್ತು ವಲಸೆ ಹೋದವರಿಗೂ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಗದಗ ಜಿಲ್ಲಾ ಹಾಗೂ ಗದಗ ತಾಲೂಕು ಸ್ವೀಪ್ ಸಮಿತಿ ಸಹಭಾಗಿತ್ವದಲ್ಲಿ ಗದಗ ತಾಲೂಕಿನ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಿ ಮತದಾನಕ್ಕೆ ಸಂಬಂಧಿಸಿದಂತೆ ಬೂತ್ ಲೆವೆಲ್ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ ಸ್ಟಿಕ್ಕರ್ ಅಂಟಿಸಿ,ವೋಟರ್ ಮಾರ್ಗಸೂಚಿ ನೀಡುತ್ತಿದ್ದಾರೆ.ಅವುಗಳನ್ನು ಓದಿಕೊಂಡು ಯಾವುದೇ ಗೊಂದಲಗಳಿಲ್ಲದೇ ಯಾವುದಾದರೊಂದು ಅಧಿಕೃತ ಗುರುತಿನ ಕಾರ್ಡ್ ತೋರಿಸಿ ಮತದಾನ ಮಾಡಬೇಕು ಎಂದರು.
ಸಹಾಯಕ ನಿರ್ದೇಶಕ ಕುಮಾರ ಪೂಜಾರ ಮಾತನಾಡಿ, ಗ್ರಾಮದಲ್ಲಿ ವಲಸೆ ಹೋದ ಮತದಾರರಿಗೆ ಮುಂಚಿತವಾಗಿ ತಿಳಿಸಿ ಅವರನ್ನು ಮತದಾನ ದಿನದಂದು ಗ್ರಾಮಕ್ಕೆ ಬಂದು ಮತ ಚಲಾಯಿಸಲು ತಿಳಿಸಬೇಕು. ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಧೈರ್ಯದಿಂದ ಮತದಾನದ ಹಕ್ಕು ಚಲಾಯಿಸಬೇಕು. ಹೆಚ್ಚೆಚ್ಚು ಮತದಾನ ಆಗುವಂತೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕು ಎಂದರು.ಈ ವೇಳೆ ಪಂಚಾಯತ ಅಭಿವೃದ್ಧಿ ಅಧಿಕಾರಿ, ಪಂಚಾಯತ ಸಿಬ್ಬಂದಿಗಳು,ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರುಗಳು ಹಾಗೂ ವಿವಿಧ ಇಲಾಖೆ ಸಿಬ್ಬಂದಿ ಹಾಜರಿದ್ದರು.