ಪುತ್ತೂರು: ಸನಾತನ ಹಿಂದೂ ಧರ್ಮದ ಮೇಲೆ ನಿರಂತರವಾಗಿ ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ದಾಳಿಗಳು ನಡೆದುಬಂದಿರುವುದು ಇತಿಹಾಸದಲ್ಲಿ ದಾಖಲಾದ ಸತ್ಯ. ಅಂತಹ ದಾಳಿಗಳ ಪರಿಣಾಮಗಳನ್ನು ಹಿಂದೂ ಸಮಾಜ ಇಂದಿಗೂ ಅನುಭವಿಸುತ್ತಿದೆ. ಸನಾತನ ವಿಚಾರಧಾರೆಗಳನ್ನು ತಿಳಿಸಿಕೊಡುವ ಪ್ರಯತ್ನಗಳು ನಡೆಯಬೇಕಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್ ಹೇಳಿದರು.ಭಾನುವಾರ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಆವರಣದಲ್ಲಿ ಶೃಂಗೇರಿಯ ಶ್ರೀ ಶಾರದಾಪೀಠದ ವತಿಯಿಂದ ಶ್ರೀ ಶಂಕರ ಭಗವತ್ಪಾದರ ಜನ್ಮಜಯಂತಿ ಪ್ರಯುಕ್ತ ಆಯೋಜಿಸಲಾದ ಶಂಕರ ವಿಜಯ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.ಬ್ರಿಟಿಷರ ಆಡಳಿತ ಕಾಲದಲ್ಲೂ ನಮ್ಮ ವಿಚಾರಧಾರೆಗಳನ್ನು ಅರಿತುಕೊಳ್ಳುವುದಕ್ಕೆ ಮಾಧ್ಯಮವಾಗಿರುವ ಸಂಸ್ಕೃತ ಭಾಷೆಯ ಅಧ್ಯಯನಾವಕಾಶಗಳು ಸಾಕಷ್ಟಿದ್ದವು. ಆದರೆ ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಸಂಸ್ಕೃತದ ಆದ್ಯತೆ ಕಡಿಮೆಯಾಗುತ್ತಾ ಬಂದುದರ ಪರಿಣಾಮ ನಮ್ಮ ಸನಾತನ ಸಂಗತಿಗಳು ನಮಗಿಂದು ತಿಳಿಯದಂತಾಗಿದೆ. ಭಾರತೀಯರೇ ಭಾರತೀಯ ಉತ್ಕೃಷ್ಟ ಸಂಗತಿಗಳನ್ನು ತಿಳಿಯುವ ಬಗೆಗೆ ಆಸ್ಥೆ ವಹಿಸದಿದ್ದರೆ ಸಮಾಜದ ಬೆಳವಣಿಗೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ. ಉಪಸ್ಥಿತರಿದ್ದರು. ಉಪನ್ಯಾಸಕಿ ಕುಸುಮಾ ಸ್ವಾಗತಿಸಿದರು. ಶಿಕ್ಷಕಿ ಗೌರಿ ವಂದಿಸಿ, ನಿರ್ವಹಿಸಿದರು.
ಲ್ಯಾಪ್ಟಾಪ್, ಟ್ಯಾಬ್ ಒಳಗೊಂಡಂತೆ ಎರಡೂವರೆ ಲಕ್ಷ ರೂಪಾಯಿಗಳೂ ಅಧಿಕ ಮೊತ್ತದ ಬಹುಮಾನಗಳನ್ನು ಈ ಸ್ಪರ್ಧೆ ಒಳಗೊಂಡಿದ್ದು, ವಿಜೇತರಿಗೆ ೭ರಂದು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ನಡೆಯುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಬಹುಮಾನ ವಿತರಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.