- ಶಾಸಕ ಜಿ.ಟಿ. ದೇವೇಗೌಡ ಅಭಿಮತ
ಕನ್ನಡಪ್ರಭ ವಾರ್ತೆ ಮೈಸೂರು
ಆಯುರ್ವೇದವು ಭಾರತದ ವೈದ್ಯ ಪದ್ಧತಿಯಾಗಿದ್ದು, ಇಂದು ವಿಶ್ವಮನ್ನಣೆಯನ್ನು ಪಡೆದುಕೊಂಡಿದೆ. ಆಯುರ್ವೇದಕ್ಕೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.ನಗರದ ಲಿಂಗಾಂಬುದಿಪಾಳ್ಯದಲ್ಲಿ ಆಯುಷ್ ಇಲಾಖೆಯು ಗುರುವಾರ ಆಯೋಜಿಸಿದ್ದ ಆಯುಷ್ ಸೇವಾ ಗ್ರಾಮ ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ಯುದೇವದಕ್ಕೆ ತನ್ನದೆ ಆದ ವಿಶೇಷ ಶಕ್ತಿ ಇದೆ. ಪುರಾತನ ಕಾಲದಲ್ಲಿ ಆರ್ಯುವೇದ ಬಳಸಿಕೊಂಡು ಚಿಕಿತ್ಸೆ ಪಡೆದು ಸಾಧ್ಯವಿಲ್ಲ ಎಂಬುದನ್ನು ಸಾಧಿಸಿರುವ ಕೀರ್ತಿ ಆಯುರ್ವೇದಕ್ಕೆ ಇದೆ ಎಂದರು.
ಆಯುರ್ವೇದದ ಮೂಲಕ ಅನೇಕ ರೋಗಗಳನ್ನು ಗುಣಪಡಿಸುವ ಪದ್ಧತಿ ಯುಗ ಯುಗದಿಂದಲೂ ಇದೆ. ಈ ಪದ್ಧತಿ ಮನಸ್ಸು ಮತ್ತು ದೇಹ ಎರಡನ್ನೂ ಗುಣಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಆದರೆ, ಆಯುರ್ವೇದ ಪದ್ಧತಿ ತಲೆಮಾರುಗಳಿಂದ ಇದ್ದರೂ, ಕೊರೋನಾ ವಕ್ಕರಿಸಿದ ಮೇಲೆ ಸಾಕಷ್ಟು ಜನಪ್ರಿಯವಾಗಿದೆ. ಆದರೆ, ಅರಿವು ಮತ್ತು ಜ್ಞಾನದ ಕೊರತೆಯಿಂದ ಆಯುರ್ವೇದದ ಬಗ್ಗೆ ಕೆಲವು ತಪ್ಪು ಗ್ರಹಿಕೆಗಳಿವೆ. ಆಯುರ್ವೇದ ಬಗ್ಗೆ ನಾವು ತಿಳಿದುಕೊಳ್ಳಬೇಕು, ಈ ನಿಟ್ಟಿನಲ್ಲಿ ಆಯುಷ್ ಇಲಾಖೆ ಕೈಗೊಂಡಿರುವ ಈ ಕಾರ್ಯಕ್ರಮ ಶ್ಲಾಘನಿಯ ಎಂದರು.
ಭಾರತದ ಪಾರಂಪರಿಕ ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳುವುದರಿಂದ, ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಜೊತೆಗೆ ದೇಹ- ಮನಸ್ಸು ಸುಸ್ಥಿತಿಯಲ್ಲಿ ಇರುತ್ತದೆ. ಪ್ರಾಕೃತಿಕ ಆರೋಗ್ಯವನ್ನು ದಯಪಾಲಿಸುವ ನಿಟ್ಟಿನಲ್ಲಿ ಆಯುಷ್ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.